ಮಂಡ್ಯ ತಾಲೂಕಿನ ಕೆರಗೋಡು ಪದವಿ ಪೂರ್ವ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಹೆಚ್.ಮುತ್ತಯ್ಯರವರು ಜಿಲ್ಲೆಯ ಶೈಕ್ಷಣಿಕ ಕ್ಷೇತ್ರದಲ್ಲಿ ಅಸಾಮಾನ್ಯ ಸಾಧನೆ ಮಾಡಿ ಹೆಜ್ಜೆ ಗುರುತು ಬಿಟ್ಟು ಹೋಗಿದ್ದಾರೆ ಎಂದು ವಿಧಾನ ಪರಿಷತ್ ಮಾಜಿ ಸದಸ್ಯ ಕೆ.ಟಿ.ಶ್ರೀಕಂಠೇಗೌಡ ಅಭಿಪ್ರಾಯ ಪಟ್ಟರು.
ಮಂಡ್ಯ ನಗರದ ಕರ್ನಾಟಕ ಸಂಘದ ಕೆ.ವಿ.ಶಂಕರಗೌಡ ಶತಮಾನೋತ್ಸವ ಭವನದಲ್ಲಿ ದಿ.ಹೆಚ್.ಮುತ್ತಯ್ಯ ಅವರ ಶ್ರದ್ಧಾಂಜಲಿ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಮುತ್ತಯ್ಯ ಅವರು ಅಜಾತಶತ್ರುವಾಗಿ ಎಲ್ಲರ ಹೃದಯ ಗೆಲ್ಲುತ್ತಿದ್ದರು.ಸತತವಾಗಿ 10 ವರ್ಷಗಳ ಕಾಲ ಪ್ರಾಚಾರ್ಯ ಸಂಘದ ಪ್ರಧಾನ ಕಾರ್ಯದರ್ಶಿಯಾಗಿ ಕೆಲಸ ಮಾಡಿದ್ದಾರೆ.ಮಾತು ಕಡಿಮೆ,ತಾಳ್ಮೆ ಅವರಲ್ಲಿ ಇತ್ತು.ಪ್ರಾಚಾರ್ಯ ಸಂಘದಲ್ಲಿ ಸಂಘಟಕರಾಗಿ ಕೆಲಸ ಮಾಡುವ ಕೌಶಲ್ಯ ಅವರಲ್ಲಿತ್ತು ಎಂದರು.
ಕರ್ನಾಟಕ ಸಂಘದ ಅಧ್ಯಕ್ಷ ಪ್ರೊ.ಬಿ ಜಯಪ್ರಕಾಶ್ ಗೌಡ ಮಾತನಾಡಿ, ಇನ್ನೊಬ್ಬರ ಮನಸ್ಸಿಗೆ ಬೇಸರ ಉಂಟು ಮಾಡದ ಶ್ರೇಷ್ಠವಾದ ವ್ಯಕ್ತಿತ್ವ ಮುತ್ತಯ್ಯ ಅವರಲ್ಲಿತ್ತು.ಒಬ್ಬ ಅಧ್ಯಾಪಕನಿಗೆ ಡ್ರೆಸ್ ಕೋಡ್ ಬಹಳ ಮುಖ್ಯ, ಪಾಠ ಪ್ರವಚನ ಜೊತೆ ನಡೆ-ನುಡಿಯಲ್ಲಿ ಮುತ್ತಯ್ಯ ಅವರು ಎಲ್ಲರನ್ನೂ ಗೆದ್ದಿದ್ದರು ಎಂದರು.
ಮುತ್ತಯ್ಯ ಅವರು ಇನ್ನೊಬ್ಬರಿಗೆ ಹೊರೆಯಾಗದ ಹಾಗೆ ಶ್ರೇಷ್ಠವಾದ ಬದುಕನ್ನು ನಡೆಸಿದ್ದಾರೆ. ಸಾವು ಮತ್ತು ಬದುಕಿನ ನಡುವೆ ಅವರು ಬಿಟ್ಟು ಹೋಗಿರುವ ನೆನಪುಗಳು ಮುಖ್ಯ ಎಂದು ಹೇಳಿದರು.
ನಿವೃತ್ತ ಅರಣ್ಯಾಧಿಕಾರಿ ವಿನಯ್ ಕುಮಾರ್,ಜಿ.ಪಂ. ಮಾಜಿ ಅಧ್ಯಕ್ಷರಾದ ಬಿ.ವಿವೇಕಾನಂದ,ತಗ್ಗಹಳ್ಳಿ ವೆಂಕಟೇಶ್,ನಗರಸಭೆ ಮಾಜಿ ಅಧ್ಯಕ್ಷೆ ಅಂಬುಜಮ್ಮ, ಪ್ರಾಂಶುಪಾಲರ ಸಂಘದ ಅಧ್ಯಕ್ಷ ನಾಗರಾಜು ಸೇರಿದಂತೆ ಇತರರು ಶ್ರದ್ಧಾಂಜಲಿ ಸಭೆಯಲ್ಲಿ ಭಾಗವಹಿಸಿದ್ದರು.