ವಿಶ್ವಜ್ಞಾನಿ, ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರನ್ನು ಆರಾಧಿಸುವವರ ಸಂಖ್ಯೆ ಹೆಚ್ಚಾಗಿದೆ, ಅನುಸರಿಸುವವರು ಕಡಿಮೆ ಜನ, ನಿಜವಾಗಿಯೂ ಅನುಸರಿಸುವವರ ಸಂಖ್ಯೆ ಹೆಚ್ಚಾಗಬೇಕಾಗಿದೆ. ಆಗಲೇ ಸಮಾಜದಲ್ಲಿ ಪರಿವರ್ತನೆ ಸಾಧ್ಯ ಮೈಸೂರಿನ ವಿಶ್ವ ಮೈತ್ರಿ ಬುದ್ಧ ವಿಹಾರದ ಡಾ. ಕಲ್ಯಾಣ ಸಿರಿ ಬಂತೇಜಿ ಹೇಳಿದರು.
ಮಂಡ್ಯ ನಗರದ ಸುಭಾಷ್ ನಗರದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಬುದ್ದಯಾನ ಏರ್ಪಡಿಸಿದ್ದ ಹಿರಿಯ ಸಾಹಿತಿ ಎಂ.ಎಸ್.ಪರಶಿವಮೂರ್ತಿ ಅವರ ಸನ್ಮಾನ ಹಾಗೂ ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ದೇಶದಲ್ಲಿ ಪ್ರಜಾಪ್ರಭುತ್ವ ಜಾರಿಯಲ್ಲಿದ್ದರೂ ಶೋಷಿತರಿಗೆ ರಾಜಕೀಯ ಸ್ಥಾನಮಾನ ದೊರೆತಿದೆಯೇ ಹೊರತು ಧಾರ್ಮಿಕ ಹಾಗೂ ಸಾಮಾಜಿಕವಾಗಿ ಸಮಾನತೆ ಸಿಕ್ಕಿಲ್ಲ, ಸಮಾಜದಲ್ಲಿನ ಮೇಲು-ಕೀಳು, ಜಾತಿ ಪದ್ಧತಿ, ಅಸ್ಪೃಶ್ಯತೆ, ಶೋಷಣೆ, ಅನಿಷ್ಟ ಪದ್ಧತಿಗಳು ಶೋಷಿತ ಜನರ ಬದುಕಿಗೆ ಕಂಟಕವಾಗಿವೆ ಎಂದು ದೂರಿದರು.
ಬೌದ್ಧ ಧರ್ಮ ದೇಶದಲ್ಲಿನ ಪ್ರಜಾಸತಾತ್ಮಕ ಚಳವಳಿ, ಪ್ರಜಾಪ್ರಭುತ್ವ ವ್ಯವಸ್ಥೆಯ ಗಟ್ಟಿದನಿಯಾಗಿದ್ದು, ಬುದ್ಧನಿಲ್ಲದೆ ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಕಲ್ಪಿಸಿಕೊಳ್ಳಲು ಸಾಧ್ಯವಿಲ್ಲ. ಜನರ ಪ್ರತಿ ಸಮಸ್ಯೆಗೂ ಬೌದ್ಧಧರ್ಮದಲ್ಲಿ ಪರಿಹಾರ ಮಾರ್ಗ ಇದೆ. ಬುದ್ಧನ ತತ್ವಗಳನ್ನು ಅರಿಯಬೇಕಾಗಿದೆ ಎಂದು ತಿಳಿಸಿದರು.
ಇದೇ ವೇಳೆ ಸಾಹಿತಿ ಎಂ.ಎಸ್. ಪರಶಿವಮೂರ್ತಿ ರವರನ್ನು ಸನ್ಮಾನಿಸಿ ಗೌರವಿಸಲಾಯಿತು, ಪ್ರತಿಭಾನ್ವಿತ ವಿದ್ಯಾರ್ಥಿಗಳಾದ ಇಂಪನ ಎಂ.ಎನ್. ಹಂಸ ಎಂ.ಬಿ, ಸಿಂಚನ ಎಂ, ಪೂಜಾ ಶ್ರೀನಿವಾಸನ್, ಕಿಶನ್ ಕುಮಾರ್ ಎಂ. ಆರ್, ಭಾರ್ಗವಿ ಎಂ.ಎಸ್, ಕುಶಾಲ್ ಎಂ.ಸಿ, ದೀಪ್ತಿ ಎಂ.ಎಸ್ ಅವರನ್ನು ಪುರಸ್ಕರಿಸಲಾಯಿತು.
ನಿವೃತ್ತ ಪ್ರಧಾನ ಅಭಿಯಂತರ ಎಂ.ಬಿ ಜಯಶಂಕರ್ ಅಧ್ಯಕ್ಷತೆ ವಹಿಸಿದ್ದರು. ವಿಶ್ರಾಂತ ಪ್ರೊಫೆಸರ್ ಡಾ. ಮಹದೇವ್, ಡಾ. ಪಶುಪತಿ, ಎಂ.ಸಿ ಬಾಲಕೃಷ್ಣ, ನಗರಸಭೆ ಸದಸ್ಯ ಎಂ.ಸಿ. ಶಿವಪ್ರಕಾಶ್, ಪತ್ರಕರ್ತ ಎಂ.ಎಸ್ ಮೂರ್ತಿ, ಎಂ,ಪಿ ಶಿವರಾಮಮೂರ್ತಿ, ಎಂ.ಬಿ.ಶಿವಶಂಕರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.