ಬೀದರ್| ಹಳೇ ಪಿಂಚಣಿ ಮಂಜೂರಾತಿಯಲ್ಲಿ ಬಹುಕೋಟಿ ಹಗರಣ: ತನಿಖೆಗೆ ಆಗ್ರಹ
ಬೀದರ್ ಜಿಲ್ಲೆಯ ಕರ್ನಾಟಕ ಪಶುವೈದ್ಯಕೀಯ ವಿಶ್ವವಿದ್ಯಾಲಯದಲ್ಲಿ ಎನ್.ಪಿ.ಎಸ್ (NPS) ಅಡಿಯಲ್ಲಿ ನೇಮಕಗೊಂಡ ಸಿಬ್ಬಂದಿಗಳಿಗೆ ಹಳೇ ಪಿಂಚಣಿ (Old Pension Scheme) ಮಂಜೂರಾತಿಯಲ್ಲಿ ಬಹುಕೋಟಿ ಹಗರಣ ನಡೆದಿದ್ದು, ಈ ಬಗ್ಗೆ ಸೂಕ್ತ ತನಿಖೆ ನಡೆಸುವಂತೆ ಆಗ್ರಹಿಸಿ ಸಾಮಾಜಿಕ ಕಾರ್ಯಕರ್ತ ಕಮಲಾಕರ ಎಲ್. ಹೆಗಡೆ ಹಾಗೂ ಕರ್ನಾಟಕ ರಕ್ಷಣಾ ವೇದಿಕೆ ಮುಖಂಡರು ಆಗ್ರಹಿಸಿದ್ದಾರೆ.
ಈ ಹಗರಣಕ್ಕೆ ಸಂಬಂಧಿಸಿದಂತೆ ಕರ್ನಾಟಕ ಪಶುವೈದ್ಯಕೀಯ ವಿಶ್ವವಿದ್ಯಾಲಯ ಕುಲಪತಿ ಡಾ.ಕೆ.ಸಿ.ವೀರಣ್ಣ ಮತ್ತು ಕುಲಸಚಿವ ಎಸ್ ಶಿವಶಂಕರ್ ಮತ್ತು ಇತರರ ಮೇಲೆ ಲೋಕಾಯುಕ್ತ ಸಂಸ್ಥೆಯಿಂದ ವಿಚಾರಣೆ ನಡೆಸಬೇಕೆಂದು ಒತ್ತಾಯಿಸಿ ಶನಿವಾರ ಬೀದರ್ ಅಪರ ಜಿಲ್ಲಾಧಿಕಾರಿ ಶಿವಕುಮಾರ ಶೀಲವಂತ ಅವರಿಗೆ ಮನವಿ ಸಲ್ಲಿಸಿದರು.
ದಿನಾಂಕ 01-04-2006 ರಿಂದ ಹಳೇ ಪಿಂಚಣಿ ಮಂಜೂರಾತಿಯಲ್ಲಿ ನಡೆದಿರುವ ಬಹುಕೋಟಿ ಅಕ್ರಮದ ಬಗ್ಗೆ ವಿ.ವಿ.ಯ ಅಧಿಕಾರಿಗಳು ಮತ್ತು ಇತರ ನೌಕರರ ಮೇಲೆ ಲೋಕಾಯುಕ್ತ ಸಂಸ್ಥೆ ಮತ್ತು ನಿವೃತ್ತ ನ್ಯಾಯಾಧೀಶರನ್ನು ನೇಮಿಸಿ ವಿಚಾರಣೆ ನಡೆಸಬೇಕು, ಇಲ್ಲವಾದಲ್ಲಿ ಅ.18 ರಂದು ವಿ.ವಿ ಯಲ್ಲಿ ಘಟಿಕೋತ್ಸವ ನಡೆಯುವ ಸಂದರ್ಭದಲ್ಲಿ ವಿಶ್ವವಿದ್ಯಾಲಯದ ಮುಂದೆ ದಲಿತ ಸಂಘಟನೆಗಳ ನೇತೃತ್ವದಲ್ಲಿ ಧರಣಿ ನಡೆಸಲಾಗುವುದೆಂದು ಅವರು ಎಚ್ಚರಿಸಿದ್ದಾರೆ.
ಈ ಸಂದರ್ಭದಲ್ಲಿ ಕರವೇ ಮುಖಂಡರಾದ ರಾಜಕುಮಾರ ಟಿಳ್ಳೆಕರ್, ಭವಾನಿ, ಸಾಮಾಜಿಕ ಕಾರ್ಯಕರ್ತರಾದ ರಾಜಕುಮಾರ ಶಾಹಪೂರಕರ್ ಹಾಗೂ ಉದಯ ಭಾವಿದೊಡ್ಡಿ ಉಪಸ್ಥಿತರಿದ್ದರು.