-
ಇಂದಿನಿಂದ ಬೃಂದಾವನ ಪ್ರವೇಶಕ್ಕೆ ನಿರ್ಬಂಧ
- ಭಯಭೀತಗೊಂಡ ಸ್ಥಳೀಯರು-ಪ್ರವಾಸಿಗರು
ವಿಶ್ವವಿಖ್ಯಾತ ಕೃಷ್ಣರಾಜಸಾಗರ ಜಲಾಶಯ (ಕೆ.ಆರ್.ಎಸ್)ದ ಬಳಿ ಇದಕ್ಕಿದ್ದಂತೆ ಚಿರತೆ ಕಾಣಿಸಿಕೊಂಡಿದ್ದು, ಸುತ್ತಮುತ್ತಲಿನ ಜನರನಷ್ಟೆ ಅಲ್ಲದೇ, ಪ್ರವಾಸಿಗರನ್ನು ಭಯ ಭೀತಗೊಳಿಸಿದೆ.
ಕೆಆರ್ಎಸ್ ಬೃಂದಾವನ ಉದ್ಯಾನದ ಸುತ್ತಮುತ್ತ ಚಿರತೆ ಪ್ರತ್ಯಕ್ಷಗೊಂಡ ಹಿನ್ನಲೆಯಲ್ಲಿ ಪ್ರವಾಸಿಗರು ಹಾಗೂ ಸಾರ್ವಜನಿಕರಲ್ಲಿ ಆತಂಕ ಹೆಚ್ಚಾಗಿರುವುದರಿಂದ ಸದ್ಯಕ್ಕೆ ಬೃಂದಾವನ ಪ್ರವೇಶಕ್ಕೆ ನಿರ್ಬಂಧ ಹೇರಲಾಗಿದೆ.
ಶನಿವಾರ ಮಧ್ಯಾಹ್ನ ಸಮಯದಲ್ಲಿ ನಿಗಮದ ಕೆಲಸಗಾರು ಅಣೆಕಟ್ಟೆ ಬಳಿ ಗಿಡ-ಗುಂಟೆ ತೆರವು ಮಾಡುತ್ತಿದ್ದ
ವೇಳೆ ಚಿರತೆ ಅಣೆಕಟ್ಟೆಯ ದಕ್ಷಿಣ ದ್ವಾರದ ಬಳಿಯ ನಗುವನ ತೋಟದಿಂದ ಅಣೆಕಟ್ಟೆ ಮೆಲ್ಭಾಗದಲ್ಲಿ ನಡೆದು
ಬರುತ್ತಿರುವುದನ್ನು ಗಮನಿಸಿದ ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳು, ತಕ್ಷಣವೇ ಕರ್ನಾಟಕ ಕೈಗಾರಿಕಾ ಭದ್ರತಾ ಪಡೆ ಸಿಬ್ಬಂದಿಗಳಿಗೆ ಮಾಹಿತಿ ನೀಡಿದ್ದಾರೆ.
ಕೆಲಸಗಾರರು ನೀಡಿದ ಮಾಹಿತಿ ಮೇರೆಗೆ ಕರ್ನಾಟಕ ಕೈಗಾರಿಕಾ ಭದ್ರತಾ ಪಡೆ ಉಸ್ತುವಾರಿ ಅಧಿಕಾರಿ ಸಂತೋಷ ಸ್ಥಳ ಪರಿಶೀಲನೆ ನಡೆಸಿ, ಚಿರತೆ ನಡೆದು ಹೋಗಿರುವ ಹೆಜ್ಜೆ ಗುರುತು ಕಂಡು ಬಂದಿದೆ. ಪ್ರವಾಸಿಗರ ಸುರಕ್ಷತೆ ದೃಷ್ಠಿಯಿಂದ ಶನಿವಾರದಿಂದ ಪ್ರವಾಸಿಗರಿಗೆ ಬೃಂದಾವನಕ್ಕೆ ಪ್ರವೇಶಕ್ಕೆ ನಿರ್ಬಂಧ ಮಾಡಿರುವುದಾಗಿ ನಿಗಮದ
ಸಹಾಯಕ ಕಾರ್ಯಪಾಲಕ ಅಭಿಯಂತರ ಘಾರೂಕ್ ಅಬು ತಿಳಿಸಿದ್ದಾರೆ.
ಇದನ್ನೂ ಓದಿ:ದೇವರ ದರ್ಶನದಿಂದ ಮನಸ್ಸಿಗೆ ನೆಮ್ಮದಿ
ಅಣೆಕಟ್ಟೆಯ ಎರಡು ಕಡೆಯ ಮೇಲ್ಭಾಗದಲ್ಲಿ ಪ್ರವಾಸಿಗರು ಒಳಗೆ ಬಾರದಂತೆ ಸಿಬ್ಬಂದಿಗಳನ್ನು ಕಾವೇರಿ ನೀರಾವರಿ ನಿಗಮದ ಮತ್ತು ಕೆ.ಎಸ್.ಐ.ಎಸ್.ಎಫ್ ಸಿಬ್ಬಂದಿ ತಡೆ ಹಿಡಿದು ಮಾಹಿತಿ ನೀಡುತ್ತಿರುವ ದೃಶ್ಯ ಕಂಡು ಬಂದಿತು. ಪ್ರವಾಸಿಗರು ಹಾಗೂ ಸಾರ್ವಜನಿಕರು ಹಿಂದಿರುಗಿ ಹೋಗುತ್ತಿರುವುದರಿಂದ ಹೆದ್ದಾರಿಯಲ್ಲಿ ವಾಹನಗಳ
ದಟ್ಟಣೆ ಹೆಚ್ಚಾಗಿ ವಾಹನ ಸವಾರರು ಪರದಾಡುವ ಸ್ಥಿತಿ ನಿರ್ಮಾಣವಾಗಿತ್ತು.
ಚಿರತೆ ಪ್ರತ್ಯಕ್ಷ ಕುರಿತು ಶ್ರೀರಂಗಪಟ್ಟಣ ವಲಯ ಅರಣ್ಯ ಅಧಿಕಾರಿಗೆ ಸ್ಥಳೀಯ ಅಧಿಕರಿಗಳು ಮಾಹಿತಿ ನೀಡಿದ ಮೇರಗೆ ಸ್ಥಳಕ್ಕೆ ಆಗಮಿಸಿದ ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿ, ಚಿರತೆ ಸೆರೆ ಹಿಡಿಯಲು ರಾಯಲ್ ಆರ್ಕಿಡ್ ಬಳಿ ಬೋನ್ ಇರಿಸಿದ್ದಾರೆ.