ನಾಗಮಂಗಲದ ಘಟನೆ ನಡೆದ ನಂತರ ಮಂಡ್ಯ ಜಿಲ್ಲಾಡಳಿತವು ಮಂಡ್ಯನಗರದಲ್ಲಿರುವ ಗಣೇಶ ಮೂರ್ತಿಗಳನ್ನು ಶೀಘ್ರವೇ ವಿಸರ್ಜನೆ ಮಾಡುವಂತೆ ಒತ್ತಡ ಹೇರುತ್ತಿದ್ದು, ಇದು ಹೀಗೆ ಮುಂದುವರಿದರೆ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಬಜರಂಗ ಸೇನೆ ಅಧ್ಯಕ್ಷ ಮಂಜುನಾಥ್ ತಿಳಿಸಿದರು.
ಮಂಡ್ಯದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು , ಹಿಂದುಗಳಿಗೆ ಗಣೇಶ ಹಬ್ಬ ವಿಶೇಷವಾಗಿದೆ. ಗಣಪತಿ ಹಬ್ಬವನ್ನು ಒಗ್ಗಟ್ಟಿನಿಂದ ಆಚರಿಸುತ್ತಾರೆ. ಸಾಮರಸ್ಯ ಸಾರಲು ಗಣೇಶ ಹಬ್ಬ ವಿಶಿಷ್ಟವಾಗಿದೆ, ಹಬ್ಬ ಆಚರಣೆ ಹಿಂದುಗಳ ಹಕ್ಕಾಗಿದೆ, ಇದನ್ನು ಜಿಲ್ಲಾಡಳಿತ ಕಿತ್ತುಕೊಳ್ಳಬಾರದು ಎಂದು ಎಂದರು.
ಮಂಡ್ಯದಲ್ಲಿ ಇಂತಹ ಘಟನೆಗಳು ನಡೆದಿಲ್ಲ. ಎಲ್ಲರೂ ಒಗ್ಗಟ್ಟಿನಿಂದ ಹಬ್ಬ ಆಚರಿಸುತ್ತಿದ್ದಾರೆ. ಈ ಬಗ್ಗೆ ಜಿಲ್ಲಾಡಳಿತ ಒತ್ತಡ ಹೇರುವುದು ಸರಿಯಲ್ಲ.ಹಾಗಾಗಿ ಶಾಂತಿ ಸಂಭ್ರಮದಿಂದ ಗಣಪತಿ ಮೂರ್ತಿಯ ವಿಸರ್ಜನೆಗೆ ಅನುವು ಮಾಡಿಕೊಡಬೇಕು ಎಂದು ಜಿಲ್ಲಾಡಳಿತ ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಮನವಿ ಮಾಡಿದರು.
ಗೋಷ್ಠಿಯಲ್ಲಿ ನಗರಸಭೆ ಸದಸ್ಯ ನಾಗೇಶ್, ಬಿಜೆಪಿ ಪ್ರಧಾನ ಕಾರ್ಯದರ್ಶಿ ಪ್ರದೀಪ್, ನಗರ ಘಟಕದ ಅಧ್ಯಕ್ಷ ವಸಂತ್ ಕುಮಾರ್, ಹರ್ಷ,ಪುಟ್ಟಸ್ವಾಮಿ ಉಪಸ್ಥಿತರಿದ್ದರು.