Friday, September 20, 2024

ಪ್ರಾಯೋಗಿಕ ಆವೃತ್ತಿ

ರೌಡಿ ಶೀಟರ್ ಸುಧೀರ್ ಕೊಲೆ | 24 ಗಂಟೆಗಳಲ್ಲೇ ನಾಲ್ವರು ಆರೋಪಿಗಳ ಬಂಧನ

ಶ್ರೀರಂಗಪಟ್ಟಣ ತಾಲೂಕಿನ ಕೆ ಆರ್ ಎಸ್ ಪೊಲೀಸ್ ಠಾಣೆ ವ್ಯಾಪ್ತಿಯ ಹುಲಿಕೆರೆ ಗ್ರಾಮದಲ್ಲಿ ನಿನ್ನೆಯಷ್ಟೆ  ಹಾಡ ಹಗಲೇ ರೌಡಿಶೀಟರ್ ಸುರೇಶ್ ಆಲಿಯಾಸ್ ಸುಧೀರ್ (36) ಎಂಬಾತನನ್ನು ಕೊಲೆ ಮಾಡಿದ ಆರೋಪದ ಮೇಲೆ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಪ್ರಕರಣ ನಡೆದ 24 ಗಂಟೆಗಳಲ್ಲಿಯೇ ಶ್ರೀರಂಗಪಟ್ಟಣ ತಾಲ್ಲೂಕಿನ ಹುಲಿಕೆರೆ ಗ್ರಾಮದ ನಿವಾಸಿಗಳಾದ ಪೂರ್ಣಚಂದ್ರ(31), ಚಲುವರಾಜ್ ಅಲಿಯಾಸ್ ಎಮ್ಮೆ ಚಲುವ(38), ಎಸ್.ಕುಮಾರ್ ಅಲಿಯಾಸ್ ಗೊಬ್ಳಿ(30) ಹಾಗೂ ಪಿ.ವಿನೋದ್ ರಾಜ್‌ ಅಲಿಯಾಸ್ ಡಿಸ್ಕೋ(32) ಎಂಬುವರನ್ನು ಬಂಧಿಸಲಾಗಿದೆ. ಈ  ಆರೋಪಿಗಳು ಮೈಸೂರು ಸೇರಿದಂತೆ ಇತರೆ ಕಡೆಗಳಲ್ಲಿ ತಲೆಮರೆಸಿಕೊಂಡಿದ್ದರು.

ಆರೋಪಿಗಳ ಪತ್ತೆಗಾಗಿ ಮಂಡ್ಯ ಜಿಲ್ಲಾ ಅಪರ ಪೊಲೀಸ್ ಅಧೀಕ್ಷಕ ಈ. ತಿಮ್ಮಯ್ಯ, ಶ್ರೀರಂಗಪಟ್ಟಣ ಆರಕ್ಷಕ ಉಪಾಧೀಕ್ಷಕ ಮುರುಳಿ ಅವರ ಮಾರ್ಗದರ್ಶನದಲ್ಲಿ ಎ.ಎಸ್‌.ಐ ನಟರಾಜು, ಹೆಡ್‌ ಕಾನ್ಸ್‌ಟೇಬಲ್‌ ಗಳಾದ  ಕೆ.ಆರ್.ಸತೀಶ್, ಶ್ರೀಧರ್, ಯಧುರಾಜ್, ಮಂಜುನಾಥ್,  ರವಿ ಹಾಗೂ ಕಾನ್ಸ್‌ ಟೇಬಲ್ ಗಳಾದ  ರವೀಶ್,  ಪ್ರಭುಸ್ವಾಮಿ, ರವಿಕಿರಣ್‌ ಹಾಗೂ ಲೋಕೇಶ್ ಎಂಬ  ಸಿಬ್ಬಂದಿಯವರನ್ನೊಳಗೊಂಡ ತಂಡ ರಚನೆ ಮಾಡಲಾಗಿತ್ತು.

ನಿನ್ನೆ ಮಧ್ಯಾಹ್ನ 12 ಗಂಟೆಯ ಸಮಯದಲ್ಲಿ ಹುಲಿಕೆರೆ ಬಳಿ ಸ್ನೇಹಿತರೊಂದಿಗೆ ಎಣ್ಣೆ ಪಾರ್ಟಿ ಮಾಡಿಕೊಂಡು ಕುಳಿತಿದ್ದ ಗೆಳೆಯರ ನಡುವೆ ಕ್ಷುಲ್ಲಕ ಕಾರಣಕ್ಕೆ ಮಾತಿಗೆ ಮಾತು ಬೆಳೆದು ಜಗಳ ತಾರಕಕ್ಕೇರಿತ್ತು. ಈ ಸಂದರ್ಭದಲ್ಲಿ ಜಗಳದಿಂದ ಬೇಸತ್ತು ಹೊರ ಬಂದು ಹುಲಿಕೆರೆ ಗ್ರಾಮದ ರಸ್ತೆಯಲ್ಲಿ ನಿಂತಿದ್ದ ರೌಡಿಶೀಟರ್ ಸುಧೀರ್ ಎಂಬಾತನನ್ನು ತನ್ನ ಮತ್ತೊಬ್ಬ ಗೆಳೆಯನಾದ ಪೂರ್ಣಚಂದ್ರ ಹಾಗೂ ಇತರ ಗೆಳೆಯರು ಹಿಂಬಾಲಿಸಿಕೊಂಡು ಬಂದು ಕುತ್ತಿಗೆ ಕತ್ತರಿಸಿ ಹತ್ಯೆ ಮಾಡಿ ಪರಾರಿಯಾಗಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!