ಜನಸಂಖ್ಯೆ ಹೆಚ್ಚಾದಂತೆ ಸಾಮಾಜಿಕ, ಆರ್ಥಿಕ ಸಮಸ್ಯೆ ಹೆಚ್ಚಾಗುತ್ತದೆ. ಈ ಹಿನ್ನೆಲೆಯಲ್ಲಿ ಜನಸಂಖ್ಯೆಯನ್ನು ನಿಯಂತ್ರಿಸಲು ದೇಶದ ಜನತೆ ಮುಂದಾಗಬೇಕು ಎಂದು ನೇಗಿಲ ಯೋಗಿ ಸಮಾಜ ಸೇವಾ ಟ್ರಸ್ಟ್ ನ ಅಧ್ಯಕ್ಷ ವಿ.ಸಿ ರಮೇಶ್ ಸಲಹೆ ನೀಡಿದರು.
ಮಂಡ್ಯ ನಗರದ ಮಾಜಿ ಪುರಸಭೆ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ರೋಟರಿ,ನೇಗಿಲಯೋಗಿ ಸಮಾಜ ಸೇವಾ ಟ್ರಸ್ಟ್,ಸರ್ಕಾರಿ ಪದವಿ ಪೂರ್ವ ಕಾಲೇಜು ಮಾಜಿ ಪುರಸಭೆ, ಅಕ್ಷಯನಿಕೇತನ ಹಿರಿಯ ನಾಗರೀಕ ಸಹಾಯವಾಣಿ, ಅನನ್ಯ ಚಾರಿಟೇಬಲ್ ಟ್ರಸ್ಟ್ ನ ಸಹಯೋಗದೊಂದಿಗೆ ನಡೆದ ವಿಶ್ವ ಜನಸಂಖ್ಯಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
1987 ಜುಲೈ 11ರಂದು ವಿಶ್ವಸಂಸ್ಥೆಯು ವಿಶ್ವ ಜನಸಂಖ್ಯಾ ದಿನ ಎಂದು ಘೋಷಣೆಯನ್ನು ಮಾಡಿತು.ಎಲ್ಲಾ ಸಮಸ್ಯೆಗಳಿಗೆ ಮೂಲವಾದಂತಹ ಕಾರಣ ಜನಸಂಖ್ಯೆ.ಜನಸಂಖ್ಯೆ ಹೆಚ್ಚಳದಿಂದ ದೇಶದ ಅಭಿವೃದ್ಧಿ ಕುಂಠಿತವಾಗುತ್ತದೆ. ಆದ್ದರಿಂದ ದೇಶದ ಜನತೆ ಜಾಗೃತರಾಗಿ ಜನಸಂಖ್ಯೆ ನಿಯಂತ್ರಣಕ್ಕೆ ಸಹಕಾರ ನೀಡಬೇಕೆಂದರು.
ಮಂಡ್ಯದ ಮಾಜಿ ಪುರಸಭೆ ಸರ್ಕಾರಿ ಪದವಿ ಪೂರ್ವ ಕಾಲೇಜಿಗೆ ತನ್ನದೇ ಆದಂತಹ ಇತಿಹಾಸವಿದೆ. ಈ ಕಾಲೇಜಿನಲ್ಲಿ ಶಿಕ್ಷಣ ಪಡೆದಂತವರು ಅನೇಕ ಗಣ್ಯ ವ್ಯಕ್ತಿಗಳಾಗಿದ್ದಾರೆ. ಉತ್ತಮ ಶಾಸಕರು, ಮಂತ್ರಿಗಳು ಸಹ ಆಗಿದ್ದಾರೆ.
ಉಪನ್ಯಾಸಕರು ಮಾಡುವಂತಹ ಬೋಧನೆಯನ್ನು ಸರಿಯಾಗಿ ಆಲಿಸಿ, ಉತ್ತಮ ವಿದ್ಯಾಭ್ಯಾಸವನ್ನು ಮಾಡುವುದು ವಿದ್ಯಾರ್ಥಿಗಳಾದ ನಿಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ. ಉತ್ತಮ ಫಲಿತಾಂಶವನ್ನು ಕಾಲೇಜಿಗೆ ನೀಡಬೇಕು ಎಂದು ಶುಭ ಕೋರುತ್ತೇನೆ ಎಂದರು.
ಮಾಜಿ ಪುರಸಭೆ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಡಿ.ಗುರುಲಿಂಗೇಗೌಡ, ರೋಟರಿ ಸಂಸ್ಥೆಯ ಅಧ್ಯಕ್ಷರಾದ ಎಸ್.ನಾರಾಯಣ್,ರಾಷ್ಟ್ರ ಪ್ರಶಸ್ತಿ ಪುರಸ್ಕೃತೆ ಜಿ.ಎಸ್.ಅನುಪಮ,ಹಿರಿಯ ಉಪನ್ಯಾಸಕಿ ಮಾಲಿನಿ ಟಿ.ಎನ್,ಸ್ವಯಂ ಸೇವಕರಾದ ಜೆ.ಎಸ್.ಹರ್ಷ ಸೇರಿದಂತೆ ಇತರರು ಉಪಸ್ಥಿತರಿದ್ದರು.