Friday, September 20, 2024

ಪ್ರಾಯೋಗಿಕ ಆವೃತ್ತಿ

ಶ್ರೀರಂಗಪಟ್ಟಣ| ಸಾವಿನ ಮನೆಗಳಿಗೆ ಸ್ಕೆಚ್ ಹಾಕಿ, ಬರೋಬರಿ ₹36 ಲಕ್ಷ ಮೌಲ್ಯದ ವಸ್ತುಗಳನ್ನು ದೋಚಿದ್ದ ಖದೀಮ !

ಸಾವಿನ ಮನೆಗಳನ್ನೇ ಗುರಿಯಾಗಿಸಿಕೊಂಡು 10 ಕಡೆಗಳಲ್ಲಿ ಒಟ್ಟು ₹ 36 ಲಕ್ಷ ಮೌಲ್ಯದ ಚಿನ್ನಾಭರಣ, ನಗದು, ಕಾರು ಸೇರಿದಂತೆ ಇನ್ನಿತರೆ ವಸ್ತುಗಳನ್ನು ಕಳವು ಮಾಡಿದ್ದ ಖದೀನನ್ನು ಶ್ರೀರಂಗಪಟ್ಟಣ ತಾಲ್ಲೂಕಿನ ಅರಕೆರೆ ಪೊಲೀಸರು ಕಾರ್ಯಾಚರಣೆ ನಡೆಸಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಪಾಂಡವಪುರ ತಾಲ್ಲೂಕಿನ ಅರಳಕುಪ್ಪೆ ಗ್ರಾಮದ ಮನು ಅಲಿಯಾಸ್ ಶಾಂಬು (23) ಬಂಧಿತ ವ್ಯಕ್ತಿಯಾಗಿದ್ದು, ಈತ ಹಾಲಿ ಮೈಸೂರಿನಲ್ಲಿ ನೆಲೆಸಿದ್ದ.

ಘಟನೆಯ ವಿವರ

ಕಳೆದ ಜ.6ರಂದು ಅರಕೆರೆ ಪೊಲೀಸ್ ಠಾಣಾ ವ್ಯಾಪ್ತಿಯ ಮಹದೇವಪುರ ಗ್ರಾಮದಲ್ಲಿ ಶಿವಕುಮಾ‌ರ್ ಎಂಬುವರು ಮೃತಪಟ್ಟಿದ್ದು, ಅವರ ಶವ ಸಂಸ್ಕಾರಕ್ಕೆಂದು ಮೃತ ಶಿವಕುಮಾರನ ಅಣ್ಣನ ಮನೆಯವರೆಲ್ಲರೂ ತೆರಳಿದ್ದಾಗ ಮನೆಯ ಬೀರುವಿನಲ್ಲಿದ್ದ ಒಟ್ಟು 135 ಗ್ರಾಂ ತೂಕದ ಚಿನ್ನದ ಒಡವೆಗಳು ಕಳ್ಳತನವಾಗಿರುವ ಬಗ್ಗೆ ಅದೇ ದಿವಸ ನಟರಾಜು ಬಿನ್ ಶಿವಪ್ಪ ಎಂಬುವವರು ಅರಕೆರೆ ಠಾಣೆಗೆ ದೂರು ನೀಡಿದ್ದರು. ಇದೇ ರೀತಿ ಪಾಂಡವಪುರ ವ್ಯಾಪ್ತಿಯ ಆರತಿಉಕ್ಕಡ, ಹರವು, ಡಾಮಡಹಳ್ಳಿ ಗ್ರಾಮಗಳಲ್ಲಿ ಕಳ್ಳತನದ ಪ್ರಕರಣಗಳು ಸಾವಿನ ಮನೆಯಲ್ಲಿಯೇ ನಡೆದಿದ್ದವು.

ಇಂತಹ ಘಟನೆಗಳನ್ನು ಗಂಭೀರವಾಗಿ ಪರಿಗಣಿಸಿ ಪೊಲೀಸ್ ಇಲಾಖೆಯು, ಅಪರ ಜಿಲ್ಲಾ ಪೊಲೀಸ್ ಅಧೀಕ್ಷಕ ಎಸ್.ಇ.ಗಂಗಾದರಸ್ವಾಮಿ ಮಾರ್ಗದರ್ಶನದಲ್ಲಿ ಶ್ರೀರಂಗಪಟ್ಟಣ ಉಪ ವಿಭಾಗದ ಉಪಾಧೀಕ್ಷಕ ಮುರುಳಿ ನೇತೃತ್ವದಲ್ಲಿ ಸರ್ಕಲ್ ಇನ್ಸ್‌ಪೆಕ್ಟರ್ ಪುನಿತ್ ಟಿ.ಎಂ., ಅರಕೆರೆ ಠಾಣೆ ಪಿಎಸ್ಐ ಎಂ.ಆರ್.ಬ್ಯಾಳಿ ಸೇರಿದಂತೆ ಸಿಬ್ಬಂದಿಗಳ ನೇತೃತ್ವದಲ್ಲಿ ತಂಡವನ್ನು ರಚಿಸಿ ಆರೋಪಿಗಳ ಪತ್ತೆಗೆ ಬಲೆ ಬೀಸಿತ್ತು.

ಈ ತಂಡವು ಕಾರ್ಯಾಚರಣೆ ನಡೆಸಿ ಕಳೆದ ಜ.16ರಂದು ಪಾಂಡವಪುರ ರೈಲ್ವೆ ನಿಲ್ದಾಣದ ಬಳಿ ಆರೋಪಿ ಮನುವನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿತು, ಈ ಸಂದರ್ಭದಲ್ಲಿ ಆರೋಪಿಯು ಒಟ್ಟು 10  ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿರುವುದಾಗಿ ಒಪ್ಪಿಕೊಂಡಿದ್ದು, ತಾನು ಕಳ್ಳತನ ಮಾಡಿದ್ದ ಒಡವೆಗಳನ್ನು ಕೆ.ಆರ್.ಸಾಗರದಲ್ಲಿರುವ ಮುತ್ತೂಟ್  ಪಿನ್ ಕಾರ್ಪ್, ಪಾಂಡವಪುರ ಟೌನ್‌ ನಲ್ಲಿರುವ ಐ.ಐ.ಎಫ್ .ಎಲ್ ಪೈನಾನ್ಸ್ ಹಾಗು ಬನ್ನಂಗಾಡಿ ಗ್ರಾಮದ ಎಂ.ಡಿ.ಸಿ.ಸಿ.ಬ್ಯಾಂಕಿನಲ್ಲಿ ಅಡಮಾನ ಇಟ್ಟಿರುವುದಾಗಿ ಒಪ್ಪಿಕೊಂಡಿದ್ದಾನೆ.

ಆರೋಪಿಯಿಂದ 521 ಗ್ರಾಂ ತೂಕದ ₹30.21 ಲಕ್ಷ ಮೌಲ್ಯದ ಚಿನ್ನಾಭರಣ, ₹3.50 ಲಕ್ಷ ಮೌಲ್ಯದ ಕ್ಯಾಮೆರ ಮತ್ತು ಲೆನ್ಸ್‌ ಗಳು, ₹ 50 ಸಾವಿರ ಮೌಲ್ಯದ ಒಂದು ಬೈಕ್ ಹಾಗೂ ₹2 ಲಕ್ಷ ಮೌಲ್ಯದ 1 ಕಾರು ಸೇರಿದಂತೆ ಒಟ್ಟು ₹ 36 ಲಕ್ಷ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡು, ಆರೋಪಿಗೆ ನ್ಯಾಯಾಂಗ ಬಂಧನಕ್ಕೆ  ಒಪ್ಪಿಸಲಾಗಿದೆ.

ಆರೋಪಿಯ ಪತ್ತೆ ಕಾರ್ಯಾಚರಣೆಯಲ್ಲಿ ಕೆ.ಆರ್.ಸಾಗರ ಸರ್ಕಲ್ ಇನ್ಸ್‌ಪೆಕ್ಟರ್ ಪುನೀತ್ ಟಿ.ಎಂ., ಅರಕೆರೆ ಪಿಎಸ್ಐ  ಎಂ.ಆರ್.ಬ್ಯಾಳಿ, ಎ.ಎಸ್.ಐ ನಟರಾಜು, ಸಿಬ್ಬಂದಿಗಳಾದ ಕೆ.ಆರ್.ಸತೀಶ್, ನಾಗೇಂದ್ರ, ರಾಜಶೇಖ‌ರ್, ಶಿವಪ್ರಸಾದ್, ನಂದಗೋಪಿ, ಶಿವಕುಮಾರ್, ರವೀಶ್, ತಾಂತ್ರಿಕ ವಿಭಾಗದ ರವಿಕಿರಣ್ ಹಾಗೂ ಲೋಕೇಶ್ ಭಾಗಿಯಾಗಿದ್ದರು. ಈ ತಂಡದ ಕಾರ್ಯವನ್ನು ಮಂಡ್ಯ ಜಿಲ್ಲಾ ಪೊಲೀಸ್ ಅಧೀಕ್ಷಕರು ಪ್ರಶಂಸಿಸಿದ್ದಾರೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!