ಪಾಸ್ಟಿಕ್ ನಿಷೇಧ ಮಾಡಲಾಗಿದ್ದರೂ ಇನ್ನೂ ಪೂರ್ಣವಾಗಿ ಪ್ಲಾಸ್ಟಿಕ್ ನಿಂತಿಲ್ಲ. ಹಾಗಾಗಿ ಪ್ಲಾಸ್ಟಿಕ್ ಮುಕ್ತ ಮಂಡ್ಯ ಮಾಡಲು ಶಿಸ್ತುಬದ್ಧವಾಗಿ ಶ್ರಮಿಸೋಣ ಎಂದು ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷೆ ಮೀನಾಕ್ಷಿ ಪುಟ್ಟಸ್ವಾಮಿ ತಿಳಿಸಿದರು.
ಮಂಡ್ಯ ನಗರಸಭೆಯಲ್ಲಿ ಪ್ಲಾಸ್ಟಿಕ್ ನಿಷೇಧ ಹಾಗೂ ಗಣಪತಿ ಪ್ರತಿಷ್ಠಾಪನೆಯಲ್ಲಿ ತೆಗೆದುಕೊಳ್ಳಬೇಕಾದ ಅಗತ್ಯ ಕ್ರಮಗಳ ಬಗ್ಗೆ ಇಂದು ಸಭೆ ನಡೆಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಸಮಿತಿಯಲ್ಲಿ ಪ್ಲಾಸ್ಟಿಕ್ ನಿಷೇಧ ಹೇರಲು ಒಕ್ಕೂರಲೊನಿಂದ ಹೇಳಿ ಬೆಂಬಲ ನೀಡಿರುವುದು ಹೆಮ್ಮೆಯ ವಿಷಯವಾಗಿದೆ. ಖಂಡಿತವಾಗಿಯೂ ಇದನ್ನು ಶಿಸ್ತುಬದ್ಧವಾಗಿ ಮಾಡೋಣ ಎಂದು ಕರೆ ನೀಡಿದರು.
ಅಂಗಡಿ, ಹೋಟೇಲ್, ಬಟ್ಟೆ ಅಂಗಡಿ, ಫುಟ್ ಬಾತ್ ವ್ಯಾಪಾರಗಳು ಸೇರಿದಂತೆ ಇತರೆ ವ್ಯಾಪಾರ ಮಾಡುವ ಸ್ಥಳಗಳಲ್ಲಿ ಪ್ಲಾಸ್ಟಿಕ್ ಕವರ್ ಗಳನ್ನು ಬಳಸುತ್ತಿರುವುದು ಕಂಡು ಬಂದರೆ, ಅಧಿಕಾರಿಗಳು ಯಾವುದೇ ಮುಲಾಜಿಗೆ ಒಳಪಡದೇ ಕ್ರಮ ತೆಗೆದುಕೊಳ್ಳಬೇಕು. ಆ ಮೂಲಕ ಮಂಡ್ಯ ಪ್ಲಾಸ್ಟಿಕ್ ಮುಕ್ತವಾಗಿಸಲು ಶ್ರಮಿಸೋಣ ಎಂದು ಸಲಹೆ ನೀಡಿದರು.
ಪ್ಲಾಸ್ಟಿಕ್ ಮುಕ್ತ ನಗರ ಮಾಡಲು ಸಾರ್ವಜನಿಕರು ಸಹಕರಿಸಬೇಕು. ಗಣೇಶ ಉತ್ಸವದಲ್ಲಿ ಕೆಮಿಕಲ್ ಮುಕ್ತ ಗಣೇಶನನ್ನು ಪ್ರತಿಷ್ಠಾಪಿಸಬೇಕು. ಪಿಓಪಿ ಗಣೇಶನನ್ನು ಪ್ರತಿಷ್ಠಾಪಿಸೋದು ಬೇಡ. ಮಣ್ಣಿನ ಗೌರಿ ಗಣೇಶ ಮೂರ್ತಿಗಳನ್ನು ಸ್ಥಾಪಿಸಿ ಪೂಜೆ ಮಾಡಿ ಹಬ್ಬ ಆಚರಿಸೋಣ, ಜೊತೆಗೆ ಪರಿಸರ ಉಳಿಸುವ ಕಾಳಜಿ ಬೆಳೆಸಿಕೊಳ್ಳೋಣ ಎಂದು ಸಲಹೆ ನೀಡಿದರು.
ಸಭೆಯಲ್ಲಿ ನಗರಸಭೆ ಅಧ್ಯಕ್ಷ ಎಚ್.ಎಸ್.ಮಂಜು, ಸದದ್ಯರಾದ ಗೀತಾ, ರಜನಿ, ಶ್ರೀನಿವಾಸ್, ಪೌರಾಯುಕ್ತ ಆರ್.ಮಂಜುನಾಥ್, ಆರೋಗ್ಯ ಪರಿವೀಕ್ಷಕ ಚಲುವರಾಜು ಹಾಗೂ ನಗರಸಭೆಯ ಆಡಳಿತ ಸಿಬ್ಬಂದಿ ಭಾಗವಹಿಸಿದ್ದರು.