ಅಪ್ಪು ಮಾಡಿದ ಸಾಧನೆಗಳು, ಬಡವರಿಗೆ ಹಾಗೂ ನೊಂದವರಿಗೆ ನೆರವಾಗಿರುವುದು ಅವರ ಸಮಾಜಮುಖಿ ಕೆಲಸಕ್ಕೆ ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಒಳ್ಳೆಯ ಕೆಲಸ ಮಾಡಿದವರನ್ನು ನೆನೆಯುವುದು ಶ್ಲಾಘನೀಯವಾದದ್ದು, ಅವರು ಮಾಡಿದ ಕೆಲಸಗಳು ಎಲ್ಲರಿಗೂ ಮಾದರಿ ಎಂದು ಮನ್ಮುಲ್ ಅಧ್ಯಕ್ಷ ಬಿ.ಆರ್.ರಾಮಚಂದ್ರ ಹೇಳಿದರು.
ಮಂಡ್ಯ ತಾಲೂಕಿನ ಕೆರಗೋಡು ಗ್ರಾಮದಲ್ಲಿ ಎಂ.ಎಸ್.ರಘುನಂದನ್ ಅಭಿಮಾನಿಗಳ ಬಳಗದ ವತಿಯಿಂದ ನಡೆದ 67ನೇ ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ ಅಪ್ಪು ನಮನ ಹಾಗೂ ವಿವಿಧ ಕ್ಷೇತ್ರದ ಸಾಧಕರಿಗೆ ಅಭಿನಂದನಾ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಮಂಡ್ಯ ಕನ್ನಡ ರಾಜ್ಯೋತ್ಸವದ ಜೊತೆ ಪ್ರತಿ ಗ್ರಾಮಗಳಲ್ಲಿ ಅಪ್ಪು ನಮನ ಕಾರ್ಯಕ್ರಮ ಆಚರಿಸುತ್ತಿರುವುದು ಮೆಚ್ಚುಗೆ ವಿಷಯ ಹಾಗೂ ಅಪ್ಪು ಅವರ ಸಮಾಜಮುಖಿ ಕೆಲಸಗಳು ನಮ್ಮೆಲ್ಲರಿಗೂ ಪ್ರೇರಣೆ ನೀಡುವಂತವು ಎಂದರು.
ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ಅಶೋಕ್ ಜಯರಾಮ್ ಮಾತನಾಡಿ, ಗಡಿನಾಡು ಕನ್ನಡಿಗರ ಸಮಸ್ಯೆ ಎದುರಾದಾಗ ಕನ್ನಡಪರ ಸಂಘಟನೆಗಳು ಹೋರಾಟ ಮಾಡುವಾಗ ಅವರ ಜೊತೆ ಎಲ್ಲರೂ ನಿಲ್ಲಬೇಕು. ಕನ್ನಡ ಭಾಷೆ ಉಳಿಸುವ ಜವಾಬ್ದಾರಿ ಎಲ್ಲರ ಮೇಲಿದೆ. ಕನ್ನಡದ ಐಕ್ಯತೆ ಸ್ವಾಭಿಮಾನ ಬಂದಾಗ ಎಲ್ಲರೂ ಒಗ್ಗಟ್ಟಾಗಬೇಕು ಎಂದರು.
ಇದೇ ಸಂದರ್ಭದಲ್ಲಿ ಜಿಲ್ಲಾ ಜೆಡಿಎಸ್ ನೂತನ ವಕ್ತಾರರಾಗಿ ನೇಮಕವಾಗಿರುವ ಎಂ.ಎಸ್. ರಘುನಂದನ್ ಅವರಿಗೆ ಶುಭಾಶಯ ಅರ್ಪಿಸಿ ಅಭಿಮಾನಿಗಳು ಸೇಬಿನ ಹಾರ ಹಾಕಿ ಅಭಿನಂದನೆ ಸಲ್ಲಿಸಿದರು. ನಿವೃತ್ತ ಶಿಕ್ಷಕರು, ನಿಖಿಲ್ ಕ್ರಿಕೆಟ್ ಕಪ್ ವಿಜೇತರಿಗೆ ಬಹುಮಾನ ವಿತರಣೆ, ಆಟೋ ಚಾಲಕರು ಹಾಗೂ ಪೌರಕಾರ್ಮಿಕರಿಗೆ ಸಮವಸ್ತ್ರ ವಿತರಣೆ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಮನ್ ಮುಲ್ ನಿರ್ದೇಶಕ ಉಮ್ಮಡಹಳ್ಳಿ ಶಿವಪ್ಪ, ಎಂಡಿಸಿಸಿ ಬ್ಯಾಂಕ್ ಮಾಜಿ ಉಪಾಧ್ಯಕ್ಷ ಬೂದನೂರು ಸ್ವಾಮಿ, ತಾ.ಪಂ.ಮಾಜಿ ಸದಸ್ಯ ಕಿರಣ್ ಕುಮಾರ್, ಕೆರಗೋಡು ಎಜುಕೇಷನ್ ಸೊಸೈಟಿ ಅಧ್ಯಕ್ಷ ಕೆ.ಎಲ್.ಕೃಷ್ಣ, ಮಾರಗೌಡನಹ ಳ್ಳಿ ಗ್ರಾ.ಪಂ ಮಾಜಿ ಅಧ್ಯಕ್ಷ , ಕಾಂಗ್ರೆಸ್ ಯುವ ಮುಖಂಡ ಶ್ರೀಕಾಂತ್, ಜೆಡಿ ಎಸ್ ಯುವ ಮುಖಂಡ ವಿಶಾಲ್ ರಘು, ಶ್ರೀನಿವಾಸ್, ವಿಜಯಕುಮಾರ್ ಮತ್ತಿತರರಿದ್ದರು.