ಕೆ.ಆರ್.ಎಸ್ ಅಚ್ಚುಕಟ್ಟು ವ್ಯಾಪ್ತಿಯ ಕೊನೆ ಭಾಗದಲ್ಲಿರುವ ಮಳವಳ್ಳಿ ಹಾಗೂ ಮದ್ದೂರು ತಾಲ್ಲೂಕಿಗೆ ಸಮರ್ಪಕವಾಗಿ ನೀರು ತಲುಪಿಸಲು ಕಾರ್ಯ ಯೋಜನೆ ತಯಾರಿಸುವಂತೆ ಕಾವೇರಿ ನೀರಾವರಿ ನಿಗಮದ ಹಿರಿಯ ಅಧಿಕಾರಿಗಳಿಗೆ ಮಳವಳ್ಳಿ ಶಾಸಕ ಪಿ.ಎಂ.ನರೇಂದ್ರಸ್ವಾಮಿ ತಾಕೀತು ಮಾಡಿದರು.
ಕೆ.ಆರ್.ಎಸ್ ಅಚ್ಚುಕಟ್ಟು ವ್ಯಾಪ್ತಿಯ ಹಲವು ಕಡೆಗಳಲ್ಲಿ ನಾಲೆಗಳಲ್ಲಿ ನೀರಿನ ಹರಿವನ್ನು ಅಧಿಕಾರಿಗಳೊಂದಿಗೆ ಪರಿಶೀಲಿಸಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಚ್ಚುಕಟ್ಟಿಗೆ ನೀರನ್ನು ಬಿಡುಗಡೆ ಮಾಡಿ, ಒಂದೂವರೆ ತಿಂಗಳು ಕಳೆದಿದೆ. ಆದರೂ ಕೊನೆಭಾಗಗಳಿಗೆ ನೀರು ತಲುಪಿಲ್ಲ, ಇದರಿಂದ ಆ ಭಾಗದ ರೈತರು ಹೊಟ್ಟಲು ಹಾಕಲು ಕೂಡ ಸಾಧ್ಯವಾಗದ ಪರಿಸ್ಥಿತಿ ಉಂಟಾಗಿದೆ. ಇದಕ್ಕೆ ಕಾರಣವೇನು ಎಂಬುದನ್ನು ತಿಳಿದುಕೊಳ್ಳುವುದು ನಮ್ಮ ಈ ಪರಿಶೀಲನೆಯ ಉದ್ಧೇಶವಾಗಿದೆ ಎಂದರು.
ಮೇಲ್ಭಾಗದ ರೈತರು ಮಿತವಾಗಿ ನೀರು ಬಳಸಿಕೊಂಡರೆ ನೀರು ಕೊನೆ ಭಾಗಕ್ಕೂ ತಲುಪುತ್ತದೆ. ಇದಕ್ಕಾಗಿ ನಾವು ಯಾವ ರೈತರನ್ನು ದೂರುವುದಿಲ್ಲ, ಕಾವೇರಿ ಎಲ್ಲರ ಆಸ್ತಿಯಾಗಿದೆ. ಆದರೆ ಕೊನೆ ಭಾಗದ ಮಳವಳ್ಳಿ, ಮದ್ದೂರು ರೈತರಿಗೂ ಸಮರ್ಪಕ ನೀರು ದೊರೆಯಬೇಕೆಂದು ನನ್ನ ಉದ್ದೇಶವಾಗಿದೆ. ಹಾಗಾಗಿ ಇದಕ್ಕೆ ಪರಿಹಾರ ಕಂಡು ಕೊಳ್ಳಲು ಪ್ರಾಮಾಣಿಕ ಪ್ರಯತ್ನ ನಡೆಸುತ್ತಿದ್ದೇನೆ ಎಂದರು.
ಈ ಸಂದರ್ಭದಲ್ಲಿ ಕಾವೇರಿ ನೀರಾವರಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಮಹೇಶ್, ಮುಖ್ಯ ಇಂಜಿನಿಯರ್ ವೆಂಕಟೇಶ್, ಕಾರ್ಯಪಾಲಕ ಇಂಜಿನಿಯರ್ ಗಳಾದ ಜಯಂತ್, ನಂಜುಂಡೇಗೌಡ, ವಾಸುದೇವ್, ಬಾಬು ಕೃಷ್ಣದೇವ್, ಎಇಇ ಜಯರಾಂ, ಜೆಇ ಕೆಂಪರಾಜು ಮತ್ತಿತರರಿದ್ದರು.