ಮದುವೆಗೂ ಮುನ್ನ ಮಗಳು ಗರ್ಭಿಣಿಯಾಗಿದ್ದಾಳೆ ಎನ್ನುವ ವಿಚಾರ ತಿಳಿದ ತಾಯಿ ಹಾಗೂ ಯುವತಿಯ ಸಹೋದರ ಆಕೆಗೆ ಬೆಂಕಿ ಹಚ್ಚಿದ ಘಟನೆ ಉತ್ತರ ಪ್ರದೇಶದ ಮೀರತ್ನಲ್ಲಿ ನಡೆದಿದ್ದು, ತೀವ್ರ ಗಾಯಗೊಂಡಿದ್ದ 19 ವರ್ಷ ವಯಸ್ಸಿನ ಗರ್ಭಿಣಿ ಐದು ದಿನಗಳ ಜೀವನ್ಮರಣ ಹೋರಾಟದ ಬಳಿಕ ಇಲ್ಲಿನ ಲಾಲಾ ಲಜಪತ್ ರಾಯ್ ಸ್ಮಾರಕ ಆಸ್ಪತ್ರೆಯಲ್ಲಿ ಬುಧವಾರ ಮೃತಪಟ್ಟಿದ್ದಾಳೆ.
ಈ ಘಟನೆ ಬಗ್ಗೆ ಮಾಹಿತಿ ನೀಡಿದ ಪೊಲೀಸರು, ಉತ್ತರ ಪ್ರದೇಶದ ಬಹದ್ದೂರ್ಗಢದ ನವಾಡ ಗ್ರಾಮದ ಸಂತ್ರಸ್ತೆಯ ತಾಯಿ ಮತ್ತು ಸಹೋದರ ಅವಳನ್ನು ಕಾಡಿಗೆ ಕರೆದೊಯ್ದರು, ಅಲ್ಲಿ ಅವರು ಮೊದಲು ಕತ್ತು ಸೀಳಿ ನಂತರ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾರೆ ಎಂದು ತಿಳಿಸಿದ್ದಾರೆ.
LLRM ಆಸ್ಪತ್ರೆಯ ಜನರಲ್ ಸರ್ಜನ್ ಡಾ ಹಿಮಾಂಶು ಸಂಘವಾನ್ ಮಾತನಾಡಿ, ”ಯುವತಿಯು 80% ಕ್ಕಿಂತ ಹೆಚ್ಚು ಸುಟ್ಟಗಾಯಗಳಿಂದ ಬಳಲುತ್ತಿದ್ದಳು. ತೀವ್ರವಾಗಿ ಸುಟ್ಟ ಸ್ಥಿತಿಯಲ್ಲಿ ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ತಕ್ಷಣವೇ ವೆಂಟಿಲೇಟರ್ನಲ್ಲಿ ಇರಿಸಲಾಗಿದೆ. ಆಕೆಯ ಎದೆ ಮತ್ತು ದೇಹದ ಮೇಲ್ಭಾಗವು ಸಂಪೂರ್ಣವಾಗಿ ಸುಟ್ಟುಹೋಗಿದ್ದರಿಂದ ಆಕೆ ಉಸಿರಾಡಲು ಸಾಧ್ಯವಾಗಲಿಲ್ಲ. ಬುಧವಾರ ನಸುಕಿನ 2 ಗಂಟೆ ಸುಮಾರಿಗೆ ಗಾಯಗೊಂಡು ಸಾವನ್ನಪ್ಪಿದ್ದಾಳೆ” ಎಂದು ಹೇಳಿದ್ದಾರೆ.
”ಆಕೆಗೆ ಚಿಕಿತ್ಸೆ ನೀಡುತ್ತಿದ್ದ LLRM ಆಸ್ಪತ್ರೆಯ ಜನರಲ್ ಸರ್ಜನ್ ಮಾತನಾಡಿ, ”ಅವಳು ಗರ್ಭಿಣಿಯಾಗಿದ್ದಳು, ಆದರೆ ಆಕೆಯನ್ನು ಆಸ್ಪತ್ರೆಗೆ ಕರೆತರುವಾಗ ಭ್ರೂಣವು ಸತ್ತಿತ್ತು. ಆಕೆಯ ಸ್ಥಿತಿಯು ಸ್ಥಿರವಾದ ನಂತರ ನಾವು ಭ್ರೂಣವನ್ನು ತೆಗೆದುಹಾಕಲು ಯೋಜಿಸಿದ್ದೇವೆ, ಆದರೆ ಐದು ದಿನಗಳ ತೀವ್ರ ನಿಗಾದಲ್ಲಿ ಅವಳು ಹೃದಯ ಸ್ತಂಭನದಿಂದ ಬಳಲುತ್ತಿದ್ದಳು” ಎಂದು ತಿಳಿಸಿದ್ದಾರೆ.
ಬುಧವಾರ ಆಕೆಯ ಸಾವಿನ ಬಗ್ಗೆ ವೈದ್ಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಆಕೆಯ ತಾಯಿ ಅಸರ್ಫೀ ದೇವಿ ಮತ್ತು ಸಹೋದರ ಸುನೀಲ್ ಕುಮಾರ್ ಅವರನ್ನು ಬಂಧಿಸಲಾಗಿದೆ ಮತ್ತು ಇದೀಗ ಅವರ ವಿರುದ್ಧ ಕೊಲೆ ಪ್ರಕರಣ ದಾಖಲಿಸಲಾಗುವುದು ಎಂದು ಎಎಸ್ಪಿ ಹಪುರ್ ರಾಜ್ ಕುಮಾರ್ ಅಗರ್ವಾಲ್ ಹೇಳಿದ್ದಾರೆ.