ಸಾರ್ವಜನಿಕ ಕೆಲಸವನ್ನು ಪ್ರಾಮಾಣಿಕವಾಗಿ ಅಧಿಕಾರಿಗಳು ನಿರ್ವಹಣೆ ಮಾಡಿದರೆ, ಅವರು ಸದಾಕಾಲ ಜನರ ಮನಸ್ಸಿನಲ್ಲಿ ಉಳಿಯುತ್ತಾರೆ ಎಂದು ಮದ್ದೂರು ಶಾಸಕ ಡಿ.ಸಿ.ತಮ್ಮಣ್ಣ ತಿಳಿಸಿದರು
ಮದ್ದೂರು ತಾಲ್ಲೂಕಿನ ಹೊನ್ನನಾಯಕನಹಳ್ಳಿಯಲ್ಲಿ ನಡೆದ ”ಜಿಲ್ಲಾಧಿಕಾರಿಗಳ ನಡೆ ಹಳ್ಳಿಗಳ ಕಡೆ” ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಶಾಸಕನಾಗುವ ಮೊದಲು ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದೆ, ಆ ಸಮಯದಲ್ಲಿ ಮಾಡಿದ ಒಳ್ಳೆಯ ಕೆಲಸಗಳು, ಚುನಾವಣೆಗಳ ಗೆಲುವಿಗೆ ಸಹಕಾರ ನೀಡಿತು. ರೈತರು ಜೀವನದಲ್ಲಿ ನೊಂದ ಜೀವಿಗಳು, ಅವರ ಕೆಲಸಗಳನ್ನು ಆದ್ಯತೆಯ ಮೇಲೆ ಮಾಡಿ ಕೊಡಿ ಎಂದರು.
ಸರ್ವೆ ಇಲಾಖೆಯಲ್ಲಿ ಕೆಳಮಟ್ಟದಲ್ಲಿ ನಡೆಯುವ ನಿರ್ಲಕ್ಷ್ಯ ದಿಂದ ಒಂದೇ ಭೂಮಿಗೆ ಮೂರು ಸ್ಕೆಚ್ ಮಾಡುವುದರಿಂದ ರೈತರು ಹಲವಾರು ದಿನ ಕಚೇರಿಗೆ ಅಲೆದಾಡಬೇಕಾಗುತ್ತದೆ. ಸಾರ್ವಜನಿಕರಿಗೆ ಮಾಹಿತಿ ಒದಗಿಸಲು ವಿವಿಧ ಇಲಾಖೆಯಿಂದ ದೊರಕುವ ಸರ್ಕಾರದ ಯೋಜನೆಗಳ ಬಗ್ಗೆ ಮಾಹಿತಿ ಮಳಿಗೆಗಳನ್ನು ಅನಾವರಣಗೊಳಿಸಿದ್ದಾರೆ. ಸಾರ್ವಜನಿಕರು ಸದುಪಯೋಗ ಪಡಿಸಿಕೊಳ್ಳಬೇಕು ಎಂದರು.
ಕಾರ್ಯಕ್ರಮದಲ್ಲಿ ಅಂಗವಿಕಲ ವೇತನ ಯೋಜನೆಯಡಿ ಆದೇಶ ಪತ್ರ, ವಿಧವಾ ವೇತನ ಕಾರ್ಡ್, ಇಂದಿರಾ ಗಾಂಧೀ ವೃದ್ದಾಪ್ಯ ಯೋಜನೆ ಕಾರ್ಡ್, ಸಂಧ್ಯಾ ಸುರಕ್ಷಾ ಕಾರ್ಡ್, ಕಾರ್ಮಿಕ ಇಲಾಖೆಯಿಂದ ಈ ಶ್ರಮ್ ಕಾರ್ಡ್, ಕಟ್ಟಡ ಕಾರ್ಮಿಕರ ಗುರುತಿನ ಚೀಟಿ ವಿತರಣೆ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಡಾ.ಹೆಚ್.ಎನ್.ಗೋಪಾಲಕೃಷ್ಣ, ಅಪರ ಜಿಲ್ಲಾಧಿಕಾರಿ ಡಾ.ಹೆಚ್.ಎಲ್.ನಾಗರಾಜು, ಕೃಷಿ ಇಲಾಖೆಯ ಜಂಟಿ ನಿರ್ದೇಶಕ ವಿ.ಎಸ್.ಅಶೋಕ್ ಸೇರಿದಂತೆ ಇನ್ನಿತರ ಅಧಿಕಾರಿಗಳು ಉಪಸ್ಥಿತರಿದ್ದರು.