ಮಂಡ್ಯ ಜಿಲ್ಲಾ ಅಪರ ಜಿಲ್ಲಾಧಿಕಾರಿಯಾಗಿ ಇಂದು ಡಾ.ಹೆಚ್.ಎಲ್ ನಾಗರಾಜು ಅಧಿಕಾರ ಸ್ವೀಕರಿಸಿದರು.
ನಿರ್ಗಮಿತ ವಿ.ಆರ್.ಶೈಲಜಾ ಇಂದು ಮಧ್ಯಾಹ್ನ ಅವರ ಕಚೇರಿಯಲ್ಲಿ ಅಧಿಕಾರವನ್ನು ನಾಗರಾಜು ಅವರಿಗೆ ವಹಿಸಿಕೊಟ್ಟರು.
ಶೈಲಜಾ ಅವರು ಮಾತನಾಡಿ, ಮಂಡ್ಯ ಜಿಲ್ಲೆಯಲ್ಲಿ ಕಳೆದ 5 ವರ್ಷಗಳಿಂದ ವಿವಿಧ ಹುದ್ದೆಗಳಲ್ಲಿ ಸೇವೆ ಸಲ್ಲಿಸಿದ್ದು, ಸೇವೆ ಸಂತೋಷ ತಂದಿದೆ ಎಂದರು.
ಎನ್. ಹೆಚ್. 209 ರ ಎಸ್.ಎಲ್.ಎ.ಓ ಆಗಿ 2017 ಮಳವಳ್ಳಿ ಇಲ್ಲಿ ಕರ್ತವ್ಯ ನಿರ್ವಹಿಸಿ ನಂತರ ಎರಡು ವರ್ಷ ಪಾಂಡವಪುರ ಉಪವಿಭಾಗಾಧಿಕಾರಿ ಹಾಗೂ ಎರಡು ವರ್ಷ ಅಪರ ಜಿಲ್ಲಾಧಿಕಾರಿಯಾಗಿ ಸತತವಾಗಿ ಮಂಡ್ಯ ಜಿಲ್ಲೆಯಲ್ಲಿ ಐದು ವರ್ಷಗಳ ಅನನ್ಯ ಸೇವೆ ಸಲ್ಲಿಸಲು ಸಹಕರಿಸಿದ ಜಿಲ್ಲಾಧಿಕಾರಿ, ಹಿರಿಯ ಅಧಿಕಾರಿಗಳಿಗೆ, ಸಿಬ್ಬಂದಿಗಳಿಗೆ ಅಭಿನಂದಿಸುತ್ತೇನೆ ಎಂದರು.
ರೈತರ ಸಮಸ್ಯೆಗಳಿಗೆ ಸ್ಪಂದಿಸುವೆ
ಕಂದಾಯ ಇಲಾಖೆಗೆ ರೈತರ ಅಲೆದಾಟವನ್ಬು ತಪ್ಪಿಸಿ ರೈತರ ಸಮಸ್ಯೆಗಳಿಗೆ ಸ್ಪಂದಿಸಿ ಕೆಲಸ ನಿರ್ವಹಿಸುವುದಾಗಿ ಅಪರ ಜಿಲ್ಲಾಧಿಕಾರಿ ಡಾ. ಹೆಚ್.ಎಲ್ ನಾಗರಾಜು ಅವರು ಅಧಿಕಾರ ಸ್ವೀಕರಿಸಿದ ಸಂದರ್ಭದಲ್ಲಿ ತಿಳಿಸಿದರು.
ಸರ್ಕಾರ ಸಾರ್ವಜನಿಕರಿಗೆ, ರೈತರಿಗೆ ರೂಪಿಸಿರುವ ಯೋಜನೆಗಳನ್ನು ಪಾರದರ್ಶಕವಾಗಿ, ನಿಗದಿತ ಸಮಯದೊಳಗೆ ಒದಗಿಸುವುದು ನನ್ನ ಮೊದಲ ಆದ್ಯತೆ ಎಂದರು. ಮಂಡ್ಯ ಜಿಲ್ಲೆ ನನಗೆ ತವರು ಮನೆ ಇದ್ದ ಹಾಗೆ. ಈ ಹಿಂದೆ ನಾಗಮಂಗಲ ಹಾಗೂ ಕೆ.ಆರ್.ಪೇಟೆ ತಾಲ್ಲೂಕಿನಲ್ಲಿ ತಹಶೀಲ್ದಾರ್ , ಪಾಂಡವಪುರದಲ್ಲಿ ಉಪವಿಭಾಗಾಧಿಕಾರಿಯಾಗಿ ಕಾರ್ಯನಿರ್ವಹಿಸಿದ್ದೇನೆ. ಇಡೀ ಜಿಲ್ಲೆಯ ಜನರ ಪ್ರೀತಿ, ಆಶೀರ್ವಾದ ನನ್ನ ಮೇಲೆ ಇದೆ.ಆಗಾಗಿ ನನಗೆ ಮಂಡ್ಯದಲ್ಲಿ ಕರ್ತವ್ಯ ನಿರ್ವಹಿಸಲು ಅವಕಾಶ ಮಾಡಿಕೊಟ್ಟ ಸರ್ಕಾರಕ್ಕೆ ಧನ್ಯವಾದ ಅರ್ಪಿಸುತ್ತೇನೆ. ಜನ ಸಾಮಾನ್ಯರಿಗೆ ಸೇವೆ ಮಾಡಲು ಬಯಸುತ್ತೇನೆ ಎಂದು ಹೇಳಿದರು.