ರಾಜಕೀಯ ಕೇವಲ ಚುನಾವಣೆಗೆ ಮಾತ್ರ ಸೀಮಿತವಾಗಿರಬೇಕು. ಚುನಾವಣೆಗೆ ಬಂದಾಗ ಪಕ್ಷ ಸಂಘಟನೆಗೆ ಮುಂದಾಗಬೇಕು ಇನ್ನುಳಿದ ದಿನಗಳಲ್ಲಿ ಗ್ರಾಮದವರೆಲ್ಲರೂ ಸೌಹಾರ್ದತೆ, ಸಹಬಾಳ್ವೆಯಿಂದ ಬದುಕು ನಡೆಸಬೇಕು. ಜೊತೆಗೆ ಗ್ರಾಮಗಳ ಅಭಿವೃದ್ದಿಗೆ ಪಣತೊಡಬೇಕೆಂದು ಕಾಂಗ್ರೆಸ್ ಯುವ ಮುಖಂಡ ಆಶಯ್ ಮಧುಮಾದೇಗೌಡ ತಿಳಿಸಿದರು.
ಮದ್ದೂರು ತಾಲ್ಲೂಕಿನ ಸಮೀಪದ ಕಾರ್ಕಹಳ್ಳಿ ಗ್ರಾಮದಲ್ಲಿ ಗೌರಿ-ಗಣೇಶ ಹಬ್ಬದ ಅಂಗವಾಗಿ ಆಯೋಜಿಸಿದ್ದ ಜಿಲ್ಲಾ ಮಟ್ಟದ ಹೊನಲು ಬೆಳಕಿನ ಕಬಡ್ಡಿ ಪಂದ್ಯಾವಳಿಯಲ್ಲಿ ವಿಜೇತರಾದ ತಂಡದವರಿಗೆ ಬಹುಮಾನ ವಿತರಿಸಿ ಹಾಗೂ ಕಾರ್ಕಹಳ್ಳಿ ಸ್ವರೂಪ್ ಚಂದ್ರ ಅವರಿಂದ ಅಭಿನಂದನೆ ಸ್ವೀಕರಿಸಿ ಅವರು ಮಾತನಾಡಿದರು.
ಚುನಾವಣೆ ಬಂದಾಗ ಮಾತ್ರ ರಾಜಕೀಯ ಮಾಡಬೇಕು. ಉಳಿದ ದಿನಗಳಲ್ಲಿ ಗ್ರಾಮದ ಅಭಿವೃದ್ದಿಗೆ ಶ್ರಮಿಸಬೇಕು, ನಮ್ಮ ತಾತ ದಿ.ಜಿ.ಮಾದೇಗೌಡರು ಸಹ ಕ್ಷೇತ್ರದ ಜನರಿಗೆ ಇದನ್ನೇ ಬಯಸುತ್ತಿದ್ದರು. ನಮ್ಮ ಸ್ವಗ್ರಾಮವಾದ ಗುರುದೇವರಹಳ್ಳಿ ಗ್ರಾಮದ ಮೇಲೆ ಎಷ್ಟು ಪ್ರೀತಿ ಇದೆಯೋ ಅಷ್ಟೇ ಪ್ರೀತಿ ಕಾರ್ಕಹಳ್ಳಿ ಗ್ರಾಮದ ಮೇಲೂ ಇದೆ. ಕಾರ್ಕಹಳ್ಳಿ ಗ್ರಾಮದಲ್ಲಿ ನಮ್ಮ ಮನೆದೇವರಾದ ಶ್ರೀಬಸವೇಶ್ವರ ಮತ್ತು ಶ್ರೀಮಾಸ್ತಮ್ಮ ದೇವರಿದೆ. ಗ್ರಾಮದಲ್ಲಿರುವ ಮಾಸ್ತಮ್ಮ ದೇವಸ್ಥಾನವನ್ನು ಅಭಿವೃದ್ದಿ ಪಡಿಸಲು ನಮ್ಮ ತಂದೆಯೊಂದಿಗೆ ನಾನು ಸಹ ಕೈಜೋಡಿಸುತ್ತೇನೆ. ಹಿಂದೆ ದೇವಸ್ಥಾನದ ಅಭಿವೃದ್ದಿ ಪಡಿಸಲು ಮಾತುಕೊಟ್ಟಿದ್ದೆ. ಅದರಂತೆ ನಡೆಯುತ್ತೇನೆ ಎಂದರು.
ಕ್ರೀಡೆಯನ್ನು ಉಳಿಸಿ
ಕಬಡ್ಡಿ ಪಂದ್ಯಾವಳಿ ಪುರಾತನ ಕಾಲದಿಂದಲೂ ಗ್ರಾಮೀಣರನ್ನು ರಂಜಿಸುತ್ತಿರುವ ಪಂದ್ಯವಾಗಿದೆ ಅಲ್ಲದೆ ಇದರಿಂದ ದೈಹಿಕ ಕಸರತ್ತು ಲಭಿಸುತ್ತದೆ. ಈ ಪಂದ್ಯ ಶತಮಾನಗಳ ಹಿಂದೆ ಜನಮನ್ನಣೆ ಗಳಿಸಿದ ಪಂದ್ಯವಾಗಿದ್ದು, ಮುಂದಿನ ದಿನಗಳಲ್ಲಿ ಕಬಡ್ಡಿ ಪಂದ್ಯವನ್ನು ಗ್ರಾಮಾಂತರ ಪ್ರದೇಶಗಳಲ್ಲಿ ಹೆಚ್ಚು ಆಯೋಜಿಸುವ ಮೂಲಕ ಕ್ರೀಡೆಯನ್ನು ಉಳಿಸಬೇಕೆಂದು ತಿಳಿಸಿದರು.
ಜೀವನದಲ್ಲಿ ಏಳು-ಬೀಳು, ಸೋಲು-ಗೆಲುವು ಸಹಜವಾಗಿ ಬರುವಂತವು. ಇವುಗಳನ್ನು ನಾವು ಛಲದಿಂದ ಸ್ವೀಕರಿಸಬೇಕು. ಅಲ್ಲದೆ ನಿಕರವಾದ ಗುರಿಯನ್ನು ಇಟ್ಟುಕೊಂಡು ಮುಂದುವರೆದಲ್ಲಿ ಯಶಸ್ವುಗಳಿಸಲು ಸಾಧ್ಯ. ಹಾಗಾಗಿ ಯುವಕರು ಗುರಿಯ ಬೆನ್ನು ಬೀಳಬೇಕೆಂದು ಕಿವಿ ಮಾತು ಹೇಳಿದರು.
ವಿಜೇತರ ಪಟ್ಟಿ
ಮುಟ್ಟನಹಳ್ಳಿ ತಂಡ (ಪ್ರಥಮ ಬಹುಮಾನ) 2 ಸಾವಿರ ನಗದು ಹಾಗೂ ಪಾರಿತೋಷಕ, ಕಾರ್ಕಹಳ್ಳಿ ತಂಡ (ದ್ವಿತೀಯ ಬಹುಮಾನ) 15 ಸಾವಿರ ನಗದು ಹಾಗೂ ಪಾರಿತೋಷಕ, ನಗುನಹಳ್ಳಿ ತಂಡ (ತೃತೀಯ ಬಹುಮಾನ) 10 ಸಾವಿರ ನಗದು ಹಾಗೂ ಪಾರಿತೋಷಕ ಪಡೆದುಕೊಂಡವು.
ಇದೇ ವೇಳೆ ಕಾಂಗ್ರೆಸ್ ಯುವ ಮುಖಂಡ ಕಾರ್ಕಹಳ್ಳಿ ಸ್ವರೂಪ್ ಚಂದ್ರ ಅವರು ಆಶಯ್ ಮಧುಜಿಮಾದೇಗೌಡರನ್ನು ಅಭಿನಂದಿಸಿ ಗೌರವಿಸಿದರು.
ಈ ಸಂದರ್ಭದಲ್ಲಿ ತಾ.ಪಂ ಮಾಜಿ ಸದಸ್ಯ ದೇವೇಗೌಡನದೊಡ್ಡಿ ಗಿರೀಶ್, ಸೊಸೈಟಿ ಮಾಜಿ ಅಧ್ಯಕ್ಷ ಹಾಗೂ ಹಾಲಿ ನಿರ್ದೇಶಕ ಆರ್.ಸಿದ್ದಪ್ಪ, ಹಾಗಲಹಳ್ಳಿ ಪುಟ್ಟಸ್ವಾಮೀಗೌಡ, ಸಿದ್ದೇಗೌಡ, ನಟರಾಜು, ಬಸಂತ್, ಮಧು, ಬಾಲು, ನಂದನ್, ಸುನೀಲ್, ಪ್ರತಾಪ್, ಗ್ರಾ.ಪಂ ಸದಸ್ಯ ಮಹೇಶ್ ಸೇರಿದಂತೆ ಹಲವರಿದ್ದರು.