ದಲಿತರ ಬಗ್ಗೆ ಹೀನ ಮನಸ್ಥಿತಿ ಹೊಂದಿರುವ ಬೆಂಗಳೂರಿನ ಆರ್ಆರ್ ನಗರ ಕ್ಷೇತ್ರದ ಶಾಸಕ ಮುನಿರತ್ನ(ನಾಯ್ಡು) ಆ ಸ್ಥಾನದಲ್ಲಿ ಕ್ಷಣವೂ ಮುಂದುವರೆಯಲು ಯೋಗ್ಯರಲ್ಲ. ಸರ್ಕಾರ ಕೂಡಲೇ ಅವರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕೆಂದು ಕೆಪಿಸಿಸಿ ರಾಜ್ಯ ಸಂಚಾಲಕರು, ಜಿಲ್ಲಾ ಕಾಂಗ್ರೆಸ್ ಮಾಧ್ಯಮ ವಕ್ತಾರ ಕೆ.ಎನ್.ದೀಪಕ್ ಆಗ್ರಹಿಸಿದ್ದಾರೆ.
ಬೆಂಗಳೂರಿನ ಬಿಬಿಎಂಪಿ ಗುತ್ತಿಗೆದಾರರೊಬ್ಬರನ್ನು ಕಾಮಗಾರಿಯೊಂದ ವಿಚಾರಕ್ಕೆ 30 ಪರ್ಸೆಂಟ್ ಲಂಚ ನೀಡುವಂತೆ ಒತ್ತಾಯಿಸಿರುವ ಮುನಿರತ್ನ, ದಲಿತರ ಬಗ್ಗೆ ಅತ್ಯಂತ ತುಚ್ಚವಾಗಿ ಮಾತನಾಡಿರುವುದಲ್ಲದೆ, ಗುತ್ತಿಗೆದಾರನಿಗೂ ಅಶ್ಲೀಲವಾಗಿ ಬೈದಿರುವುದು, ಆತನ ಮನೆಯ ಮಹಿಳೆಯರನ್ನು ಅತ್ಯಂತ ಹೀನಾಯವಾಗಿ ನಿಂದಿಸಿ ಮಂಚಕ್ಕೆ ಕರೆದಿರುವುದು ಈ ಶಾಸಕನ ಅಸಲಿಮುಖವನ್ನು ತೋರಿಸಿದೆ. ಇಂತಹ ಪರಮ ನೀಚ ವ್ಯಕ್ತಿ ಪವಿತ್ರವಾದ ವಿಧಾನ ಸಭೆಯಲ್ಲಿರುವುದೇ ದೊಡ್ಡ ದುರಂತದ ಸಂಗತಿ ಎಂದಿದ್ದಾರೆ.
ದಲಿತ ವಿರೋಧಿ ಶಾಸಕನಾಗಿ ಮುನಿರತ್ನ ಅವರಿಗೆ ಹಣ, ಅಧಿಕಾರ, ಜಾತಿ ಬಲದ ಮಧ ನೆತ್ತಿಗೇರಿದೆ. ದಲಿತ ವಿರೋಧಿ ಮಾನಸಿಕತೆ ಇಟ್ಟುಕೊಂಡು, ದಲಿತರ ಮತವನ್ನು ಪಡೆದು ಬಿಜೆಪಿ ಪಕ್ಷದಿಂದ ಶಾಸಕರಾದ ಮುನಿರತ್ನ ದಲಿತರನ್ನು ತೆಗಳಿ, ಜಾತಿ ನಿಂದನೆಯ ಮಾತುಗಳನ್ನಾಡಿರುವುದು ರಾಜ್ಯದ ಸ್ವಾಭಿಮಾನವಿರುವ ಯಾವೊಬ್ಬರೂ ಕ್ಷಮಿಸಲಾರದಂತದು. ದಲಿತರು ಮುಂಬರುವ ಚುನಾವಣೆಯಲ್ಲಿ ದಲಿತ ವಿರೋಧಿ ಮುನಿರತ್ನ ಅವರಿಗೆ ತಕ್ಕ ಪಾಠ ಕಲಿಸಿ, ಮನೆಗೆ ಕಳಿಸುವ ಮುನ್ನ ಜನತೆಯೇ ತಕ್ಕ ಪಾಠ ಕಲಿಸಬೇಕಿದೆ. ಅದಕ್ಕಾಗಿ ಎಲ್ಲ ದಲಿತ ಸಂಘಟನೆಗಳು ಈ ದುರಹಂಕಾರಿ ಶಾಸಕ ಮುನಿರತ್ನ ಮಾತನಾಡಿರುವ ಆಡಿಯೂ ಕೇಳಿಸಿಕೊಂಡು ಆತನಾಡಿರುವ ಮಾತಿಗೆ ತಕ್ಕ ಪ್ರತಿರೋಧ ತೋರಿಸಬೇಕಿದೆ ಎಂದಿದ್ದಾರೆ.
ರಾಜ್ಯ ಸರ್ಕಾರ, ರಾಜ್ಯಪಾಲರು, ಸಮಾಜ ಕಲ್ಯಾಣ ಇಲಾಖೆ ಸಚಿವರು ಸ್ವಯಂಪ್ರೇರಿತ ಪ್ರಕರಣ ದಾಖಲಿಸಿ ಕ್ರಮ ಕೈಗೊಳ್ಳಬೇಕಿದೆ. ಆದ್ದರಿಂದ ರಾಜ್ಯದಾದ್ಯಂತ ಈತನ ವಿರುದ್ಧ ಪ್ರಕರಣ ದಾಖಲಿಸುವ ಮೂಲಕ ದಲಿತರ ಆಕ್ರೋಶದ ಬಲವನ್ನು ಪ್ರದರ್ಶಿಸಬೇಕೆಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.