ಧರ್ಮಸ್ಥಳದಲ್ಲಿ ಅತ್ಯಾಚಾರಕ್ಕೀಡಾಗಿ ಕ್ರೂರವಾಗಿ ಕೊಲೆಯಾದ ಸೌಜನ್ಯ ಪ್ರಕರಣದ ತನಿಖೆಗೆ ರಾಜ್ಯದ ನುರಿತ ವಿಶೇಷ ತನಿಖಾಧಿಕಾರಿಗಳ ತಂಡ ರಚಿಸಿ, ನಿಜವಾದ ಆರೋಪಿಗಳನ್ನು ಪತ್ತೆ ಹಚ್ಚಲು ಸಮಗ್ರ ಪ್ರಕರಣವನ್ನು ಮರು ತನಿಖೆ ನಡೆಸುವಂತೆ ಕರ್ನಾಟಕ ದಲಿತ ಸಂಘರ್ಷ ಸಮಿತಿಯು ಮಂಡ್ಯ ಜಿಲ್ಲಾಧಿಕಾರಿ ಕಚೇರಿ ಎದುರು ಸೋಮವಾರ ಪ್ರತಿಭಟನೆ ನಡೆಸಿದರು.
ಸೌಜನ್ಯ ಪ್ರಕರಣದಲ್ಲಿ ಸಿಬಿಐ ತನಿಖೆ ನಡೆದರೂ ಕೂಡ ಅವರ ಕುಟುಂಬದವರಿಗೆ ನ್ಯಾಯ ಸಿಗದೇ ಇರುವುದರಿಂದ ರಾಜ್ಯ ಸರ್ಕಾರ ಸೂಕ್ತ ತನಿಖೆ ನಡೆಸಿ, ಅವರ ಕುಟುಂಬಕ್ಕೆ ನ್ಯಾಯ ಒದಗಿಸಬೇಕು. ಅಲ್ಲದೇ ಶಿವಮೊಗ್ಗದಲ್ಲಿ ಅಪ್ರಾಪ್ತ ದಲಿತ ಹೆಣ್ಣು ಮಗಳ ಮೇಲೆ ಅತ್ಯಾಚಾರವೆಸಗಿರುವ ಕ್ರೈಸ್ತ ಪಾದ್ರಿ ಪ್ರಾನ್ಸಿಸ್ ಡಿಸೋಜನೆಂಬ ಹೆಣ್ಣು ಭಾಕನಿಗೆ ಕಠಿಣ ಶಿಕ್ಷೆಕೊಡಿಸಲು ಸದುರ್ಥ ತನಿಖಾ ತಂಡವನ್ನು ರಚಿಸಿ ತನಿಖೆಗೊಳಪಡಿಸಬೇಕೆಂದು ಒತ್ತಾಯಿಸಿ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿ ಹಾಗೂ ರಾಷ್ಟ್ರಪತಿಯವರಿಗೆ ಮನವಿ ಸಲ್ಲಿಸಿದರು.
ಧರ್ಮಸ್ಥಳದ ಸಹೋದರಿ ಸೌಜನ್ಯಳ ಮೇಲೆ ಕ್ರೂರವಾಗಿ ಅತ್ಯಾಚಾರ ಮಾಡಿ ಬರ್ಬರವಾಗಿ ಕೊಲೆ ಮಾಡಿದ ಪ್ರಕರಣ ಸಿಬಿಐ ತನಿಖೆಯಿಂದಲೂ ನ್ಯಾಯಾಲಯದಲ್ಲಿ ಖುಲಾಸೆಯಾಗಿದೆ ಎಂದರೆ, ಈ ಪ್ರಕರಣದ ತನಿಖೆಯಲ್ಲಿ ಕಾಣದ ಕೈಗಳು ಮತ್ತು ಅಧಿಕಾರಸ್ಥರ ಹಸ್ತಕ್ಷೇಪಗಳು ಮಿತಿಮೀರುವುದು ಮೇಲ್ನೋಟಕ್ಕೆ ಕಂಡು ಬರುತ್ತದೆ, ಅಲ್ಲದೇ ಈ ಖುಲಾಸೆ ಪ್ರಕರಣದಲ್ಲಿ ಅಪರಾಧಿಯನ್ನು ಗುರುತಿಸುವಲ್ಲಿ ಸಿಬಿಐ ಹಾಗೂ ರಾಜ್ಯ ಪೊಲೀಸರರು ವಿಫಲರಾಗಿದ್ದಾರೆ ಎಂಬುದು ಬಟಾಬಯಲಾಗಿದೆ ಎಂದು ಕಿಡಿಕಾರಿದರು.
ಭಾರತ ಸಂವಿಧಾನಾತ್ಮಕವಾಗಿ ಮಹಿಳೆ, ಮಕ್ಕಳಿಗೆ ಮತ್ತು ಸಮಸ್ತ ನಾಗರೀಕರಿಗೆ ರಕ್ಷಣೆ ಮತ್ತು ನ್ಯಾಯ ಕೊಡಿಸುವ ಜವಾಬ್ದಾರಿ ಒತ್ತ ಸರ್ಕಾರಗಳು ಮಹಿಳೆ ಮತ್ತು ಮಕ್ಕಳ ಹಾಗೂ ನಾಗರೀಕರ ರಕ್ಷಣಾ ವಿಚಾರದಲ್ಲಿ ಅತ್ಯಂತ ನಿರ್ಲಕ್ಷ್ಯ ಮತ್ತು ನಿರ್ಲಜ್ಜವಾಗಿ ನಡೆದುಕೊಳ್ಳುತ್ತಿರುವ ಕಾರಣ ಜನಸಾಮಾನ್ಯರ ಮೇಲಿನ ಕೊಲೆ, ಅತ್ಯಾಚಾರ, ದೌರ್ಜನ್ಯ-ದಬ್ಬಾಳಿಕೆಗಳು ಮಿತಿ ಮೀರುತ್ತಿರುವುದು ವಿಷಾದದ ಸಂಗತಿ. ಈ ಮೂಲಕ ಶ್ರೀಮಂತ ಮತ್ತು ಬಲಾಢ್ಯ ಜಾತಿ ಸಮುದಾಯಗಳ ರಕ್ಷಣೆಗೆ ಮಾತ್ರ ಆಡಳಿತ ಯಂತ್ರ ಬಳಕೆಯಾಗುತ್ತಿದೆ ದೂರಿದರು.
ರಾಜ್ಯ ಹಾಗೂ ದೇಶವನ್ನು ಗಮನಿಸಿದರೆ ಹೆಣ್ಣು ಮಕ್ಕಳ ಮೇಲೆ ಲಕ್ಷಾಂತರ ದೌರ್ಜನ್ಯ ಪ್ರಕರಣಗಳು ನಡೆದಿರುವುದು ಕಾಣಸಿಗುತ್ತದೆ, ಹಾಗಾಗಿ ನಮ್ಮ ಸರ್ಕಾರಗಳು ಭಾರತದ ಸಂವಿಧಾನಾತ್ಮಕವಾಗಿ ನಡೆದುಕೊಳ್ಳಬೇಕೆಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ದಸಂಸ ರಾಜ್ಯಾಧ್ಯಕ್ಷ ವೆಂಕಟಗಿರಿಯಯ್ಯ, ಮೈಸೂರು ವಿಭಾಗೀಯ ಸಂಚಾಲಕ ಕೆ.ಎಂ.ಎಲ್ ಕುಮಾರ್ ಕೆರಗೋಡು, ಜಿಲ್ಲಾಧ್ಯಕ್ಷ ಕೆ.ಎಂ.ಶ್ರೀನಿವಾಸ್, ಜಿಲ್ಲಾ ಸಹ ಕಾರ್ಯದರ್ಶಿ ಎಸ್ ಕುಮಾರ್, ಮುಖಂಡರಾದ ಆನಂದ್, ಸುರೇಶ್ ಮರಳಗಾಲ, ಬೆಂಜಮಿನ್ ಥಾಮಸ್, ಭಾಗ್ಯಮ್ಮ ಆತಗೂರು, ಗೀತಾ ಮೇಲುಕೋಟೆ, ಸುಕನ್ಯ ದುದ್ದ ಮತ್ತಿತರರಿದ್ದರು ಭಾಗವಹಿಸಿದ್ದರು.