ದೇಶದ ಹೆಸರಾಂತ ಕೈಗಾರಿಕೋದ್ಯಮಿ ರತನ್ ಟಾಟಾ (86) ಅವರು ಬುಧವಾರ ರಾತ್ರಿ ಮುಂಬೈನಲ್ಲಿ ನಿಧರಾಗಿದ್ದಾರೆ.
ರತನ್ ಟಾಟಾ ಕೆಲ ದಿನಗಳಿಂದ ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದರು. ಈ ಸಂಬಂಧ ವದಂತಿಗಳು ಹಬ್ಬಿದಾಗ ಎರಡು ದಿನಗಳ ಹಿಂದೆ ಸ್ವತಃ ಅವರೇ “ನಾನು ಆರೋಗ್ಯವಾಗಿದ್ದೇನೆ” ಎಂದು ಸ್ಪಷ್ಟನೆ ನೀಡಿದ್ದರು.
ಬುಧವಾರ ಬೆಳಿಗ್ಗೆ ಟಾಟಾ ಅವರ ಆರೋಗ್ಯದಲ್ಲಿ ಏರುಪೇರಾದ ಕಾರಣ ಅವರನ್ನು ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ರಾತ್ರಿ ಸುಮಾರು 11.30ರ ಸುಮಾರಿಗೆ ಅವರು ಮೃತಪಟ್ಟಿರುವುದಾಗಿ ವರದಿಯಾಗಿದೆ.
ರತನ್ ಟಾಟಾ ಅವರ ನಿಧನದ ಬಗ್ಗೆ ಟಾಟಾ ಸನ್ಸ್ ಸಂಸ್ಥೆಯ ಅಧ್ಯಕ್ಷ ಎನ್.ಚಂದ್ರಶೇಖರ್ ಅವರು ಬುಧವಾರ ರಾತ್ರಿ ಹೇಳಿಕೆ ಬಿಡುಗಡೆ ಮಾಡಿದ್ದು, “ಟಾಟಾ ಅವರು ನನಗೆ ಸ್ನೇಹಿತ, ಗುರು ಮತ್ತು ಮಾರ್ಗದರ್ಶಿಯಾಗಿದ್ದರು” ಎಂದು ಸ್ಮರಿಸಿದ್ದಾರೆ.
ರತನ್ ಟಾಟಾ ಅವರು ಸುಮಾರು 20 ವರ್ಷಗಳ ಕಾಲ ಟಾಟಾ ಸನ್ಸ್ ಉದ್ಯಮ ಸಮೂಹವನ್ನು ಮುನ್ನಡೆಸಿದ್ದರು. ವಿವಿಧ ಉದ್ಯಮ ವಲಯಗಳಿಗೆ ದಾಪುಗಾಲಿಟ್ಟು ಸಂಸ್ಥೆ ವಿಶ್ವದಲ್ಲೇ ಹೆಸರುವಾಸಿಯಾಗುವಲ್ಲಿ ರತನ್ ಟಾಟಾ ಪ್ರಮುಖ ಪಾತ್ರ ವಹಿಸಿದ್ದರು.
1991ರಲ್ಲಿ ಟಾಟಾ ಸನ್ಸ್ ಸಮೂಹ ಸಂಸ್ಥೆಯ ಅಧ್ಯಕ್ಷರಾಗಿದ್ದ ರತನ್ ಟಾಟಾ, ತಮ್ಮ ಸಂಸ್ಥೆಯನ್ನು 100 ಬಿಲಿಯನ್ ಡಾಲರ್ ಮೌಲ್ಯದ ಜಾಗತಿಕ ದರ್ಜೆಯ ಸಾಮ್ರಾಜ್ಯವನ್ನಾಗಿ ವಿಸ್ತರಿಸಿದ್ದರು. ಡಿಸೆಂಬರ್ 2012ರಲ್ಲಿ ಟಾಟಾ ಸನ್ಸ್ ಸಮೂಹ ಸಂಸ್ಥೆಯ ಅಧ್ಯಕ್ಷ ಹುದ್ದೆಯಿಂದ ನಿವೃತ್ತರಾಗಿದ್ದ ರತನ್ ಟಾಟಾ, ನಂತರ ಗೌರವಾಧ್ಯಕ್ಷರಾಗಿ ನೇಮಕಗೊಂಡಿದ್ದರು.