ರಾಜಸ್ತಾನದ ಉದಯಪುರದಲ್ಲಿ ಟೈಲರ್ ಕನ್ನಯ್ಯಲಾಲ್ ಎಂಬ ಅಮಾಯಕ ಹಿಂದೂ ಯುವಕನನ್ನು ಮುಸ್ಲಿಂ ಮತಾಂಧರು ಹತ್ಯೆ ಮಾಡಿರುವುದನ್ನು ಖಂಡಿಸಿ ಮಂಡ್ಯ ನಗರದಲ್ಲಿ ಹಿಂದೂ ಜಾಗರಣಾ ವೇದಿಕೆ ಪದಾಧಿಕಾರಿಗಳು ಮತ್ತು ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗಳ ಮೂಲಕ ರಾಷ್ಟ್ರಪತಿ ಅವರಿಗೆ ಮನವಿ ಪತ್ರ ಸಲ್ಲಿಸಿದರು.
ಮಂಡ್ಯ ನಗರದ ಸಿಲ್ವರ್ ಜ್ಯುಬಿಲಿ ಪಾರ್ಕ್ ನಲ್ಲಿ ಜಮಾವಣೆಗೊಂಡ ಹಿಂದೂ ಜಾಗರಣ ವೇದಿಕೆ, ಸಂಘ ಪರಿವಾರದವರು ಹಾಗೂ ಬಿಜೆಪಿ ಕಾರ್ಯಕರ್ತರು ಹತ್ಯೆ ಮಾಡಿದ ಇಬ್ಬರು ಮುಸ್ಲಿಂ ಮತಾಂಧರನ್ನು ಗಲ್ಲಿಗೇರಿಸುವಂತೆ ಘೋಷಣೆ ಕೂಗಿದರು .
ಮೈಸೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಮೆರವಣಿಗೆ ನಡೆಸಲು ಮುಂದಾದಾಗ ಪೊಲೀಸರು ತಡೆದರು. ಮೆರವಣಿಗೆ ಮಾಡಲು ಹೆದ್ದಾರಿಯನ್ನು ಬಳಸಿಕೊಳ್ಳಬಾರದು ಎಂದು ಪೊಲೀಸರು ಹೇಳಿದರೂ ಪ್ರತಿಭಟನಾಕಾರರು ವಾದಕ್ಕಿಳಿದರು.ಈ ಸಂದರ್ಭದಲ್ಲಿ ಮಾತಿನ ಚಕಮಕಿ ನಡೆಯಿತು.
ರಸ್ತೆ ಸಂಚಾರಕ್ಕೆ ತಡೆಯಾಗುವ ಹಿನ್ನಲೆಯಲ್ಲಿ ಹೆದ್ದಾರಿಯಲ್ಲಿ ಪ್ರತಿಭಟನೆ ಮಾಡುವುದಕ್ಕೆ ನಿಷೇಧವಿದೆ ಎಂದು ಸುಪ್ರೀಂ ಕೋರ್ಟ್ ಆದೇಶವಿದೆ ಎಂದು ಪೋಲಿಸರು ಮನವರಿಕೆ ಮಾಡಿದರೂ ಪ್ರತಿಭಟನಾಕಾರರು ಕೇಳದೆ ಘೋಷಣೆಗಳನ್ನು ಕೂಗಿ ಮೆರವಣಿಗೆ ನಡೆಸಲು ಮುಂದಾದಾಗ ತಳ್ಳಾಟ ನೂಕಾಟ ನಡೆಯಿತು.
ದೇಶದಲ್ಲಿ ಮುಸ್ಲಿಂ ಮತಾಂಧತೆ ಹೆಚ್ಚಲು ದೇಶದಲ್ಲಿ ನಡೆಯುತ್ತಿರುವ ಮದರಸಗಳೇ ಮೂಲ ಕಾರಣವೆಂದು ಅದರಲ್ಲಿ ಕೊಡುವ ಮತಾಂಧ ಶಿಕ್ಷಣವೇ ಪ್ರೇರಣೆ ಎಂಬುದು ಜಗಜ್ಜಾಹೀರಾಗಿದ್ದು,ಮತಾಂಧತೆಗೆ ಪ್ರೋತ್ಸಾಹ ನೀಡುವ ಮದರಸಗಳನ್ನು ನಿಷೇಧಿಸಬೇಕು.ಮದರಸಗಳಲ್ಲಿ ರಾಷ್ಟ್ರೀಯ ಭಾವೈಕ್ಯತಾ ಶಿಕ್ಷಣವನ್ನು ನೀಡಬೇಕು ಎಂದು ಆಗ್ರಹಿಸಿದರು .
ಮೆರವಣಿಗೆಯು ಜಿಲ್ಲಾಧಿಕಾರಿಗಳ ಕಚೇರಿವರೆಗಡ ಸಾಗಿತು. ಕನ್ಹಯ್ಯಲಾಲ್ ಹತ್ಯೆ ಆರೋಪಿಗಳಿಗೆ ತ್ವರಿತವಾಗಿ ವಿಚಾರಣೆ ನಡೆಸಿ ಕಠಿಣ ಶಿಕ್ಷೆ ವಿಧಿಸಬೇಕೆಂದು ಜಿಲ್ಲಾಧಿಕಾರಿಗಳ ಮೂಲಕ ರಾಷ್ಟ್ರಪತಿಯವರಿಗೆ ಮನವಿ ಪತ್ರ ಸಲ್ಲಿಸಿದರು .
ಪ್ರತಿಭಟನೆಯಲ್ಲಿ ಬಿಜೆಪಿ ನಾಯಕರಾದ ಅಶೋಕ್ ಜಯರಾಮ್, ಎಸ್.ಪಿ.ಸ್ವಾಮಿ,ಡಾ.ಇಂದ್ರೇಶ್,ಕೆ. ಎಸ್, ನಂಜುಂಡೇಗೌಡ, ಬಿಜೆಪಿ ನಗರ ಅಧ್ಯಕ್ಷ ವಿವೇಕ್,ಹರ್ಷ, ಶಿವಕುಮಾರ್ ಆರಾಧ್ಯ, ಮರ್ಜಿನಿ ರಮೇಶ್,ನಗರಸಭಾ ಸದಸ್ಯ ಅರುಣ್ ಕುಮಾರ್, ವಸಂತ್ ಕುಮಾರ್,ಹಿಂದೂ ಜಾಗರಣ ವೇದಿಕೆಯ ಪದಾಧಿಕಾರಿಗಳಾದ ಪಂಚಾಕ್ಷರಿ ಗಂಗಾಟ್ಕರ್, ಶ್ರೀರಂಗಪಟ್ಟಣ ಬಾಲರಾಜು ,ಚಂದನ್, ಸೃಜನ್ ಮಾರ್ಕಂಡೇಯ ,ಮಳವಳ್ಳಿ ಮೋಹನ್, ರತ್ನಾಕರ, ಸತೀಶ್, ಮಲ್ಲಿಕಾರ್ಜುನ ಸೇರಿದಂತೆ ಇತರರಿದ್ದರು.