ಅಂಗಾಗಗಳನ್ನು ದಾನ ಮಾಡುವ ಮೂಲಕ ತಮ್ಮ ಮಗನ ಸಾವಿಗೆ ಸಾರ್ಥಕತೆ ನೀಡಿದ ಮಂಡ್ಯ ತಾಲ್ಲೂಕಿನ ಚಿಕ್ಕಮಂಡ್ಯ ಗ್ರಾಮದ ಗಿರೀಶ್ ಅವರ ಕುಟುಂಬಕ್ಕೆ ಶಾಸಕ ಗಣಿಗ ರವಿಕುಮಾರ್ ಸಾಂತ್ವನ ಹೇಳಿ ಸಹಾಯ ಹಸ್ತ ಚಾಚಿದ್ದಾರೆ.
ಇತ್ತೀಚೆಗೆ ನಡೆದ ಅಪಘಾತದಲ್ಲಿ ಚಿಕ್ಕಮಂಡ್ಯ ಯುವಕ ಗಿರೀಶ್ ಅವರ ಮೆದುಳು ನಿಷ್ಕ್ರಿಯವಾಗಿತ್ತು. ಈ ಹಿನ್ನೆಲೆಯಲ್ಲಿ ವೈದ್ಯರ ಸಲಹೆಯ ಮೇರೆಗೆ ಆತನ ಪೋಷಕರು ಅಂಗಾಂಗವನ್ನು ದಾನ ಮಾಡುವ ಮೂಲಕ ಆತನ ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದರು.
ಇಂದು ಶಾಸಕ ಗಣಿಗ ರವಿಕುಮಾರ್ ಗಿರೀಶ್ ಅವರ ಮನೆಗೆ ತೆರಳಿ ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿದರು.
ಬೆಲೆ ಕಟ್ಟಲಾಗದ ಅಂಗಾಂಗಗಳನ್ನು ದಾನ ಮಾಡಿದ ಕುಟುಂಬಕ್ಕೆ ವೈಯಕ್ತಿಕವಾಗಿ 50,000 ರೂ.ಗಳನ್ನು ನೀಡುವ ಮೂಲಕ ಶಾಸಕರು ಯುವಕ ಗಿರೀಶ್ ಅವರ ಕುಟುಂಬದ ಸದಸ್ಯರ ಮಾನವೀಯ ಗುಣಗಳನ್ನು ಕೊಂಡಾಡಿದರು.
ಈ ಸಂದರ್ಭದಲ್ಲಿ ನಗರಸಭಾ ಸದಸ್ಯ ನಯೀಂ ಮತ್ತಿತರರಿದ್ದರು.