ಮಳವಳ್ಳಿ ತಾಲ್ಲೂಕಿನ ಹಲಗೂರು ದೊಡ್ಡೇಗೌಡನದೊಡ್ಡಿ ಗ್ರಾಮದ ಜಮೀನಿನ ಬಳಿ ಅರಣ್ಯಾಧಿಕಾರಿಗಳು ಇಟ್ಟಿದ್ದ ಬೋನಿಗೆ ಚಿರತೆ ಸೆರೆಯಾಗಿದೆ.
ಗ್ರಾಮದ ಪ್ರಕಾಶ್ ಎಂಬುವವರ ಜಮೀನಿನಲ್ಲಿ ಚಿರತೆ ಸೆರೆಗಾಗಿ ಬೋನ್ ಇಡಲಾಗಿತ್ತು. ಮೂರು ದಿನಗಳು ಸತಾಯಿಸಿ ಕೊನೆಗೂ ಸೋಮವಾರ ಬೆಳಗಿನ ಜಾವ ಚಿರತೆ ಬೋನಿಗೆ ಬಿದ್ದಿದೆ. ಪ್ರಕಾಶ್ ತಮ್ಮ ಜಮೀನಿನಲ್ಲಿ ವ್ಯವಸಾಯದ ಜೊತೆಗೆ ಹಸು, ಕರು, ಕುರಿ, ಮೇಕೆಗಳನ್ನು ಸಾಕಿಕೊಂಡು ಜೀವನ ನಡೆಸುತ್ತಿದ್ದರು.
ಒಂದು ವಾರದ ಹಿಂದೆ ಅಂಡನಹಳ್ಳಿ ಗುಡ್ಡ ಪ್ರದೇಶದಿಂದ ಬಂದ ಚಿರತೆ ಕೊಟ್ಟಿಗೆಯಲ್ಲಿದ್ದ ಕುರಿ ಮತ್ತು ಸಾಕಿದ್ದ ನಾಯಿಯನ್ನು ಕೊಂದು ಪರಾರಿಯಾಗಿತ್ತು. ಇದರಿಂದ ಭಯಭೀತರಾದ ಪ್ರಕಾಶ್ನ ಜಮೀನಿಗೆ ಆಗಿಂದಾಗ್ಗೆ ಚಿರತೆಗಳು ಬರುತ್ತಿವೆ. ಸಾಕು ಪ್ರಾಣಿಗಳನ್ನು ಉಳಿಸುವುದಕ್ಕಾಗಿ ಅರಣ್ಯ ಇಲಾಖೆಯವರಿಗೆ ಚಿರತೆ ಹಿಡಿಯುವುದಕ್ಕೆ ಜಮೀನಿನಲ್ಲಿ ಬೋನ್ ಇಡುವಂತೆ ಮನವಿ ಮಾಡಿದ್ದರು.
ರೈತನ ಮನವಿಯಂತೆ ಮೂರು ದಿನಗಳ ಹಿಂದೆ ಅರಣ್ಯಾಧಿಕಾರಿಗಳು ಬೋನ್ ಇಟ್ಟಿದ್ದರು. ಚಿರತೆ ಸೆರೆಯಾಗಿರುವುದರಿಂದ ರೈತ ಪ್ರಕಾಶ್ ಸೇರಿದಂತೆ ಗ್ರಾಮಸ್ಥರು ನಿಟ್ಟುಸಿರು ಬಿಟ್ಟಿದ್ದಾರೆ.
ಅರಣ್ಯ ಅಧಿಕಾರಿ ಆರ್ಎಫ್ ಮಹಾದೇವು ಮಾತನಾಡಿ, ತಾಲೂಕಿನಲ್ಲಿ ಹೆಚ್ಚು ಚಿರತೆ ಹಾವಳಿ ಇರುವುದರಿಂದ ಚಿರತೆ ಹಿಡಿಯಲು ಬೋನುಗಳ ಅವಶ್ಯಕತೆ ಇದೆ. ಅದಕ್ಕಾಗಿ ಮನವಿ ಮಾಡಿದ್ದೇವೆ. ಅತಿ ಶೀಘ್ರದಲ್ಲೇ ಕೊಡುವುದಾಗಿ ಇಲಾಖೆ ಮೇಲಾಧಿಕಾರಿಗಳು ಭರವಸೆ ನೀಡಿದ್ದಾರೆ. ಚಿರತೆ ಹೆಚ್ಚು ಓಡಾಡುವುದು ಕಂಡುಬಂದರೆ ಅಥವಾ ರೈತರಿಂದ ದೂರು ಬಂದರೆ ಅಂತಹ ಸ್ಥಳಗಳಲ್ಲಿ ಚಿರತೆಗಳನ್ನು ಸೆರೆ ಹಿಡಿದು ಅಭಯ ಅರಣ್ಯಕ್ಕೆ ಬಿಡುವ ವ್ಯವಸ್ಥೆ ಮಾಡಲಾಗುತ್ತದೆ ಎಂದು ಹೇಳಿದರು.
ಸುಮಾರು 2 ವರ್ಷದ ಹೆಣ್ಣು ಚಿರತೆಯಾಗಿದ್ದು ಮೇಲಿನ ಅಧಿಕಾರಿಗಳ ಆದೇಶದಂತೆ ಬಂಡೀಪುರ ಅಥವಾ ನಾಗರಹೊಳೆ ಅರಣ್ಯ ಪ್ರದೇಶಕ್ಕೆ ಬಿಡುವುದಾಗಿ ತಿಳಿಸಿದ್ದಾರೆ.
ಈ ವೇಳೆ ಅರಣ್ಯ ಅಧಿಕಾರಿಗಳಾದ ಮಹದೇವು, ಶಿವರಾಜು, ಉಮೇಶ್ ಸೇರಿದಂತೆ ಇತರ ಸಿಬ್ಬಂದಿ ಇದ್ದರು.