ಮುಡಾ ಹಗರಣದ ನಡುವೆ ಮೈಸೂರಿನಲ್ಲಿ ಮತ್ತೊಂದು ಭೂಹಗರಣದ ಆರೋಪ ಕೇಳಿ ಬಂದಿದೆ. ಪಾಂಡವಪುರ ತಾಲ್ಲೂಕಿನ ಮೇಲುಕೋಟೆ ಚೆಲುವನಾರಾಯಣಸ್ವಾಮಿ ದೇಗುಲಕ್ಕೆ ಸೇರಿದ ಜಮೀನನ್ನು ಬೇರೊಬ್ಬರಿಗೆ ಅಕ್ರವಾಗಿ ಪರಭಾರೆ ಮಾಡಿಕೊಡಲು ಯತ್ನಿಸಲಾಗಿದೆ ಎಂದು ರವಿಕುಮಾರ್ ಎಂಬುವರು ಆರೋಪಿಸಿದ್ದಾರೆ. ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ.
ಮೈಸೂರಿನ ಕೆಸರೆ ಗ್ರಾಮದಲ್ಲಿ ಸರ್ವೆ ನಂಬರ್ 396, 397, 398 ಮತ್ತು 399ರಲ್ಲಿರುವ ಒಟ್ಟು 21.5 ಎಕರೆ ಭೂಮಿಯನ್ನು ಮಂಡ್ಯದ ನಗುವಿನಹಳ್ಳಿಯ ಗೋಸೇಗೌಡ ಎಂಬುವರ ಕುಟುಂಬ ಚಲುವರಾಯಸ್ವಾಮಿ ದೇವಾಲಯಕ್ಕೆ ದೇಣಿಗೆ ನೀಡಿತ್ತು. ಆದರೆ, ಆ ಭೂಮಿಯನ್ನು ಮೈಸೂರು ಉಪ ವಿಭಾಗಾಧಿಕಾರಿ ರಕ್ಷಿತ್ ಅವರು ತಮ್ಮ ಸ್ನೇಹಿತರಾದ ಗುತ್ತಿಗೆದಾರ ಸತೀಶ್ಬಾಬು ರೆಡ್ಡಿ ಎಂಬವರಿಗೆ ಅಕ್ರಮವಾಗಿ ಕೊಡಿಸಲು ಯತ್ನಿಸಿದ್ದಾರೆ ಎಂದು ರವಿಕುಮಾರ್ ಆರೋಪಿಸಿದ್ದಾರೆ. ಈ ಅಕ್ರಮದಲ್ಲಿ ಕಂದಾಯ ಅಧಿಕಾರಿಗಳು ಕೂಡ ಶಾಮೀಲಾಗಿದ್ದಾರೆ ಎಂದು ಅವರು ದೂರಿದ್ದಾರೆ.
ಜಮೀನನ್ನು ಮರಳಿ ದೇವಾಲಯದ ಹೆಸರಿಗೆ ವರ್ಗಾಯಿಸಬೇಕು ಎಂದು ಒತ್ತಾಯಿಸಿದ್ದಾರೆ. ದೂರಿನ ಆಧಾರದ ಮೇಲೆ ಮಂಡ್ಯ ಜಿಲ್ಲಾಡಳಿತ ದಾಖಲೆ ಪರಿಶೀಲನೆ ನಡೆಸುತ್ತಿದೆ ಎಂದು ವರದಿಯಾಗಿದೆ.