ಟಿಪ್ಪು ಸುಲ್ತಾನ್ ಹಿಂದೂ ಧರ್ಮವನ್ನು ಕೆಡಿಸಿದ, ಇಸ್ಲಾಂ ಧರ್ಮವನ್ನು ಬಲತ್ಕಾರದಿಂದ ವಿಸ್ತರಿಸಲು ಹೊರಟಿದ್ದ ಮತ್ತು ಹಿಂದೂ ದೇವಾಲಯಗಳನ್ನು ಕೆಡವಿ ಅದೇ ಸ್ಥಳದಲ್ಲಿ ಮಸೀದಿ ಕಟ್ಟಿಸಿದ ಎಂದು ಮೈಸೂರು ರಂಗಾಯಣ ನಿರ್ದೇಶಕ ಅಡ್ಡಂಡ ಕಾರ್ಯಪ್ಪ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಮಂಡ್ಯದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಟಿಪ್ಪು ನಿಜಕನಸುಗಳು’ ನಾಟಕ ಸುಳ್ಳು ಚರಿತ್ರೆಯನ್ನು ಭೇದಿಸಿ ಸತ್ಯದ ಅನಾವರಣ ಮಾಡುತ್ತದೆ. ಇದೂವರೆಗೆ ಶಾಲಾ ಪಠ್ಯಗಳಲ್ಲಿ ಸುಳ್ಳನೇ ತುರುಕಿ ಬೋಧಿಸಿದೆ. ಈತನ ಜಯಂತಿಯನ್ನು ಕಾಂಗ್ರೆಸ್ ಸರ್ಕಾರ ಆಚರಣೆ ಮಾಡಿ, ಇತಿಹಾಸಕ್ಕೆ ಅಪಚಾರವೆಸಗಿದೆ ಎಂದು ದೂರಿದರು.
ಮೈಸೂರು ಪ್ರಾಂತ್ಯದಲ್ಲಿ ಕನ್ನಡವನ್ನು ಕೊಂದು ಪರ್ಷಿಯನ್ ಭಾಷೆಯನ್ನು ಆಡಳಿತಕ್ಕೆ ತಂದದ್ದಲ್ಲದೆ, ಮಂಗಳೂರು ಕ್ರೈಸ್ತರನ್ನು ಕೊಡಗಿನ ಕೊಡವರನ್ನು, ಮತಾಂತರಿಸಿ, ಮೇಲುಕೋಟೆಯ ಮಂಡ್ಯದ ಆಯ್ಯಂಗಾರರನ್ನು ಸಾಮೂಹಿಕ ಹತ್ಯೆ ಮಾಡಿದ್ದನ್ನು ಚರಿತ್ರೆಕಾರರು ಕೆಲವರು ಮುಚ್ಚಿಟ್ಟು ಮುಸ್ಲಿಂ ಓಲೈಕೆ ಮಾಡುತ್ತಾ ಬರಲಾಗಿದೆ. ಈ ಎಲ್ಲಾ ಅಂಶಗಳ ಬಹಿರಂಗ ಸ್ಫೋಟ ಈ ನಾಟಕ ‘ಟಿಪ್ಪು ನಿಜಕನಸುಗಳು’ ಎಂದರು.
ನಾಟಕ ಪ್ರದರ್ಶನ
ಇದೇ ಜ.14 ಮತ್ತು 15ರಂದು ಸಂಜೆ 6.00 ಗಂಟೆಗೆ ‘ಟಿಪ್ಪು ನಿಜಕನಸುಗಳು’ ನಾಟಕದ 25ನೇ ಪ್ರದರ್ಶನವು ಮಂಡ್ಯನಗರದ ನಾಲ್ವಡಿ ಕೃಷ್ಣರಾಜ ಒಡೆಯರ್’ ರಂಗಮಂದಿರದಲ್ಲಿ ನಡೆಯಲಿದೆ, ಈ ನಾಟಕ ಪ್ರದರ್ಶನಕ್ಕೆ ರೂ.100 ಪ್ರವೇಶ ದರ ನಿಗಧಿಪಡಿಸಲಾಗಿದೆ.
ಗೋಷ್ಠಿಯಲ್ಲಿ ಮುಖಂಡರಾದ ಜೈಶಂಕರ್, ಶ್ರೀಪಾದು ಹಾಗೂ ಕ್ರಾಂತಿಮಂಜು ಉಪಸ್ಥಿತರಿದ್ದರು.