ವರದಿ: ಪ್ರಭು ವಿ ಎಸ್
ಮದ್ದೂರು ತಾಲೂಕಿನ ಆಲೂರು ಹಾಲು ಉತ್ಪಾದಕರ ಸಹಕಾರ ಸಂಘಕ್ಕೆ ಜೆಡಿಎಸ್ ಬೆಂಬಲಿತರಾದ ಅಧ್ಯಕ್ಷರಾಗಿ ಎ.ಆರ್. ನಟರಾಜ್, ಉಪಾಧ್ಯಕ್ಷ ಸ್ಥಾನಕ್ಕೆ ಎ.ಎಲ್.ಸುರೇಶ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಮದ್ದೂರು ತಾಲೂಕಿನ ಆಲೂರು ಎಂಪಿಸಿಎಸ್ ಕಚೇರಿಯಲ್ಲಿ ಶುಕ್ರವಾರ ನಿಗಧಿಯಾಗಿದ್ದ ಚುನಾವಣೆ ವೇಳೆ ಅಧ್ಯಕ್ಷ ಸ್ಥಾನಕ್ಕೆ ಎ.ಆರ್.ನಟರಾಜ್, ಉಪಾಧ್ಯಕ್ಷ ಸ್ಥಾನಕ್ಕೆ ಎ.ಎಲ್.ಸುರೇಶ್ ನಾಮಪತ್ರ ಸಲ್ಲಿಸಿದ್ದು, ಇವರನ್ನು ಹೊರತುಪಡಿಸಿ ಬೇರಾರು ನಾಮಪತ್ರ ಸಲ್ಲಿಸದ ಕಾರಣ ಚುನಾವಣಾಧಿಕಾರಿ ವೆಂಕಟಚಲಮೂರ್ತಿ ಅವಿರೋಧ ಆಯ್ಕೆಯನ್ನು ಪ್ರಕಟಿಸಿದರು.ನೂತನ ಅಧ್ಯಕ್ಷ, ಉಪಾಧ್ಯಕ್ಷರನ್ನು ಸಂಘದ ನಿರ್ದೇಶಕರು, ಸ್ಥಳೀಯ ಮುಖಂಡರು ಅಭಿನಂದಿಸಿದರು.
ಈ ಸಂದರ್ಭದಲ್ಲಿ ಅಧ್ಯಕ್ಷ ಎ.ಆರ್. ನಟರಾಜ್ ಮಾತನಾಡಿ, ಸಂಘದ ಅಭಿವೃದ್ಧಿಗೆ ಶಕ್ತಿ ಮೀರಿ ಶ್ರಮಿಸುವ ಜತೆಗೆ ಸಹಕಾರ ಸಂಘದ ಶ್ರೇಯೋಭಿವೃದ್ಧಿಗೆ ತಮ್ಮ ಸಹಕಾರ ಅಗತ್ಯವೆಂದರು. ಮುಂದಿನ ದಿನಗಳಲ್ಲಿ ಉತ್ಪಾದಕರಿಗೆ ಅಗತ್ಯಕ್ಕೆ ಅನುಗುಣವಾಗಿ ಬೇಕಾಗುವ ಸೌಲಭ್ಯಗಳನ್ನು ಕಲ್ಪಿಸಿಕೊಡಲು ಪ್ರಾಮಾಣಿಕ ಪ್ರಯತ್ನ ಮಾಡುವ ಜತೆಗೆ ಒಕ್ಕೂಟದಿಂದ ಸಿಗುವ ಹಲವು ಸೌಲಭ್ಯಗಳನ್ನು ಕಲ್ಪಿಸಿಕೊಡಲು ಪ್ರಾಮಾಣಿಕ ಪ್ರಯತ್ನ ನಡೆಸುವುದಾಗಿ ಹೇಳಿದರು.
ಈ ವೇಳೆ ನಿರ್ದೇಶಕರಾದ ಉಮೇಶ್, ಮಹದೇವ, ಕೃಷ್ಣ, ಡಿ.ಶಿವಲಿಂಗಯ್ಯ, ಪುಟ್ಟಲಿಂಗಯ್ಯ, ಭಾಗ್ಯ, ಅನ್ನಪೂರ್ಣ, ಶಿವಪ್ಪ, ಶೇಖರ್, ಗ್ರಾ.ಪಂ. ಮಾಜಿ ಅಧ್ಯಕ್ಷ ಉದಯ್, ಸ್ಥಳೀಯ ಮುಖಂಡರಾದ ನವನೀತ್, ಸಿದ್ದರಾಮು, ಕೃಷ್ಣ, ವಿವೇಕ್, ಕೆ. ಶ್ರೀಧರ್, ಎಚ್. ಕೃಷ್ಣ, ಎ.ಸಿ. ಜಯರಾಮು ಉಪಸ್ಥಿತರಿದ್ದರು.