ಕರ್ನಾಟಕ ರತ್ನ, ಪವರ್ ಸ್ಟಾರ್, ಕನ್ನಡಿಗರ ಪ್ರೀತಿಯ ಅಪ್ಪು ಪುನೀತ್ ರಾಜಕುಮಾರ್ ಅಭಿನಯದ `ಗಂಧದಗುಡಿ’ ಸಾಕ್ಷ್ಯಚಿತ್ರಕ್ಕೆ ಜಿಲ್ಲೆಯಾದ್ಯಂತ ಅಭಿಮಾನಿಗಳು ಅದ್ದೂರಿ ಸ್ವಾಗತ ನೀಡಿದ್ದಾರೆ.
ಮಂಡ್ಯ ನಗರದ ಮಹಾವೀರ ಚಿತ್ರಮಂದಿರದಲ್ಲಿ ಅಪ್ಪು ಪುನೀತ್ ರಾಜಕುಮಾರ್ ಅಭಿನಯದ ಗಂಧದಗುಡಿ ಚಿತ್ರ ಅಭಿಮಾನಿಗಳ ಹರ್ಷೋದ್ಘಾರದ ನಡುವೆ ತೆರೆಕಂಡಿತು. ಬೆಳಿಗ್ಗೆಯಿಂದಲೇ ಅಭಿಮಾನಿಗಳು ಮಹಾವೀರ ಚಿತ್ರಮಂದಿರದ ಮುಂದೆ ಸಾವಿರಾರು ಸಂಖ್ಯೆಯಲ್ಲಿ ಜಮಾಯಿಸಿದ್ದರು.
ಮಹಾವೀರ ಟಾಕೀಸಿನ ತುಂಬಾ ಪುನೀತ್ ರಾಜಕುಮಾರ್ ಕಟೌಟ್ ಹಾಗೂ ಫ್ಲೆಕ್ಸ್ ಗಳು ರಾರಾಜಿಸುತ್ತಿದ್ದವು. ಸಾವಿರಾರು ಸಂಖ್ಯೆಯಲ್ಲಿ ನೆರದಿದ್ದ ಪುನೀತ್ ರಾಜಕುಮಾರ್ ಅಭಿಮಾನಿಗಳು ತಮಟೆ ಸದ್ದಿಗೆ ಡ್ಯಾನ್ಸ್ ಮಾಡಿದರು. ಪುನೀತ್ ರಾಜಕುಮಾರ್ ಕಟೌಟಿಗೆ ಪುಷ್ಪ ಹಾರ ಹಾಕಿ ಹಾಲಿನ ಅಭಿಷೇಕ ಮಾಡಿ,ಪಟಾಕಿ ಸಿಡಿಸಿ ಸಂತೋಷ ವ್ಯಕ್ತಪಡಿಸಿದರು.
ಬೆಳಗಿನ ಪ್ರದರ್ಶನ ಆರಂಭಕ್ಕೂ ಮುನ್ನವೇ ಅಪ್ಪು ಅಭಿಮಾನಿಗಳು ಥಿಯೇಟರ್ ಗೆ ಬಂದ ಪ್ರೇಕ್ಷಕರಿಗೆ ಹಾಗೂ ಜನಸಾಮಾನ್ಯರಿಗೆ ಅನ್ನ ಸಂತರ್ಪಣೆ ಮಾಡಿ ಅಭಿಮಾನ ಮೆರೆದರು.
ಅಭಿಮಾನಿಗಳ ಅಭಿಮಾನದ ನಟ ಪುನೀತ್ ರಾಜಕುಮಾರ್ ಕೊನೆಯ ಚಿತ್ರ ಗಂಧದ ಗುಡಿ ಸ್ಕ್ರೀನ್ ನಲ್ಲಿ ಬರುತ್ತಿದ್ದಂತೆ ಅಭಿಮಾನಿಗಳು ಸ್ಕ್ರೀನ್ ಗೆ ಪೂಜೆ ಸಲ್ಲಿಸಿದರು. ಸ್ಕ್ರೀನ್ ನಲ್ಲಿ ಪುನೀತ್ ಕಂಡೊಡನೆ ಕನ್ನಡದ ಬಾವುಟ ಹಾರಿಸುತ್ತ ಅಭಿಮಾನಿಗಳು ಅಪ್ಪು,ಅಪ್ಪು ಎಂದು ಕೂಗುತ್ತಾ ಹರ್ಷದಿಂದ ಕುಣಿದಾಡಿದರು. ಕೆಲವರು ಅಭಿಮಾನಿಗಳು ಅಪ್ಪು ನೆನೆದು ಭಾವುಕರಾಗಿ ಕಂಬನಿ ಮಿಡಿದರು.
ಜಿಲ್ಲೆಯಾದ್ಯಂತ ಗಂಧದಗುಡಿ ಚಿತ್ರಕ್ಕೆ ಅದ್ಭುತ ಪ್ರತಿಕ್ರಿಯೆ ದೊರೆತಿದ್ದು,ಎಲ್ಲಾ ಚಿತ್ರಮಂದಿರಗಳಲ್ಲಿ ಅಪ್ಪು ಪುನೀತ್ ರಾಜ್ಕುಮಾರ್ ಅವರಿಗೆ ಅಭಿಮಾನಿಗಳು ಪೂಜೆ ಸಲ್ಲಿಸಿ ಅಭಿಮಾನ ಮೆರೆದರು.