ಕಾವೇರಿ ನದಿ ನೀರು ವಿಚಾರದಲ್ಲಿ ನಮಗೆ ನ್ಯಾಯ ಸಿಗುವವರೆಗೂ ಕೇವಲ ಮಂಡ್ಯ ಜಿಲ್ಲೆಯ ರೈತರು ಮಾತ್ರವಲ್ಲ ರಾಜ್ಯದ ಎಲ್ಲರೂ ಒಗ್ಗಟ್ಟಾಗಿ ಹೋರಾಡಬೇಕಿದೆ ಎಂದು ನಟ ಅಭಿಷೇಕ್ ಅಂಬರೀಶ್ ಕರೆ ನೀಡಿದರು.
ಜಿಲ್ಲಾ ರೈತ ಹಿತರಕ್ಷಣಾ ಸಮಿತಿ ನಡೆಸುತ್ತಿರುವ ಸತ್ಯಾಗ್ರಹ ಧರಣಿಯಲ್ಲಿ ಶುಕ್ರವಾರ ಭಾಗವಹಿಸಿ ಮಾತನಾಡಿದ ಅವರು, ಕಾವೇರಿ ನೀರು ಹಂಚಿಕೆ ವಿಚಾರವಾಗಿ ಹಲವು ದಶಕಗಳಿಂದಲೂ ಹೋರಾಟ ನಡೆಯುತ್ತಲೇ ಇದೆ. ಇದಕ್ಕೆ ಶಾಶ್ವತ ಪರಿಹಾರ ಕಂಡುಹಿಡಿಯಬೇಕಾಗಿದೆ ಎಂದರು.
ನಮ್ಮಲ್ಲಿ ನೀರಿದ್ದರೆ ನೀರು ಕೇಳುವುದರಲ್ಲಿ ಅರ್ಥವಿದೆ. ಆದರೆ, ನಮ್ಮಲ್ಲಿ ಕುಡಿಯಲು ನೀರೇ ಇಲ್ಲ. ಹೀಗಿರುವಾಗ ನೆರೆಯ ರಾಜ್ಯದವರು ಬೆಳೆಗೆ ನೀರು ಕೇಳುವುದು ಯಾವ ನ್ಯಾಯ? ಆದ್ದರಿಂದ ಕರ್ನಾಟಕ ಮತ್ತು ತಮಿಳುನಾಡಿನ ಮುಖ್ಯಮಂತ್ರಿಗಳು ಕೂತು ಚರ್ಚಿಸಿ ಒಂದು ತೀರ್ಮಾನ ಕೈಗೊಳ್ಳಬೇಕೆಂದರು.
ಚಿತ್ರರಂಗದವರ ಬೆಂಬಲ
ಚಿತ್ರರಂಗದವರು ಏಕೆ ಹೋರಾಟಕ್ಕೆ ಬಂದಿಲ್ಲ ಮತ್ತು ಬೆಂಬಲ ನೀಡಿಲ್ಲ ಎಂಬ ಮಾತುಗಳು ಕೇಳಿ ಬರುತ್ತಿವೆ. ಖಂಡಿತವಾಗಿಯೂ ನಟರು ಬರಲಿದ್ದಾರೆ. ಅದಕ್ಕೆ ಒಂದು ವೇದಿಕೆ ಸೃಷ್ಟಿಸಲಾಗುವುದು ಎಂದು ಹೇಳಿದರು.
ಈ ಸಂದರ್ಭ ಕರ್ನಾಟಕ ವಾಯು ಮಾಲಿನ್ಯ ಮಂಡಳಿ ಮಾಜಿ ಅಧ್ಯಕ್ಷ ಪ್ರೊ. ಬಿ.ಶಿವಲಿಂಗಯ್ಯ, ಪಿಎಲ್ಡಿ ಬ್ಯಾಂಕ್ ಅಧ್ಯಕ್ಷ ಬೇಲೂರು ಸೋಮಶೇಖರ್ ಇತರಿದ್ದರು.