ಮಂಡ್ಯ ಜಿಲ್ಲೆಯ ಮಾದಿಗ ಸಮುದಾಯದ ಅಭಿವೃದ್ದಿಗೆ ಬೇಕಾದ ಸಹಕಾರ ಮಾಡುವ ಜೊತೆಗೆ ಮುಂದಿನ ದಿನಗಳಲ್ಲಿ ಸರ್ಕಾರ ನಾಮನಿರ್ದೇಶನದಲ್ಲಿ ಜನಾಂಗಕ್ಕೆ ನ್ಯಾಯ ಕಲ್ಪಿಸಲಾಗುವುದು ಎಂದು ಕೃಷಿ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಮಂತ್ರಿ ಎನ್.ಚಲುವರಾಯಸ್ವಾಮಿ ಭರವಸೆ ನೀಡಿದರು.
ಮಂಡ್ಯನಗರದ ಪತ್ರಕರ್ತರ ಸಂಘದ ಸಭಾಂಗಣದಲ್ಲಿ ಶುಕ್ರವಾರ ನಡೆದ ಮಾದಿಗ ಸಮುದಾಯದ ಮುಖಂಡರ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಎಡಗೈ ಮತ್ತು ಬಲಗೈ ಎಂಬ ಅಪಸ್ವರವನ್ನು ಬಿಟ್ಟು, ಎಲ್ಲರೂ, ಸಂವಿಧಾನ ರಕ್ಷಿಸಲು ಕಾಂಗ್ರೆಸ್ ಪಕ್ಷ ಬೆಂಬಲಿಸಬೇಕೆಂದು ಮನವಿ ಮಾಡಿದರು
ಕಾಂಗ್ರೆಸ್ ಪಕ್ಷ ಎಲ್ಲಾ ಜಾತಿ ಮತ್ತು ಸಮುದಾಯಕ್ಕೆ ಒಳಿತು ಮಾಡುವ ಪಕ್ಷವಾಗಿದ್ದು ಕೇಂದ್ರ ಹಾಗೂ ರಾಜ್ಯದಲ್ಲಿ ಅಧಿಕಾರದಲ್ಲಿದ್ದ ವೇಳೆ ಜಾತ್ಯಾತೀತ ಹಾಗೂ ಧರ್ಮಾತೀತವಾಗಿ ಯೋಜನೆಗಳನ್ನೂ ಜಾರಿಗೊಳಿಸಿದೆ, ಆದ್ದರಿಂದ ಮಂಡ್ಯ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸ್ಟಾರ್ ಚಂದ್ರು ಅವರನ್ನು ಬೆಂಬಲಿಸಬೇಕೆಂದು ಮನವಿ ಮಾಡಿದರು.
ಜೆಡಿಎಸ್ ಹಾಗೂ ಬಿಜೆಪಿ ಒಂದೇ ನಾಣ್ಯದ ಎರಡು ಮುಖಗಳಾಗಿದ್ದು, ಅಧಿಕಾರದಲ್ಲಿದ್ಧಾಗ ಸಾಧನೆ ಮಾಡಲಾಗದೇ ಅಧಿಕಾರವಿಲ್ಲದಾಗ ಅಲವತ್ತುಗೊಳ್ಳುತ್ತಾರೆ. ಜಿಲ್ಲೆಯನ್ನು ಅಭಿವೃದ್ದಿ ಮಾಡುವ ಚಿಂತನೆ ಮೈತ್ರಿ ಪಕ್ಷಗಳ ನಾಯಕರಲ್ಲಿಲ್ಲ 14 ತಿಂಗಳ ಕಾಲ ಅಧಿಕಾರದಲ್ಲಿದ್ದಾಗ ಜಿಲ್ಲೆ ಹಾಗೂ ಯಾವುದೇ ಜನಾಂಗಕ್ಕೆ ಕುಮಾರಸ್ವಾಮಿ ಕೊಡುಗೆ ಏನೇಂದು ಪ್ರಶ್ನಿಸಿದರು.
ಶಾಸಕ ರಮೇಶ್ ಬಂಡಿಸಿದ್ದೇಗೌಡ ಮಾತನಾಡಿ, ಶ್ರೀರಂಗಪಟ್ಟಣದಲ್ಲಿ ಹಿಂದಿನ ಸಿದ್ದರಾಮಯ್ಯ ಸರ್ಕಾರದಲ್ಲಿ ಮಂಜೂರಾಗಿದ್ದ ಬಾಬು ಜಗಜೀವನ್ ರಾಂ ಕಟ್ಟಡ ಪೂರ್ಣಗೊಳಿಸಲು ಬದ್ದನಾಗಿದ್ದೇನೆ ಹಾಗೂ ಜನಾಂಗದ ಶ್ರೇಯೋಭಿವೃದ್ದಿಗೆ ಶ್ರಮಿಸುತ್ತೇನೆ. ಇದಕ್ಕಾಗಿ ಪಕ್ಷದ ಅಭ್ಯರ್ಥಿ ಬೆಂಬಲಿಸಬೇಕೆಂದು ಮನವಿ ಮಾಡಿದರು.
ಸಭೆಯಲ್ಲಿ ಶಾಸಕ ರವಿಕುಮಾರ್ ಗೌಡ, ಕೆಪಿಸಿಸಿ ಪರಿಶಿಷ್ಟ ಜಾತಿ ವಿಭಾಗದ ರಾಜ್ಯ ಸಂಚಾಲಕ ಎನ್.ಆರ್.ಚಂದ್ರಶೇಖರ್, ಪ ಜಾ ವಿಭಾಗದ ಪುಟ್ಟರಾಜು, ಕಾಂತರಾಜು, ಕುಮಾರ್, ಕೆಂಪಯ್ಯ, ಹನುಮಯ್ಯ, ಸತೀಶ್, ನರಸಿಂಹಮೂರ್ತಿ ಹಾಗೂ ಹನಿಯಂಬಾಡಿ ಶೇಖರ್ ಮತ್ತಿತರರು ಉಪಸ್ಥಿತರಿದ್ದರು.