ಮಕ್ಕಳಿಗೆ ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲೂ ಭಾಗವಹಿಸಲು ಶಿಕ್ಷಕರು ಮತ್ತು ಪೋಷಕರು ಪ್ರೋತ್ಸಾಹ ನೀಡಬೇಕೆಂದು ಮಂಡ್ಯ ಡಯಟ್ ಉಪ ನಿರ್ದೇಶಕ ಪುರುಷೋತ್ತಮ್ ತಿಳಿಸಿದರು.
ಮದ್ದೂರು ತಾಲ್ಲೂಕಿನ ಭಾರತೀನಗರದ ಪ್ರಶಾಂತ್ ಶಾಲೆಯಲ್ಲಿ ಅಣ್ಣೂರು ಕ್ಲಸ್ಟರ್ ಮಟ್ಟದ ಪ್ರಾಥಮಿಕ ಶಾಲೆಗಳ ಹಂತದ ಪ್ರತಿಭಾ ಕಾರಂಜಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಪೋಷಕರು ತಮ್ಮ ಮಕ್ಕಳ ಅಂಕದ ಹಿಂದೆ ಹೋಗದೆ, ಮೌಲ್ಯಾಧಾರಿತ ಜೀವನ ಶಿಕ್ಷಣದ ಕಡೆಗೂ ಒತ್ತುನೀಡುವ ಮೂಲಕ ಸಮಾಜದ ಉತ್ತಮ ಪ್ರಜೆಯನ್ನಾಗಿ ಮಾಡಲು ಪೋಷಕರು ಮುಂದಾಗೇಕೆಂದು ತಿಳಿಸಿದರು.
ಮಂಡ್ಯ ಡಯಟ್ ಉಪನ್ಯಾಸಕ ಸಿದ್ದರಾಜು ಮಾತನಾಡಿ, ಪ್ರತಿಭಾಕಾರಂಜಿ ಮಕ್ಕಳಿಗೆ ಅಪರಂಜಿ ಕಾರ್ಯಕ್ರಮವಾಗಿದೆ. ಮಕ್ಕಳಲ್ಲಿರುವ ಪ್ರತಿಭೆಯನ್ನು ಹೊರತೆಗೆಯುವಂತಹ ಸೂಕ್ತ ವೇದಿಕೆಯಾಗಿದೆ. ಹಾಗಾಗಿ ಮಕ್ಕಳನ್ನು ಗುರುತಿಸಿ ಸೂಕ್ತ ವೇದಿಕೆ ನೀಡಬೇಕೆಂದು ಸಲಹೆ ನೀಡಿದರು.
ಪ್ರಶಾಂತ್ ಸ್ಕೂಲ್ ಅಧ್ಯಕ್ಷ ಡಾ.ಜೈ ಪ್ರಕಾಶ ಗೌಡ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ನಮ್ಮ ಶಾಲೆಯಲ್ಲಿ ಈ ಕಾರ್ಯಕ್ರಮವನ್ನು ಆಯೋಜಿಸಿರುವುದು ತುಂಬಾ ಸಂತಸ ತಂದಿದೆ ಎಂದರು.
ವೇದಿಕೆಯಲ್ಲಿ ಶಿಕ್ಷಣ ಸಂಯೋಜಕ ಸುಬ್ರಮಣ್ಯ, ಅಣ್ಣೂರು ಸಮೂಹ ಸಂಪನ್ಮೂಲ ವ್ಯಕ್ತಿ ನಂದೀಶ್, ಭಾರತೀನಗರ ಪಂಚಾಯಿತಿ ಅಭಿವೃದ್ದಿ ಅಧಿಕಾರಿ ಎನ್.ಸುಧಾ, ಗ್ರಾ.ಪಂ ಅಧ್ಯಕ್ಷೆ ಕೌಶಲ್ಯ ಅರ್ಕೇಶ್, ಪತ್ರಕರ್ತ ಅಣ್ಣೂರು ಸತೀಶ್, ಪ್ರಶಾಂತ್ ಸ್ಕೂಲ್ ಆಡಳಿತ ಮಂಡಳಿಯ ಸದಸ್ಯರು, ಸಂಘ-ಸಂಸ್ಥೆಯ ಸದಸ್ಯರು, ಅಣ್ಣೂರು ಕ್ಲಸ್ಟರ್ ಮಟ್ಟದ ಮುಖ್ಯಶಿಕ್ಷಕರು ಹಾಗೂ ಸಹಶಿಕ್ಷಕರು ಉಪಸ್ಥಿತರಿದ್ದರು.
ಪ್ರತಿಭಾಕಾರಂಜಿ ಸ್ಪರ್ಧೆಯಲ್ಲಿ ಭಾಗವಹಿಸಿದ ಮಕ್ಕಳಿಗೆ ಬಿಇಓ ಕಾಳೀರಯ್ಯ, ಕ್ಷೇತ್ರ ಸಮನ್ವಯ ಅಧಿಕಾರಿ ಹನುಮಶೆಟ್ಟಿ, ಅಕ್ಷರ ದಾಸೋಹ ಸಹಾಯಕ ನಿರ್ದೇಶಕಿ ಡಾ.ಮಂಗಳ ಶುಭ ಹಾರೈಸಿದರು.