ಬಾಲಕರನ್ನು ಕಾರ್ಮಿಕರನ್ನಾಗಿಸುವುದು ಅಪರಾಧ ಎಂದು ಜಿಲ್ಲಾ ಕಾರ್ಮಿಕ ಇಲಾಖೆ ಕಾರ್ಮಿಕ ನಿರೀಕ್ಷಕ ಎಂ. ಸ್ವಾಮಿ ಹೇಳಿದರು.
ಮಂಡ್ಯ ನಗರದ ಸಾರಿಗೆ ಬಸ್ ನಿಲ್ದಾಣದಲ್ಲಿ ಜಿಲ್ಲಾಡಳಿತ,ಕಾರ್ಮಿಕ ಇಲಾಖೆ, ಜಿಲ್ಲಾ ಬಾಲ ಕಾರ್ಮಿಕ ಯೋಜನಾ ಸೊಸೈಟಿ ಆಯೋಜಿಸಿದ್ದ ಬಾಲ್ಯಾವಸ್ಥೆ ಮತ್ತು ಕಿಶೋರಾವಸ್ಥೆ ಕಾರ್ಮಿಕ ಪದ್ಧತಿ ವಿರುದ್ಧ ಅರಿವು ಮತ್ತು ಜಾಗೃತಿ ಮೂಡಿಸುವ ಬೀದಿನಾಟಕ ಪ್ರದರ್ಶನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಭಾರತದೇಶದಲ್ಲಿ ಬಾಲಕರನ್ನು ಕಾರ್ಮಿಕರನ್ನಾಗಿಸಿ ದುಡಿಸಿಕೊಳ್ಳುವುದು ಅಪರಾಧವಾಗಿದೆ. ಅಪಾಯಕಾರಿ ಮತ್ತು ಅಪರಾಧ ಕೃತ್ಯಗಳಿಗೆ ಬಾಲಕರನ್ನು ಬಳಸುವ ಪೋಷಕರು ಮತ್ತು ಇತರರಿಗೆ ಕಾನೂನಿನ ಮೂಲಕ ಶಿಕ್ಷೆವಿಧಿಸಲಾಗುವುದು ಮತ್ತು ದಂಡವನ್ನೂ ವಸೂಲಿ ಮಾಡಲಾಗುವುದು ಎಂದರು.
ಗ್ರಾಮೀಣ ಜನರಲ್ಲಿ ಬಾಲ ಕಾರ್ಮಿಕ ಪದ್ಧತಿ ಬಗ್ಗೆ ಬೀದಿನಾಟಕಗಳ ಮೂಲಕ ಅರಿವು ಮೂಡಿಸಲಾಗುತ್ತಿದೆ, ಬಾಲಕರಿಗೆ ಕಡ್ಡಾಯವಾಗಿ ಶಿಕ್ಷಣ ಕೊಡಿಸುವುದು ಮತ್ತು ಪೋಷಿಸುವ ಜವಾಬ್ದಾರಿ ಬಗ್ಗೆ ಹೆಚ್ಚಿನ ಅರಿವು ನೀಡಲಾಗುತ್ತಿದೆ ಎಂದು ತಿಳಿಸಿದರು.
ಜನರ ಮನಸ್ಸಿಗೆ ಬೀದಿ ನಾಟಕಗಳು ತುಂಬ ಪರಿಣಾಮ ಬೀರುತ್ತವೆ ಹಾಗೂ ಅರಿವು ಹೆಚ್ಚಿಸುತ್ತವೆ. ಜನರು ಜಾಗೃತಿಗೊಂಡು ಬಾಲಕರನ್ನು ಶಾಲೆಗೆ ಕಳಿಸಬೇಕು. ಅನಾಥ ಮಕ್ಕಳನ್ನು ಆಶ್ರಮಗಳಿಗೆ ಸೇರಿಸಿದರೆ ಅಲ್ಲಿ ಅವರಿಗೆ ಶಿಕ್ಷಣ ನೀಡಲಾಗುವುದು ಎಂದು ತಿಳಿಸಿದರು.
ಹೋಟೇಲ್, ಗೃಹ ಕೈಗಾರಿಕೆ, ಅಪಾಯಕಾರಿ ಕಾರ್ಖಾನೆಗಳಲ್ಲಿ ಬಾಲಕರನ್ನು ಇರಿಸಿಕೊಂಡು ದುಡಿಸಿಕೊಳ್ಳುವುದು ಕಂಡು ಬಂದರೆ ಪೊಲೀಸ್ ಠಾಣೆ, ಕಾರ್ಮಿಕ ಇಲಾಖೆ ಅಥವಾ ಮಕ್ಕಳ ಸಹಾಯವಾಣಿ 1098ಕ್ಕೆ ಮಾಹಿತಿ ನೀಡಿ ಎಂದರು.
ಇದೇ ಸಂದರ್ಭದಲ್ಲಿ ನಗರದಲ್ಲಿ ಜನಸಂದಣಿ ಇರುವ ವಿವಿಧ ಸ್ಥಳಗಳಲ್ಲಿ ಜನಪದ ಮತ್ತು ಬೀದಿ ನಾಟಕ ಕಲಾ ತಂಡಗಳ ಒಕ್ಕೂಟದ ಕಲಾವಿದರು ಬೀದಿ ನಾಟಕ ಪ್ರದರ್ಶನ ನೀಡಿ ಜನರಿಗೆ ಬಾಲ ಕಾರ್ಮಿಕ ಪದ್ಧತಿ ಬಗ್ಗೆ ಜಾಗೃತಿ ಮೂಡಿಸಿದರು.
ಕಾರ್ಯಕ್ರಮದಲ್ಲಿ ಕಟ್ಟಡ ಕಾರ್ಮಿಕ ಸಂಘದ ಅಧ್ಯಕ್ಷ ಮಹೇಶ್, ಜನಪದ ಮತ್ತು ಬೀದಿನಾಟಕ ಕಲಾತಂಡಗಳ ಒಕ್ಕೂಟದ ಅಧ್ಯಕ್ಷ ಬಸವರಾಜು, ಕಲಾವಿದರಾದ ಶೇಖರ್, ನಾಗರಾಜು, ವೈರಮುಡಿ, ರಾಮಕೃಷ್ಣ, ಮಂಜುಳಾ ಚನ್ನಮ್ಮ ಮತ್ತಿತರರಿದ್ದರು.