ರಾಜ್ಯ ಸರ್ಕಾರವು ಯು. ಯು. ಸಿ.ಎಮ್. ಎಸ್ ಅನ್ನು ಅನುಷ್ಠಾನಗೊಳಿಸಲು ಉನ್ನತ ಶಿಕ್ಷಣ ಇಲಾಖೆಗೆ 15 ಕೋಟಿ ಅನುದಾನವನ್ನು ನೀಡಿರುವುದನ್ನುಆಲ್ ಇಂಡಿಯಾ ಡೆಮಾಕ್ರಟಿಕ್ ಸ್ಟೂಡೆಂಟ್ಸ್ ಆರ್ಗನೈಸೇಶನ್ (AIDSO) ರಾಜ್ಯ ಸಮಿತಿಯು ಬಲವಾಗಿ ವಿರೋಧಿಸಿದೆ.
ಈಗಾಗಲೇ ಯು.ಯು.ಸಿ.ಎಂ.ಎಸ್ ನಿಂದ ವಿದ್ಯಾರ್ಥಿಗಳು ಹಲವಾರು ಸಮಸ್ಯೆಗಳಿಂದ ಬಳಲುತ್ತಿದ್ದಾರೆ.
ಎಷ್ಟೋ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಯು.ಯು.ಸಿ.ಎಂ.ಎಸ್ ನಿಂದ ವಿದ್ಯಾರ್ಥಿ ವೇತನ, ಪರೀಕ್ಷಾ ಪ್ರವೇಶ ಪತ್ರ, ಪರೀಕ್ಷಾ ಫಲಿತಾಂಶ ಸರಿಯಾಗಿ ದೊರೆತಿಲ್ಲ. ಹಲವು ವಿಶ್ವವಿದ್ಯಾನಿಲಯಗಳಲ್ಲಿ UUCMS ನಿಂದಾಗಿ ಅಂತಿಮ ವರ್ಷದ ಪದವಿ ಓದುತ್ತಿರುವ ವಿದ್ಯಾರ್ಥಿಗಳಿಗೆ ಮೊದಲನೇ, ಎರಡನೇ ಸೆಮಿಸ್ಟರ್ ಫಲಿತಾಂಶ ಕೂಡ ಪ್ರಕಟವಾಗಿಲ್ಲ. ಎಷ್ಟೋ ಬಡ ವಿದ್ಯಾರ್ಥಿಗಳು ಯು.ಯು.ಸಿ.ಎಂ.ಎಸ್ ಪೋರ್ಟಲ್ ನಲ್ಲಿ ಅಪ್ಲಿಕೇಶನ್ ಹಾಕಲು ತಿಳಿಯದೇ ಕಾಲೇಜು ಪ್ರವೇಶಾತಿಯಿಂದ ವಂಚಿತರಾಗಿದ್ದಾರೆ. ಹೀಗಿರುವಾಗ ಹಣ ಬಿಡುಗಡೆ ಮಾಡಿರುವುದು ಖಂಡನೀಯ ಎಂದು ಎಐಡಿಎಸ್ಓ ಮಂಡ್ಯ ಜಿಲ್ಲಾ ಸಂಚಾಲಕಿ ಚಂದ್ರಕಲಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
UUCMS ನಿಂದ ಆಗಿರುವ ಸಮಸ್ಯೆಗಳನ್ನು ಗಮನಕ್ಕೆ ತೆಗೆದುಕೊಂಡು, ತಾಂತ್ರಿಕ ಪೋರ್ಟಲ್ ಬದಲು, ಪರ್ಯಾಯ ವ್ಯವಸ್ಥೆಯನ್ನು ಸರ್ಕಾರ ಮಾಡಬೇಕಿತ್ತು. ಆದರೆ ಹಲವಾರು ಗೊಂದಲಗಳು, ತೊಂದರೆಗಳಿರುವ ಯು.ಯು.ಸಿ.ಎಂ.ಎಸ್ ಅನ್ನು ಅನುಷ್ಠಾನಗೊಳಿಸಲು ರಾಜ್ಯ ಸರ್ಕಾರ ಹಣ ಬಿಡುಗಡೆ ಮಾಡಿರುವುದು ವಿದ್ಯಾರ್ಥಿ ವಿರೋಧಿ ನಿಲುವಾಗಿದೆ, ಕೂಡಲೇ ರಾಜ್ಯ ಸರ್ಕಾರವು ವಿದ್ಯಾರ್ಥಿಗಳ ಶೈಕ್ಷಣಿಕ ಹಿತದೃಷ್ಟಿಯಿಂದ ವಿದ್ಯಾರ್ಥಿಗಳ ಪರವಾಗಿ ನಿಲುವು ತೆಗೆದುಕೊಳ್ಳಬೇಕೆಂದು ಅವರು ಆಗ್ರಹಿಸಿದ್ದಾರೆ.