ಮಂಡ್ಯ ನಗರದ ಶಂಕರಮಠದಲ್ಲಿ ಕ್ಷುಲ್ಲಕ ಕಾರಣಕ್ಕಾಗಿ ಎರಡು ಧರ್ಮದ ಯುವಕರ ನಡುವೆ ನಿನ್ನೆ ರಾತ್ರಿ ಘರ್ಷಣೆ ಉಂಟಾಗಿತ್ತು.
ಈ ವಿಷಯ ತಿಳಿದ ಕೂಡಲೇ ಸ್ಥಳಕ್ಕೆ ದೌಡಾಯಿಸಿದ ಡಿವೈಎಸ್ಪಿ ಶಿವಮೂರ್ತಿ, ಸಿಪಿಐ ಸಂತೋಷ್, ಎಸ್ಐ ವೆಂಕಟೇಶ್ ಅವರು ಎರಡೂ ಧರ್ಮಗಳ ಯುವಕರನ್ನು ಕರೆದು ಬುದ್ಧಿವಾದ ಹೇಳಿ ತಲಾ ಒಂದೊಂದು ಕೇಸು ಹಾಕಿ ಪರಿಸ್ಥಿತಿ ನಿಯಂತ್ರಣಕ್ಕೆ ತಂದಿದ್ದಾರೆ. ಅಲ್ಲದೆ ಎರಡೂ ಧರ್ಮಗಳ ಕಡೆಯ ಪ್ರಮುಖ ನಾಯಕರನ್ನು ಕರೆದು ಮತ್ತೆ ಗಲಾಟೆಗೆ ಆಸ್ಪದ ನೀಡದಂತೆ ತಿಳಿ ಹೇಳಿ ಸಮರ್ಥವಾಗಿ ಪರಿಸ್ಥಿತಿ ನಿಭಾಹಿಸಿದ್ದಾರೆ.
ಗಲಾಟೆ ಹಿನ್ನಲೆಯಲ್ಲಿ ಇಂದು ಡಿವೈಎಸ್ಪಿ ಶಿವಮೂರ್ತಿ, ಸಿಟಿ ಸಂತೋಷ್, ಎಸ್ಐ ವೆಂಕಟೇಶ್ ಅವರ ನೇತೃತ್ವದಲ್ಲಿ ಎರಡೂ ಧರ್ಮಗಳ ಮುಖಂಡರನ್ನು ಕರೆಸಿ ಶಾಂತಿ ಸಭೆ ಮಾಡಿದ್ದಾರೆ. ಶಾಂತಿ ಸಭೆಯಲ್ಲಿ ಎರಡೂ ಧರ್ಮಗಳ ಮುಖಂಡರು ನಾವೆಲ್ಲರೂ ಹತ್ತಾರು ವರ್ಷಗಳಿಂದ ಅನ್ಯೋನ್ಯವಾಗಿ ಜೀವನ ಸಾಗಿಸುತ್ತಿದ್ದೇವೆ. ಆದರೂ ಕೆಲವು ಯುವಕರು ಕ್ಷುಲ್ಲಕ ಕಾರಣಕ್ಕಾಗಿ ಗಲಾಟೆ ಮಾಡಿಕೊಂಡಿರುವುದು ಬೇಸರ ತಂದಿದೆ. ಇನ್ನು ಮುಂದೆ ಈ ರೀತಿ ಗಲಾಟೆಗಳಾಗದಂತೆ ನೋಡಿಕೊಳ್ಳುತ್ತೇವೆ ಎಂದು ಮಾತು ನೀಡಿದ್ದಾರೆ.
ಒಂದೇ ಬಡಾವಣೆಯ ಯುವಕರು ಸಣ್ಣ ಕಾರಣಕ್ಕಾಗಿ ಚಿಕ್ಕ ಗಲಾಟೆ ಮಾಡಿಕೊಂಡಿದ್ದರು. ಎರಡೂ ಕಡೆಯ ಯುವಕರನ್ನು ಕರೆದು ಗಲಾಟೆ ಮುಕ್ತಾಯಗೊಳಿಸಲಾಗಿದೆ.ಪರಿಸ್ಥಿತಿ ತಹಬಂದಿಗೆ ಬಂದಿದ್ದು, ಶಾಂತಿ-ಸುವ್ಯವಸ್ಥೆ ಕಾಪಾಡಲು ಎರಡೂ ಕಡೆಯ ಮುಖಂಡರು ಸಮ್ಮತಿಸಿದ್ದಾರೆ ಎಂದು ಪೋಲಿಸ್ ಮೂಲಗಳು ತಿಳಿಸಿವೆ.