ಮೈಸೂರು ಸ್ಪಂದನ ಸಾಂಸ್ಕೃತಿಕ ಪರಿಷತ್ತು ಹಾಗೂ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಸಹಯೋಗದೊಂದಿಗೆ ‘ದಸರಾ ಕವಿ-ಕಾವ್ಯ ಸಂಭ್ರಮ’ದ ಅಂಗವಾಗಿ ಅ. ೨೦ ರಂದು ಬೆಳಗ್ಗೆ ೧೦ ರಿಂದ ಸಂಜೆ ೬ ಗಂಟೆಯ ವರೆಗೆ ಮೈಸೂರಿನ ವಿಜಯನಗರದ ಕಸಾಪ ಭವನದಲ್ಲಿ ರಾಜ್ಯ ಮಟ್ಟದ ಕಾವ್ಯೋತ್ಸವ ಹಾಗೂ ಡಾ. ಸಿಪಿಕೆ ಕಾವ್ಯ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಆಯೋಜಿಸಲಾಗಿದೆ ಎಂದು ಪರಿಷತ್ತಿನ ಅಧ್ಯಕ್ಷ ಟಿ. ಸತೀಶ್ ಜವರೇಗೌಡ ತಿಳಿಸಿದ್ದಾರೆ.
ದಸರಾ ಕಾವ್ಯೋತ್ಸವವನ್ನು ಪ್ರಸಿದ್ಧ ಕವಯಿತ್ರಿ ಹಾಗೂ ಸ್ತ್ರೀವಾದಿ ಚಿಂತಕಿ ಪ್ರೊ. ಚ. ಸರ್ವಮಂಗಳಾ ಉದ್ಘಾಟಿಸಲಿದ್ದು, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಮಡ್ಡೀಕೆರೆ ಗೋಪಾಲ್ ಅಧ್ಯಕ್ಷತೆ ವಹಿಸುವರು. ಸ್ಪಂದನ ಸಾಂಸ್ಕೃತಿಕ ಪರಿಷತ್ತಿನ ಅಧ್ಯಕ್ಷ ಟಿ. ಸತೀಶ್ ಜವರೇಗೌಡ ಆಶಯ ನುಡಿಗಳನ್ನಾಡುವರು.
ಮುಖ್ಯ ಅತಿಥಿಗಳಾಗಿ ರಾಜ್ಯ ಸರ್ಕಾರಿ ನೌಕರರ ಸಂಘದ ನಿಕಟಪೂರ್ವ ರಾಜ್ಯಾಧ್ಯಕ್ಷ ಹೆಚ್.ಕೆ. ರಾಮು, ಮೈಸೂರು ವಿಶ್ವವಿದ್ಯಾನಿಲಯದ ಸಿಂಡಿಕೇಟ್ ಮಾಜಿ ಸದಸ್ಯ ಡಾ.ಈ.ಸಿ. ನಿಂಗರಾಜ್ ಗೌಡ, ಜಿಲ್ಲಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಸಂಘಟನಾ ಕಾರ್ಯದರ್ಶಿ ಪಿ. ಶಾಂತರಾಜು, ಸಾಹಿತಿ ಜೆ. ರಾಮಲಿಂಗೇಗೌಡ, ನಿವೃತ್ತ ಮುಖ್ಯ ಶಿಕ್ಷಕ ಯೋಗೇಂದ್ರ, ಸಮಾಜ ಸೇವಕ ಅರಸು ಮಡಿಲು, ಜಿಲ್ಲಾ ಸರ್ಕಾರಿ ನೌಕರರ ಸಂಘದ ಸಂಘಟನಾ ಕಾರ್ಯದರ್ಶಿಗಳಾದ ಬಿ.ಎಸ್. ಸತೀಶ್ ಮತ್ತು ಎಂ.ವಿ. ಭಾಸ್ಕರ್ ಪಾಲ್ಗೊಳ್ಳುವರು.
ಮಧ್ಯಾಹ್ನ ೧೨ ಗಂಟೆಗೆ ಮೊದಲ ಕವಿಗೋಷ್ಠಿ ನಡೆಯಲಿದ್ದು, ಕುಣಿಗಲ್ ನ ಕನ್ನಡ ಸಹ ಪ್ರಾಧ್ಯಾಪಕಿ ಡಾ. ಲಕ್ಷ್ಮಿನರಸಮ್ಮ ಆಶಯ ನುಡಿಗಳನ್ನಾಡುವರು. ಶಿವಮೊಗ್ಗದ ಹಿರಿಯ ಸಾಹಿತಿ ಡಾ.ಎಚ್.ಎಸ್. ರುದ್ರೇಶ್ ಅಧ್ಯಕ್ಷತೆ ವಹಿಸುವರು. ಮಧ್ಯಾಹ್ನ ೨-೩೦ ಗಂಟೆಗೆ ನಡೆಯುವ ಎರಡನೇ ಕವಿಗೋಷ್ಠಿಗೆ ಸಾಹಿತಿ ಶಿವಬಸಪ್ಪ ಹೊರೆಯಾಲ ಆಶಯ ನುಡಿಗಳನ್ನಾಡುವರು. ಶಿವಮೊಗ್ಗದ ಕುವೆಂಪು ವಿಶ್ವವಿದ್ಯಾಲಯದ ಉಪನ್ಯಾಸಕಿ ಹಾಗೂ ಕವಯಿತ್ರಿ ಡಾ.ಹೆಚ್.ಕೆ. ಹಸೀನಾ ಅಧ್ಯಕ್ಷತೆ ವಹಿಸುವರು. ಎರಡೂ ಕವಿಗೋಷ್ಠಿಗಳಲ್ಲಿ ೮೪ ಮಂದಿ ಕವಿ-ಕವಯಿತ್ರಿಯರು ಕವನ ವಾಚನ ಮಾಡುವರು.
ಸಂಜೆ ೪ ಗಂಟೆಗೆ ನಡೆಯುವ ಸಮಾರೋಪ ಮತ್ತು ಪ್ರಶಸ್ತಿ ಪ್ರದಾನ ಸಮಾರಂಭದ ಅಧ್ಯಕ್ಷತೆಯನ್ನು ವಿಧಾನ ಪರಿಷತ್ತಿನ ಸದಸ್ಯ ಡಾ.ಡಿ. ತಿಮ್ಮಯ್ಯ ವಹಿಸಲಿದ್ದು, ಖ್ಯಾತ ಸಾಹಿತಿ ಮತ್ತು ವಿಚಾರವಾದಿ ಪ್ರೊ.ಕೆ.ಎಸ್. ಭಗವಾನ್ ‘ಡಾ. ಸಿಪಿಕೆ ಕಾವ್ಯ ಪ್ರಶಸ್ತಿ’ ಪ್ರದಾನ ಮಾಡುವರು. ಪರಿಷತ್ತಿನ ಅಧ್ಯಕ್ಷ ಟಿ. ಸತೀಶ್ ಜವರೇಗೌಡ ಅಭಿನಂದನಾ ಭಾಷಣ ಮಾಡುವರು. ಪಂಪ ಪ್ರಶಸ್ತಿ ಪುರಸ್ಕೃತ ಹಿರಿಯ ಸಾಹಿತಿ ಡಾ. ಸಿಪಿಕೆ ಉಪಸ್ಥಿತರಿರುವರು.
ಇದೇ ಸಂದರ್ಭದಲ್ಲಿ ನಾಡಿನ ಪ್ರತಿಭಾನ್ವಿತ ಕವಯಿತ್ರಿಯರಾದ ಡಾ. ವಿಜಯಮಾಲಾ ರಂಗನಾಥ್, ವಿದ್ಯಾರಶ್ಮಿ ಪೆಲತ್ತಡ್ಕ, ಡಾ.ಬಿ.ಆರ್. ಶ್ರುತಿ ಹಾಗೂ ಕವಿಗಳಾದ ಮಂಜು ಕೋಡಿಉಗನೆ, ಡಾ. ನಾಗಣ್ಣ ಕಿಲಾರಿ, ಎನ್.ಎಸ್. ಚಾಂದ್ ಪಾಷ, ಗಣಂಗೂರು ನಂಜೇಗೌಡ, ಡಾ. ಗುಣವಂತ ಮಂಜು ಅವರಿಗೆ ಡಾ. ಸಿಪಿಕೆ ಕಾವ್ಯ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.