ಕಬ್ಬಿಗೆ 4.500 ರೂ. ಬೆಲೆ ನಿಗದಿಗೆ ಆಗ್ರಹಿಸಿ ಕಳೆದ 5 ದಿನಗಳಿಂದ ರೈತಸಂಘದ ನೇತೃತ್ವದಲ್ಲಿ ನಡೆಸುತ್ತಿರುವ ಅನಿರ್ದಿಷ್ಟಾವಧಿ ಧರಣಿಯನ್ನು ಕೈಬಿಡುವಂತೆ ಜಿಲ್ಲಾಧಿಕಾರಿ ಹೆಚ್.ಎನ್.ಗೋಪಾಲಕೃಷ್ಣ ಅವರು ರೈತರಲ್ಲಿ ಮನವಿ ಮಾಡಿದರು.
ಮಂಡ್ಯನಗರದ ಸರ್.ಎಂ.ವಿಶ್ವೇಶ್ವರಯ್ಯ ಪ್ರತಿಮೆ ಎದುರು ಧರಣಿ ನಡೆಯುತ್ತಿರುವ ಸ್ಥಳಕ್ಕೆ ಭೇಟಿ ನೀಡಿ ರೈತರನ್ನುದ್ಧೇಶಿಸಿ ಮಾತನಾಡಿದ ಅವರು, ಇದುವರೆಗೂ ರೈತರ ಬೇಡಿಕೆಗಳನ್ನು ಕಾಲ ಕಾಲಕ್ಕೆ ಸರ್ಕಾರದ ಗಮನಕ್ಕೆ ತರಲಾಗಿದೆ. ಈಗಲೂ ರೈತರು ಲಿಖಿತವಾಗಿ ಮನವಿ ನೀಡಿದರೆ, ಸರ್ಕಾರಕ್ಕೆ ಕಳುಹಿಸಿ ಕೊಡಲಾಗುವುದು ಎಂದರು.
ರೈತರು ದೇಶದ ಬೆನ್ನೆಲುಬು, ಪ್ರಸ್ತುತ ಚಳಿಗಾಲ ಪ್ರಾರಂಭವಾಗಿದೆ, ಅಲ್ಲದೇ ಆಗಾಗ ಮಳೆ ಬೀಳುತ್ತಿದೆ, ಆದ್ದರಿಂದ ನಿಮ್ಮ ಆರೋಗ್ಯದ ದೃಷ್ಠಿಯಿಂದ ಹೋರಾಟವನ್ನು ಹಿಂಪಡೆಯಿರಿ, ಜಿಲ್ಲಾಡಳಿತ ಯಾವಾಗಲೂ ರೈತರ ಪರವಾಗಿರುತ್ತದೆ, ಈ ಹೋರಾಟದ ಬಗ್ಗೆ ಈಗಾಗಲೇ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಸಕ್ಕರೆ ಇಲಾಖೆಯ ಕಾರ್ಯದರ್ಶಿ ಅವರ ಗಮನಕ್ಕೆ ತರಲಾಗಿದೆ. ಶೀಘ್ರದಲ್ಲೇ ಅವರು ಸೂಕ್ತ ಕ್ರಮ ಕೈಗೊಳ್ಳುವ ನಿರೀಕ್ಷೆ ಇದೆ, ಹಾಗಾಗಿ ತಾವು ಧರಣಿ ಹಿಂಪಡೆಯಬೇಕೆಂದು ಕೋರಿದರು.