-
ಮಂಡ್ಯದಲ್ಲಿ ನಾರಾಯಣ ಗುರು ಜಯಂತಿ
- 122 ಮಕ್ಕಳಿಗೆ ಪ್ರೋತ್ಸಾಹ ಧನ ವಿತರಣೆ
ಎಲ್ಲರೂ ಪ್ರೀತಿಯಿಂದ ಇರುವಂತಹ ಉತ್ತಮ ಸಮಾಜ ನಿರ್ಮಾಣ ಮಾಡುವಲ್ಲಿ ಬ್ರಹ್ಮಶ್ರೀ ನಾರಾಯಣ ಗುರು ಅವರ ಪಾತ್ರ ಅಪಾರವಾದದ್ದು ಎಂದು ಅಪರ ಜಿಲ್ಲಾಧಿಕಾರಿ ಡಾ.ಹೆಚ್.ಎಲ್.ನಾಗರಾಜು ತಿಳಿಸಿದರು.
ಮಂಡ್ಯ ನಗರದ ನಾಲ್ವಡಿ ಕೃಷ್ಣರಾಜ ಒಡೆಯರ್ ಕಲಾಮಂದಿರದಲ್ಲಿ ನಡೆದ ನಾರಾಯಣ ಗುರು ಜಯಂತಿ ಉದ್ಘಾಟಿಸಿ ಅವರು ಮಾತನಾಡಿದರು.
ನಾರಾಯಣ ಗುರು ಅವರು ಸಾಮಾಜಿಕ ನ್ಯಾಯದ ಬಗ್ಗೆ ಹೆಚ್ಚು ಹೆಚ್ಚು ಜನ ಸಮುದಾಯಕ್ಕೆ ತಿಳಿಸುವ ಮೂಲಕ ತಳಮಟ್ಟದಲ್ಲಿ ಮನುಷ್ಯ – ಮನುಷ್ಯರ ನಡುವೆ ಇರುವ ಭೇದಗಳನ್ನು ಹೋಗಲಾಡಿಸಲು ಶ್ರಮಿಸಿದರು, ಬಡತನ ಮತ್ತು ನೊಂದಿರುವ ಸಮುದಾಯವನ್ನು ಮೇಲೆತ್ತಲು ಹೋರಾಡಿದ ಮಹಾನ್ ಚೇತನರಲ್ಲಿ ನಾರಾಯಣ ಗುರು ಸಹ ಒಬ್ಬರು ಎಂದರು.
ಸಹಾಯಕ ಪ್ರಾಧ್ಯಾಪಕ ಲೋಕೇಶ್ ಮಾತನಾಡಿ, ತಿರುವನಂತಪುರ 12 ಕಿ.ಮೀ.ಚಂಪು ಜಂತಿ ಎಂಬ ಗ್ರಾಮದಲ್ಲಿ ಪ್ರತಿಷ್ಠಿತ ಈಡಿಗ ಸಮಾಜದಲ್ಲಿ ಮದನ್ ಆಸನ್ ಹಾಗೂ ಕುಟ್ಟಿ ಅಮ್ಮಾಳ್ ಎಂಬ ದಂಪತಿಗಳಿಗೆ ನಾರಾಯಣ ಗುರು ಜನಿಸಿದರು ಎಂದರು.
ಜಿಲ್ಲಾ ಆರ್ಯ ಈಡಿಗರ ಸಂಘದ ಅಧ್ಯಕ್ಷ ಅಪ್ಪಾಜಿಗೌಡ ಮಾತನಾಡಿ, ನಾರಾಯಣ ಗುರು ಅವರ ಆರ್ಯ ತತ್ವಗಳನ್ನು ಅಳವಡಿಸಿಕೊಳ್ಳಬೇಕು, ಎಲ್ಲರಲ್ಲಿ ಸಮಾನತೆ ತರಬೇಕು ಎಂಬುದು ಅವರ ಮುಖ್ಯ ಉದ್ದೇಶವಾಗಿತ್ತು ಎಂದು ಹೇಳಿದರು.
ಇದೇ ಸಂದರ್ಭ ಜಿಲ್ಲೆಯಲ್ಲಿ ಬಡವರ ಮಕ್ಕಳನ್ನು ಗುರುತಿಸಿ 122 ಮಕ್ಕಳಿಗೆ ಪ್ರೋತ್ಸಾಹ ಧನ ನೀಡಲಾಯಿತು.
ಕಾರ್ಯಕ್ರಮದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಎನ್. ಉದಯ್ ಕುಮಾರ್, ನಗರ ಸಭೆ ಮಾಜಿ ಸದಸ್ಯ ಅರುಣ್ ಕುಮಾರ್, ಮುಖಂಡರಾದ ರಾಮಲಿಂಗಯ್ಯ, ಅಪ್ಪಾಜಿಗೌಡ, ಪುಟ್ಟಸ್ವಾಮಿ, ಬಿ.ಪಿ.ರಾಜಕುಮಾರ್, ದಾಸೇಗೌಡ, ಅರವಿಂದ್ ಕುಮಾರ್, ಸೋಮಶೇಖರ್, ವಸಂತ್ ಕುಮಾರ್, ಶ್ರೀನಿವಾಸ್ ,ಅನುಪಮ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.