ಶ್ರೀರಂಗಪಟ್ಟಣ ತಾಲ್ಲೂಕಿನ ದೊಡ್ಡಪಾಳ್ಯ ಗ್ರಾಮದ ಸರಕಾರಿ ಪ್ರೌಢಶಾಲೆಯಲ್ಲಿ ತಾಲ್ಲೂಕು ಆರೋಗ್ಯಾಧಿಕಾರಿ ಗಳ ಕಛೇರಿ ಹಾಗೂ ಸಮುದಾಯ ಆರೋಗ್ಯ ಕೇಂದ್ರ ಅರಕೆರೆ ಇವರುಗಳ ಸಹಯೋಗದಲ್ಲಿ ಶಾಲಾ ಮಕ್ಕಳಿಗಾಗಿ ಆಯೋಜಿಸಿದ್ದ “ಡೆಂಘೀ ಜ್ವರ ನಿಯಂತ್ರಣ ಹಾಗೂ ಮುಂಜಾಗ್ರತಾ ಕ್ರಮ”ಗಳ ಕುರಿತು ಆರಿವಿನ ಕಾರ್ಯಕ್ರಮ ನಡೆಯಿತು.
ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಎಸ್ ಡಿ ಬೆನ್ನೂರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಸೊಳ್ಳೆ ಉತ್ಪತ್ತಿ ತಾಣಗಳ ಬಗ್ಗೆ ಜಾಗೃತಿ ವಹಿಸಿ ಡೆಂಗೀ ರೋಗ ತಡೆಗಟ್ಟಿ, ನಿರ್ದಿಷ್ಠ ಚಿಕಿತ್ಸೆ ಇಲ್ಲದ ಡೆಂಘೀ ಜ್ವರಕ್ಕೆ ಮುಂಜಾಗ್ರತೆಯೇ ಪರಮೌಷಧಿಯಾಗಿದ್ದು, ಡೆಂಘೀ ಹಾಗೂ ಚಿಕೂನ್ ಗುನ್ಯಾ ಜ್ವರಗಳು ಸೋಂಕು ಹೊಂದಿದ ಈಡಿಸ್ ಈಜಿಪ್ಟ್ ಎಂಬ ಸೊಳ್ಳೆಯ ಕಡಿತದಿಂದ ಬರುತ್ತವೆ. ನಿಂತ ಸ್ವಚ್ಚ ನೀರಿನಲ್ಲಿ ಹುಟ್ಟುವ ಈ ಸೊಳ್ಳೆ ಸಾಧಾರಣವಾಗಿ ಹಗಲಿನಲ್ಲಿ ಕಚ್ಚುತ್ತವೆ ಹಠಾತ್ತನೆ ಬರುವ ಅಧಿಕ ಜ್ವರ, ತೀವ್ರ ತಲೆನೋವು, ಕಣ್ಣುಗಳ ಹಿಂಬಾದಲ್ಲಿ ತೀವ್ರತರ ನೋವು, ವಾಕರಿಕೆ ಮತ್ತು ವಾಂತಿ ರೊಗದ ಲಕ್ಷಣಗಳಾಗಿವೆ ಎಂದು ವಿವರಿಸಿದರು.
ಈ ಸಂದರ್ಭದಲ್ಲಿ ಶಾಲಾ ಶಿಕ್ಷಕರಾದ ಸುರೇಶ್ ಪಿ, ಶ್ರೀಕಾಂತ ಎನ್ ಜಿ, ಗೋವಿಂದಯ್ಯ, ಭಾಸ್ಕರ ಎಸ್, ಸಂದ್ಯಾವಳಿ, ರೇಣುಕಾದೇವಿ ಕೆ ಪಿ, ದೈಹಿಕ ಶಿಕ್ಷಣ ಶಿಕ್ಷಕಿ ಮಂಜುಳಾದೇವಿ, ಸಮುದಾಯ ಆರೋಗ್ಯ ಅಧಿಕಾರಿ ರೂಪಾ, ಆಶಾ ಕಾರ್ಯಕರ್ತೆ ಗೀತಾ ಹಾಗೂ ಶಾಲಾ ಮಕ್ಕಳು ಉಪಸ್ಥಿತರಿದ್ದರು.