ಹಾಸನದ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅವರ ತಾಯಿ ಭವಾನಿ ರೇವಣ್ಣ ವಿರುದ್ಧ ದಾಖಲಾಗಿದ್ದ ಅಪಹರಣ ಪ್ರಕರಣದಲ್ಲಿ ರಾಜ್ಯ ಹೈಕೋರ್ಟ್ ಶುಕ್ರವಾರ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ.
ಆದರೆ ಭವಾನಿ ಅವರು ಎಸ್ಐಟಿ ತನಿಖೆಗೆ ಸಹಕರಿಸಬೇಕು. ಹಾಸನ ಅಥವಾ ಮೈಸೂರಿನ ಕೆ.ಆರ್. ನಗರ ಪ್ರವೇಶಿಸದಂತೆ ನ್ಯಾಯಾಲಯವು ಸೂಚನೆ ನೀಡಿದೆ.
ಜೂನ್ 1 ರಂದು, ವಿಶೇಷ ತನಿಖಾ ತಂಡವು (ಎಸ್ಐಟಿ) ಭವಾನಿ ಅವರಿಗೆ ತಮ್ಮ ಮಗನ ವಿರುದ್ಧ ಲೈಂಗಿಕ ಕಿರುಕುಳದ ಆರೋಪಕ್ಕೆ ಸಂಬಂಧಿಸಿದ ಅಪಹರಣ ಪ್ರಕರಣದಲ್ಲಿ ನಿಮ್ಮನ್ನು ಪ್ರಶ್ನಿಸುವ ಅಗತ್ಯವಿದ್ದು, ತಮ್ಮ ಮನೆಗೆ ಅಧಿಕಾರಿಗಳು ಹಾಜರಾಗುತ್ತಾರೆ ಎಂದು ನೋಟಿಸ್ ನೀಡಿತ್ತು.
ಅದೇ ದಿನ ‘ಚೆನ್ನಾಂಬಿಕಾ ನಿಲಯ’ದ ಭವಾನಿ ಅವರ ಮನೆಗೆ ಎಸ್ಐಟಿ ದಳದ ತಂಡವೊಂದು ಆಗಮಿಸಿದಾಗ ಅವರು ಅಲ್ಲಿರಲಿಲ್ಲ.ಅವರ ಬಂಧನಕ್ಕೆ ಎಸ್ಐಟಿ ತಂಡ ಮೈಸೂರು, ಹಾಸನ, ಬೆಂಗಳೂರು, ಮಂಡ್ಯ, ರಾಮನಗರ ಸೇರಿದಂತೆ ವಿವಿಧೆಡೆ ಭವಾನಿ ಪತ್ತೆಗಾಗಿ ಶೋಧ ನಡೆಸಿತ್ತು.
ಆಕೆಯ ಸಂಬಂಧಿಕರ ಮನೆಗಳಲ್ಲಿಯೂ ಸಹ ಹುಡುಕಾಟ ನಡೆಸಲಾಯಿತು. ಆದರೆ, ಈ ತಿಂಗಳ ಆರಂಭದಿಂದಲೂ ಅವರು ಪತ್ತೆಯಾಗಿರಲಿಲ್ಲ.ಎಸ್ಐಟಿ ಅಧಿಕಾರಿಗಳು ಭವಾನಿ ರೇವಣ್ಣ ಅವರ ಪತ್ತೆ ಮಾಡುವಷ್ಟರಲ್ಲಿಯೇ ಅಪಹರಣ ಪ್ರಕರಣದಲ್ಲಿ ನಿರೀಕ್ಷಣಾ ಜಾಮೀನು ಸಿಕ್ಕಿದೆ.