ಮಳವಳ್ಳಿಯಲ್ಲಿ ನಡೆದಿದೆ ಎನ್ನಲಾದ ಅಕ್ರಮ ಭೂ ಕಬಳಿಕೆ ಬಗ್ಗೆ ಸಮಗ್ರ ನ್ಯಾಯಾಂಗ ತನಿಖೆ ನಡೆಸಿ ಅಕ್ರಮ ಭೂಮಿಯನ್ನು ವಶಪಡಿಸಿಕೊಂಡು ಬಡ ರೈತರಿಗೆ ಹಂಚಬೇಕೆಂಬುದು ಸೇರಿದಂತೆ ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಕರ್ನಾಟಕ ಪ್ರಾಂತ ರೈತ ಸಂಘದ ನೇತೃತ್ವದಲ್ಲಿ ಮಳವಳ್ಳಿ ತಹಸೀಲ್ದಾರ್ ಕಚೇರಿಯಿಂದ ಮಂಡ್ಯ ಜಿಲ್ಲಾಧಿಕಾರಿ ಕಚೇರಿವರೆಗೆ ಶನಿವಾರ ಬೈಕ್ ರ್ಯಾಲಿ ನಡೆಯಿತು.
ಮಳವಳ್ಳಿ ತಾಲೂಕಿನ ಕಿರಗಸೂರು ಗ್ರಾಮದ ತೋಟಿ ಇನಾಂ ಜಮೀನುಗಳನ್ನ ಸಂಬಂಧಿಸಿದ ಫಲಾನುಭವಿಗಳ ಹೆಸರಿಗೆ ಖಾತೆ ಮಾಡಬೇಕು. ಮಲ್ಲಿಕ್ಯಾತನಹಳ್ಳಿ ನಿವಾಸಿಗಳಿಗೆ ಹಕ್ಕುಪತ್ರ ನೀಡಬೇಕು. ಕೆಅರ್’ಎಸ್ ನಿಂದ ರೈತರ ಬೆಳೆಗಳಿಗೆ ನೀರು ಬಿಡಬೇಕು, ವಿದ್ಯುತ್ ಐಪಿ ಸೆಟ್ ಗಳಿಗೆ ಕನಿಷ್ಠ ಹತ್ತು ಗಂಟೆಗಳ ಕಾಲ ತ್ರೀಫೇಸ್ ಕರೆಂಟ್ ನೀಡಬೇಕೆಂದು ಎಂದು ಪ್ರಾಂತ ರೈತ ಸಂಘದ ಅಧ್ಯಕ್ಷ ಎನ್ ಎಲ್ ಭರತ್ ರಾಜ್ ಒತ್ತಾಯಿಸಿದರು.
ಬರಗಾಲದ ಹಿನ್ನೆಲೆಯಲ್ಲಿ ಬೆಳೆ ನಷ್ಟ ಪರಿಹಾರ ನೀಡಿ, ಸಾಲ ಮನ್ನಾ ಮಾಡಿ, ರೈತರ ಆತ್ಮಹತ್ಯೆ ತಡೆಗಟ್ಟಬೇಕು.
ಜಾನುವಾರುಗಳಿಗೆ ಮೇವು, ಕುಡಿಯುವ ನೀರು ಹಾಗೂ ಜನಸಾಮಾನ್ಯರಿಗೆ ಹೆಚ್ಚುವರಿ ರೇಷನ್ ನೀಡಬೇಕು.
ಉದ್ಯೋಗ ಖಾತ್ರಿ ಯೋಜನೆಯಲ್ಲಿ ವರ್ಷಕ್ಕೆ 200 ದಿನ ಕೆಲಸ, ದಿನಕ್ಕೆ 600 ರೂ. ಕೂಲಿ ಹಣ ನೀಡಬೇಕು. ಕೂಲಿಕಾರರಿಗೆ ಪ್ರತಿವಾರ ಹಣ ಪಾವತಿಸಬೇಕು. ಬರ ಪರಿಹಾರವನ್ನು ಖುಷ್ಕಿ ಜಮೀನಿಗೆ ಹೆಕ್ಟೇರಿಗೆ 20,000 ರೂ., ತರಿ ಜಮೀನಿಗೆ ಹೆಕ್ಟೇರಿಗೆ 50,000 ರೂ. ಪರಿಹಾರವನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ನೀಡಬೇಕೆಂದು ಆಗ್ರಹಿಸಿದರು.
ರ್ಯಾಲಿಯಲ್ಲಿ ಕರ್ನಾಟಕ ಪ್ರಾಂತ ರೈತ ಸಂಘದ ತಾಲೂಕು ಕಾರ್ಯದರ್ಶಿ ಎನ್ ಲಿಂಗರಾಜಮೂರ್ತಿ, ರಾಜ್ಯ ಸಮಿತಿ ಸದಸ್ಯರಾದ ಶಿವಕುಮಾರ್, ಮಹಾದೇವು ಹಾಗೂ ಪ್ರಕಾಶ್ ಭಾಗವಹಿಸಿದ್ದರು.