ಕೇಂದ್ರ ಸರ್ಕಾರದ ಬಜೆಟ್ ವಿರೋಧಿಸಿ ಅಖಿಲ ಭಾರತ ಕಿಸಾನ್ ಸಭಾ ಕರೆ ನೀಡಿದ್ದ ಕರಾಳ ದಿನದ ಅಂಗವಾಗಿ ಕರ್ನಾಟಕ ಪ್ರಾಂತ ರೈತ ಸಂಘದ ಕಾರ್ಯಕರ್ತರು ಮಳವಳ್ಳಿ ಪಟ್ಟಣದ ಅನಂತ್ರಾಂ ವೃತ್ತದಲ್ಲಿ ಪ್ರಧಾನಿ ನರೇಂದ್ರಮೋದಿ ಅವರ ಪ್ರತಿಕೃತಿ ದಹಿಸಿ ಪ್ರತಿಭಟನೆ ನಡೆಸಿದರು.
ಕರ್ನಾಟಕ ಪ್ರಾಂತ ರೈತ ಸಂಘದ ಅಧ್ಯಕ್ಷರಾದ ಎನ್ ಎಲ್ ಭರತ್ರಾಜ್ ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿ, ಬಡವರು ರೈತರು ಕಾರ್ಮಿಕರು ಹಾಗೂ ಸಣ್ಣ ವ್ಯಾಪಾರಸ್ಥರ ಮೇಲೆ ಮೋದಿ ಬಜೆಟ್ ದಾಳಿ ನಡೆಸಿದೆ. ಆರೋಗ್ಯ ಶಿಕ್ಷಣ ಮತ್ತು ಸಾರ್ವಜನಿಕ ವಲಯಕ್ಕೆ ಹಣ ಕಡಿತ ಮಾಡಿ ಸೇವಾ ವಲಯಗಳನ್ನು ಹಂತ ಹಂತವಾಗಿ ದಿವಾಳಿ ಮಾಡುತ್ತಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮೋದಿ ಸರ್ಕಾರ ಅಧಿಕಾರಿಕೆ ಬಂದ ಮೇಲೆ ಜಾಗತಿಕ ಬಡತನ ಸೂಚ್ಯಂಕದಲ್ಲಿ ಭಾರತದ ಸ್ಥಾನ 55 ರಿಂದ 107ನೇ ಸ್ಥಾನಕ್ಕೆ ಕುಸಿದಿದೆ, ನಿರುದ್ಯೋಗ ಪ್ರಮಾಣ ಶೇ. 42 ರಷ್ಟಾಗಿದೆ, ಭಾರತ ದೇಶದ ಸಾಲ 1.75 ಲಕ್ಷ ಕೋಟಿಗೆ ಮುಟ್ಟಿದೆ, ಆರ್ಥಿಕ ಅಸಮಾನತೆ ಹೆಚ್ಚಾಗಿ ಶೇಕಡ 10 ರಷ್ಟು ಶ್ರೀಮಂತರ ಆಸ್ತಿ ದೇಶದ 74%ರಷ್ಟು ಸಂಪನ್ಮೂಲಕ್ಕೆ ಸಮನಾಗಿದೆ, ಸಾರ್ವಜನಿಕ ಆಸ್ತಿಗಳನ್ನು ಅಗ್ಗದ ಬೆಲೆಗೆ ಮಾರಾಟ ಮಾಡಿ ರೈಲ್ವೆ, ಟೆಲಿಫೋನ್, .ವಿಮಾ ವಲಯ, ಬಂದರು, ವಿಮಾನ ನಿಲ್ದಾಣಗಳನ್ನು ಖಾಸಗಿಯವರಿಗೆ ಒಪ್ಪಿಸಿ ದೇಶವನ್ನು ಮಾರಾಟ ಮಾಡುತ್ತಿದ್ದಾರೆಂದು ಕಿಡಿಕಾರಿದರು.
ತೇಜಸ್ವಿಸೂರ್ಯ ಅಪ್ರಭುದ್ದ
ತೇಜಸ್ವಿಸೂರ್ಯ ಅಪ್ರಭುದ್ದ ರಾಜಕಾರಣಿ ಕೋಮು ಕ್ರಿಮಿ ದ್ವೇಷ ಅಶಾಂತಿ ಅಸಹಿಷ್ಣತೆಯನ್ನ ಮೈಗೂಡಿಸಿಕೊಂಡಿರಿವ ಮನುಷ್ಯ ವಿರೋಧಿ ಈತ ರೈತರ ಸಾಲ ಮನ್ನ ಮಾಡಿದರೆ ಪ್ರಯೋಜನ ಇಲ್ಲ ಎಂಬ ಹೇಳಿಕೆ ಖಂಡನೀಯ ಇಂತಹ ವ್ಯಕ್ತಿಗಳನ್ನು ಮುಂಬರುವ ಚುನಾವಣೆಯಲ್ಲಿ ಸೋಲಿಸಬೇಕು, ಅಖಿಲ ಭಾರತ ಕಿಸಾನ್ ಸಭಾ ಕರೆಯ ಮೇರೆಗೆ ದೇಶದಾದ್ಯಂತ ಇಂದು ಕರಾಳ ದಿನಾಚರಣೆಯನ್ನು ಬಜೆಟ್ ವಿರೋಧಿಸಿ ಆಚರಿಸುತ್ತಿದ್ದೇವೆಂದು ಹೇಳಿದರು.
ಪ್ರತಿಭಟನೆಯಲ್ಲಿ ಪ್ರಾಂತ ರೈತ ಸಂಘದ ಕಾರ್ಯದರ್ಶಿ ಎನ್ ಲಿಂಗರಾಜಮೂರ್ತಿ, ಗುರುಸ್ವಾಮಿ, ಹಿಪ್ಜುಲ್ಲಾ, ಶಿವಕುಮಾರ್, ಮರಿಲಿಂಗೇಗೌಡ, ಚಿಕ್ಕಸ್ವಾಮಿ, ಗಣೇಶ್, ಸುಶೀಲಾ, ಗೌರಮ್ಮ ,ತಿಮ್ಮೇಗೌಡ, ಮಹಾದೇವು, ಮೂರ್ತಿ, ಪ್ರಕಾಶ್ ಮುಂತಾದವರು ಭಾಗವಹಿಸಿದ್ದರು.