ತಂದೆಯೇ ಮಗನನ್ನು ಶಾಲಾ ಕ್ಯಾಂಪಸ್ ಒಳಗೆ ಬಿಟ್ಟು ಬಂದ ನಂತರ ಆತ ನಿಗೂಢವಾಗಿ ನಾಪತ್ತೆಯಾಗಿರುವ ಪ್ರಕರಣ ಮಂಡ್ಯ ತಾಲೂಕು ತಂಗಳಗೆರೆ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ನಡೆದಿದೆ.
9ನೇ ತರಗತಿ ವಿದ್ಯಾರ್ಥಿ ಕಿಶೋರ್ ಎಂಬಾತನೇ ನಾಪತ್ತೆಯಾಗಿರುವ ವಿದ್ಯಾರ್ಥಿ.
ಕಳೆದ ಆಗಸ್ಟ್ 10 ರಂದು ಮಗ ಕಿಶೋರನನ್ನು ಶಾಲೆಗೆ ಬಿಟ್ಟು ಬಂದಿದ್ದ ತಂದೆ ಈರೇಗೌಡ, ಆಗಸ್ಟ್ 29ರಂದು ಗೌರಿ-ಗಣೇಶ ಹಬ್ಬಕ್ಕೆ ಮಗನನ್ನು ಕರೆದುಕೊಂಡು ಬರಲು ಶಾಲೆಗೆ ಹೋದಾಗ, ನಿಮ್ಮ ಮಗ 20 ದಿನದಿಂದ ಶಾಲೆಗೆ ಬಂದಿಲ್ಲ ಎಂದು ಪ್ರಾಂಶುಪಾಲರು ಹೇಳಿದ್ದಾರೆ.
ಈರೇಗೌಡರು ನಾನೇ ಮಗನನ್ನು ಬಿಟ್ಟು ಹೋದೆ ಎಂದು ಹೇಳಿದಾಗ,ಕೂಡಲೇ ಸಿಸಿ ಟಿವಿ ಪರಿಶೀಲನೆ ಮಾಡಿದ್ದಾರೆ.
ವಿದ್ಯಾರ್ಥಿ ಕಿಶೋರ್ ಕ್ಯಾಂಪಸ್ ಒಳಗೆ ಪ್ರವೇಶ ಮಾಡಿರುವುದು ಸಿಸಿ ಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.ಸಿಸಿ ಟಿವಿ ಪರಿಶೀಲನೆ ಬಳಿಕ ಪ್ರಾಂಶುಪಾಲರು, ಶಿಕ್ಷಕರು ಬೆಚ್ಚಿ ಬಿದ್ದಿದ್ದಾರೆ.
ವಿದ್ಯಾರ್ಥಿ ಕಿಶೋರ್ 20 ದಿನಗಳಿಂದ ಶಾಲೆಗೆ ಬಾರದಿದ್ದರೂ ಪೋಷಕರಿಗೆ ಈ ವಿಷಯವನ್ನು ಮುಖ್ಯ ಶಿಕ್ಷಕರು ತಿಳಿಸಿಲ್ಲ.ಬಾಲಕನ ನಿಗೂಢವಾದ ನಾಪತ್ತೆಯಿಂದ ಕಂಗಾಲಾದ ಕುಟುಂಬ. ಕೆರಗೋಡು ಪೋಲಿಸರಿಗೆ ದೂರು ನೀಡಿದ್ದಾರೆ. ಮತ್ತೊಂದೆಡೆ ಪೊಲೀಸರಿಗೂ ವಿದ್ಯಾರ್ಥಿ ನಾಪತ್ತೆ ಪ್ರಕರಣ ಸವಾಲಾಗಿದೆ.
ಪ್ರಾಂಶುಪಾಲರ ಮೇಲೆ ಕ್ರಮ?
ಶಾಲೆಯ ಪ್ರಾಂಶುಪಾಲರ ನಿರ್ಲಕ್ಷ್ಯತೆಯನ್ನು ಗಂಭೀರವಾಗಿ ಪರಿಗಣಿಸಿದ ಜಿಲ್ಲಾಡಳಿತ ಈ ಬಗ್ಗೆ ವರದಿ ಪಡೆದು ಪ್ರಾಂಶುಪಾಲರನ್ನು ಸಸ್ಪೆಂಡ್ ಮಾಡಲು ಡಿಸಿ ನಿರ್ಧಾರ ಮಾಡಿದ್ದಾರೆಂದು ತಿಳಿದು ಬಂದಿದೆ.