ಮದ್ದೂರು ತಾಲ್ಲೂಕು ಭಾರತೀನಗರದಲ್ಲಿ ಆಯೋಜಿಸಿದ್ದ ವಿಶ್ವ ಕ್ಷಯರೋಗ ದಿನ -2023 ರ ಜಾಥಾ ಕಾರ್ಯಕ್ರಮಕ್ಕೆ ಭಾರತೀ ಎಜುಕೇಷನ್ ಟ್ರಸ್ಟ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಆಶಯ್ ಮಧುಮಾದೇಗೌಡ ಚಾಲನೆ ನೀಡಿದರು.
ಮಂಡ್ಯ ಭಾರತೀಯ ರೆಡ್ ಕ್ರಾಸ್ ಸಂಸ್ಥೆ, ಮಂಡ್ಯ ಕೃಷಿಕ್ ಲಯನ್ಸ್ ಸಂಸ್ಥೆ, ಭಾರತೀನಗರ ಸಮುದಾಯ ಆರೋಗ್ಯ ಕೇಂದ್ರ ಇವರ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ವಿಶ್ವ ಕ್ಷಯರೋಗ ದಿನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಸರ್ಕಾರವು ಕೂಡ ಟಿಬಿ ಕಾಯಿಲೆಯನ್ನು ಮುಕ್ತಗೊಳಿಸಲು ಕ್ರಮಕೈಗೊಂಡಿದೆ. ಹೆಚ್ಐವಿ ಮತ್ತು ಟಿಬಿ ಕಾಯಿಲೆಯಿಂದ ಜನರು ಭಯಪಡುತ್ತಿದ್ದರು. ಸರ್ಕಾರವು ಸೂಕ್ತ ಚಿಕಿತ್ಸೆ ನೀಡಿದ ನಂತರ ಭಯದಿಂದ ದೂರವಾದರು. ಆದರೆ ಕೋವಿಡ್ ಬಂದ ನಂತರ ಜನರು ಹೆಚ್ಚು ಜಾಗೃತರಾದರು. ಕ್ಷಯರೋಗ ಬಡವರು, ಶ್ರೀಮಂತರು ಎಂದು ಬರುವ ಕಾಯಿಲೆಯಲ್ಲ, ಯಾರು ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸುತ್ತಾರೋ ಅಂತವರಿಗೆ ಯಾವುದೇ ಕಾಯಿಲೆಗಳು ಬರುವುದಿಲ್ಲ ಎಂದು ತಿಳಿಸಿದರು.
ವೈದ್ಯರಿಂದ ಸಕಾಲಕ್ಕೆ ಚಿಕಿತ್ಸೆ ಪಡೆಯಬೇಕು. ಜನರು ಸಹ ಕ್ಷಯರೋಗದವರಿಗೆ ಧೈರ್ಯತುಂಬುವ ಕೆಲಸ ಮಾಡಿದಾಗ ಅವರು ಬೇಗ ಆರೋಗ್ಯವಂತರಾಗುತ್ತಾರೆಂದು ತಿಳಿಸಿದರು.
ಇದೇ ವೇಳೆ ಆಯೋಜಕ ಹಾಗೂ ಕೃಷಿಕ್ ಲಯನ್ ಸಂಸ್ಥೆಯ ಆಡಳಿತಾಧಿಕಾರಿ ಕೆ.ಟಿ.ಹನುಮಂತು, ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಸಭಾಧ್ಯಕ್ಷೆ ಮೀರಾಶಿವಲಿಂಗಯ್ಯ, ತಾಲ್ಲೂಕು ಆರೋಗ್ಯಾಧಿಕಾರಿ ಡಾ.ರವೀಂದ್ರ ಬಿ.ಗೌಡ, ಡಾ.ಆಶಾಲತಾ, ಡಾ.ಕೆ.ಎನ್.ಜಗದೀಶ್ ಪರಿಸರ ಜಾಗೃತಿ ವೇದಿಕೆಯ ಅಧ್ಯಕ್ಷ ಅಣ್ಣೂರು ಸತೀಶ್, ಪ್ರಾಂಶುಪಾಲರಾದ ತಮೀಜ್ಮಣಿ, ಮಹೇಶ್ ಕುಮಾರ್, ಭಾರತೀನಗರ ಲಯನ್ ಸಂಸ್ಥೆಯ ಅಧ್ಯಕ್ಷ ಜಗದೀಶ್, ಕಾರ್ಯದರ್ಶಿ ಎಚ್.ಎಂ.ಲಕ್ಷ್ಮೀಶ್, ಕೆಂಪೇಗೌಡ ಸೇರಿದಂತೆ ಇತರರು ಜಾಥಾದಲ್ಲಿ ಭಾಗವಹಿಸಿದ್ದರು