ಇಷೆಲ್ಲಾ ಮಹಿಳೆಯ ಸಾವು ನೋವು ಸಂಭವಿಸುತ್ತಿದ್ದರು ನೀವು ಪೋಲೀಸರು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಪಂಚಾಯಿತಿ ಅಧಿಕಾರಿಗಳು ಏನು ಮಾಡ್ತ ಇದ್ದೀರಿ. SKDRDP ಬಗ್ಗೆ ಸಮಗ್ರವಾಗಿ ತನಿಖೆ ಮಾಡಿ ವರದಿ ಕೊಡಿ. ನಿಮ್ಮ ಕೈಲಿ ಏನು ಮಾಡಲು ಆಗದಿದ್ದರೆ ಕನಿಷ್ಠ ಜನರಲ್ಲಿ ಅರಿವನ್ನಾದರು ಮೂಡಿಸಿ ಎಂದು ಅಧಿಕಾರಗಳ ಮೇಲೆ ರಾಜ್ಯ ಮಾಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮಿ ಚೌದರಿ ಹರಿಹಾಯ್ದರು.
ಧರ್ಮಸ್ಥಳದ ಸಂಘದ ಕಿರುಕುಳದಿಂದ ಸತ್ತ ಮಳವಳ್ಳಿ ತಾಲ್ಲೂಕಿನ ಮಲಿಯೂರು ಗ್ರಾಮದ ಮಹಾಲಕ್ಷ್ಮಿ ಕುಟುಂಬವನ್ನು ಭೇಟಿ ಮಾಡಿ ಮಾತನಾಡಿ ಅವರು, ಖುದ್ದು ಮುಖ್ಯಮಂತ್ರಿಗಳು ಹಾಗೂ ಮುಖ್ಯಮಂತ್ರಿಗಳ ಕಾರ್ಯದರ್ಶಿಗಳನ್ನು ಭೇಟಿಯಾಗಿ ಇಲ್ಲಿನ ಪರಿಸ್ಥಿತಿಯನ್ನು ವಿವರಿಸಿ ತಮ್ಮ ಹೆಣ್ಣು ಮಕ್ಕಳ ಪರವಾಗಿ ಮಾತನಾಡಿ ನ್ಯಾಯ ಕೊಡಿಸುತ್ತೇನೆ ಎಂದು ನೊಂದ ಕುಟುಂಬವನ್ನು ಸಂತೈಸಿದರು.
ಮಹಿಳಾ ಮುನ್ನಡೆಯ ಪೂರ್ಣಿಮಾ ಮಾತನಾಡಿ, ಆತ್ಮಹತ್ಯೆ ಮಾಡಿಕೊಂಡ ಕುಟುಂಬಕ್ಕೆ 25 ಲಕ್ಷ ಪರಿಹಾರ ನೀಡಬೇಕು. ಭೀಕರ ಬರ ಆವರಿಸಿರುವುದರಿಂದ ಕೂಲಿಯು ಇಲ್ಲದೆ ಬದುಕು ನಡೆದುವುದು ದುಗವಾಗಿರುವಾಗ ಮೈಕ್ರೋ ಫೈನಾನ್ಸ್ ಪ್ರತಿನಿಧಿಗಳ ಹಿಂಸೆ ತಡೆಗಟ್ಟಿ, ಸಾಲ ಮನ್ನಾ ಮಾಡಿ ಋಣಮುಕ್ತರನ್ನಾಗಿ ಮಾಡಿಸಲು ಆಳಿಕೆಯನ್ನು ಒತ್ತಾಯಿಸಿ ಎಂದು ಹಕ್ಕೊತ್ತಾಯ ಮಂಡಿಸಿದರು.
ಮುಂದುವರಿದು, ಜೊತೆಗೆ 50 ಕ್ಕೂ ಹೆಚ್ಚು ನಾಯಿ ಕೊಡೆಗಳಂತೆ ಹುಟ್ಟಿಕೊಂಡಿರುವ ಧರ್ಮಸ್ಥಳದಂತ ಮೈಕ್ರೋಫೈನಾನ್ಸ್ ಸಂಸ್ಥೆಗಳು ಅಧಿಕೃತವೋ ಇಲ್ಲವೇ ಅನಧಿಕೃತವೋ ಎಂದು ತನಿಖೆ ನಡೆಸಿ ಕ್ರಮ ಕೈಗೊಳ್ಳಿ. ಒಬ್ಬ ವ್ಯಕ್ತಿಗೆ ಒಂದು ಆದಾರ್ ಕಾರ್ಡ ಮೇಲೆ ನಿಗದಿಗಿಂತಲೂ ಹೆಚ್ಚು ಬಡ್ಡಿ ಹಾಕಿ ಸಂಸ್ಥೆ ಬೆಳೆಸುವ ಹುನ್ನಾರದಿಂದ ಮಿತಿಮೀರಿದ ಸಾಲ ನೀಡಿ. ವಸೂಲಿಗಾಗಿ ಗುಂಪಿನ ನಡುವೆಯೇ ಒಡಕುಂಟುಮಾಡಿ ಕಿರುಕುಳದ ದಾರಿ ಹಿಡಿದಿರುವ SKDRDP ಮೇಲೆ ಕಡಿವಾಣ ಹಾಕಿ ಕ್ರಮ ಕೈಗೊಳ್ಳಬೇಕಿದೆ ಎಂದರು.
ಶಿವಕುಮಾರ್ ಮಾದಳ್ಳಿ ಮಾತನಾಡಿ, ಧರ್ಮಸ್ಥಳದಂತ ಮೈಕ್ರೋ ಫೈನಾನ್ಸ್ ಸಂಸ್ಥೆಗಳ ಲೈಸೆನ್ಸ್ ಗಳನ್ನು ತನಿಖೆಗೆ ಒಳಪಡಿಸಿ ಸಾಲವಸೂಲಾತಿಗೆ ಕಿರುಕುಳ ನೀಡಿದಂತೆ ಆಳಿಕೆ, ಮತ್ತು ಜಿಲ್ಲಾಡಳಿತಕ್ಕೆ ನೋಟಿಸ್ ಜಾರಿ ಮಾಡಿ ಕ್ರಮ ಕೈಗೊಳ್ಳ ಬೇಕಿದೆ ಆಗ್ರಹಿಸಿದರು.
ಮಹಿಳಾ ಆಯೋಗದ ಅಧ್ಯಕ್ಷೆ ಗ್ರಾಮಕ್ಕೆ ಭೇಟಿ ನೀಡಿದಾಗ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು, ಪಂಚಾಯಿತಿಯ ಅಧಿಕಾರಿಗಳು, ಪೊಲೀಸ್ ಸಿಬ್ಬಂದಿ, ಪಂಚಾಯಿತಿ ಸದಸ್ಯರು ಹಾಗೂ ಮಹಿಳಾ ಮುನ್ನಡೆಯ ಶಿಲ್ಪ, ಶಾಂತಮ್ಮ, ಕರ್ನಾಟಕ ವಿಧ್ಯಾರ್ಥಿ ಸಂಘಟನೆಯ ಕೌಶಲ್ಯ, ದಲಿತಪರ ಸಂಘಟನೆಗಳ ಮುಂದಾಳುಗಳು ಹಾಗೂ ಗ್ರಾಮಸ್ಥರು ಹಾಜರಿದ್ದರು.