ಕಡುಭ್ರಷ್ಟ ಕಾಂಗ್ರೆಸ್ ಸರ್ಕಾರದ ಲಂಚದಾಹಕ್ಕೆ ಈಗಾಗಲೇ ಹಲವು ಅಧಿಕಾರಿಗಳು ಆತ್ಮಹತ್ಯೆಗೆ ಶರಣಾಗಿರುವುದು ಇನ್ನೂ ಹಚ್ಚ ಹಸಿರಾಗಿದೆ. ಈಗ ಕೃಷಿ ಇಲಾಖೆಯಲ್ಲೂ ಧನದಾಹ ಮಿತಿಮೀರಿದೆ. ಕಲಬುರಗಿ ಜಿಲ್ಲೆಯ ಜೇವರ್ಗಿ ತಾಲೂಕಿನ ಸಹಾಯಕ ಕೃಷಿ ನಿರ್ದೇಶಕರ ಕಚೇರಿಯ ಅಧೀಕ್ಷಕರೊಬ್ಬರು ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎಂದು ಜೆಡಿಎಸ್ ಪಕ್ಷ ಗಂಭೀರ ಆರೋಪ ಮಾಡಿದೆ.
ಕಲಬುರಗಿಯ ಜಂಟಿ ಕೃಷಿ ನಿರ್ದೇಶಕರ ಕಿರುಕುಳ, ಮಾನಸಿಕ ಹಿಂಸೆಯೇ ಕಾರಣ ಎಂದು ಪತ್ರದಲ್ಲಿ ಆರೋಪಿಸಿದ್ದಾರೆ. ಜತೆಗೆ, ವಿಡಿಯೋ ಮಾಡಿ ಅಳಲು ತೋಡಿಕೊಂಡಿರುವ ಅವರು ಜಂಟಿ ಕೃಷಿ ನಿರ್ದೇಶಕ ಸಮದ್ ಪಟೇಲ್, ವಿತರಕ ಗುಪ್ತಾ ಮತ್ತು ಅಪರ ನಿರ್ದೇಶಕ ವೆಂಕಟರಾಮ ರೆಡ್ಡಿ ಇವರು ವರ್ಗಾವಣೆಗಾಗಿ 13-10-2023ರಲ್ಲಿ ₹2.75 ಲಕ್ಷ ವಸೂಲಿ ಮಾಡಿರುವ ಬಗ್ಗೆ ನಿದ್ರೆ ಮಾತ್ರೆಗಳನ್ನು ನುಂಗಿ ಆತ್ಮಹತ್ಯೆಗೆ ಯತ್ನಿಸಿರುವ ಅಧಿಕಾರಿ, ತಾವು ಮಾಡಿರುವ ವಿಡಿಯೋದಲ್ಲಿ ಬಾಯ್ಬಿಟ್ಟಿದ್ದಾರೆ.
ವಿಜಯಪುರ ಜಿಲ್ಲೆಯ ಕೃಷಿ ಇಲಾಖೆಯ ಉಪ ನಿರ್ದೇಶಕರ ಕಚೇರಿಗೆ ವರ್ಗಾವಣೆ ಮಾಡಲು ₹2 ಲಕ್ಷ ಬೇಡಿಕೆ ಇಟ್ಟು ವರ್ಗಾವಣೆ ಮಾಡದೇ ಮಾನಸಿಕವಾಗಿ ಚಿತ್ರಹಿಂಸೆ ಕೊಟ್ಟಿದ್ದಾರೆ ಎಂದು ಆರೋಪಿಸಿದ್ದಾರೆ.
ಕೃಷಿ ಸಚಿವರಾದ ಎನ್.ಚಲುವರಾಯಸ್ವಾಮಿ ಹಾಗೂ ಸಿಎಂ ಸಿದ್ದರಾಮಯ್ಯ ಅವರೇ.. ನಿಮ್ಮ ಭ್ರಷ್ಟ ಸರ್ಕಾರದ ಲಂಚದಾಹ ವೈರಸ್ಸಿನಂತೆ ವ್ಯಾಪಕವಾಗಿದೆ. ವರ್ಗಾವಣೆ ದಂಧೆಯಿಂದ ಅಧಿಕಾರಿಗಳು ಆತ್ಮಹತ್ಯೆಯ ಹಾದಿ ಹಿಡಿಯುತ್ತಿರುವುದು ನಿಮ್ಮ ದುರಾಡಳಿತಕ್ಕೆ ಸಾಕ್ಷಿಯಾಗಿದೆ ಎಂದು ಜೆಡಿಎಸ್ ಪಕ್ಷವು ಟ್ವೀಟ್ ಮಾಡಿದೆ.