ಉತ್ತಮ ಆರೋಗ್ಯಕ್ಕೆ ಆಯುರ್ವೇದ ಔಷಧಿ ಸಹಕಾರಿಯಾಗಿದ್ದು, ಜನಸಾಮಾನ್ಯರಿಗೆ ಆಯುರ್ವೇದದ ಮಹತ್ವದ ಬಗ್ಗೆ ತಿಳಿಸೋಣ ಎಂದು ಅಪರ ಜಿಲ್ಲಾಧಿಕಾರಿ ಡಾ. ಹೆಚ್.ಎಲ್.ನಾಗರಾಜು ತಿಳಿಸಿದರು.
ಮಂಡ್ಯ ಜಿಲ್ಲಾ ಪಂಚಾಯತ್ ಕಾವೇರಿ ಸಭಾಂಗಣದಲ್ಲಿ ನಡೆದ ಪ್ರತಿ ದಿನ ಪ್ರತಿ ಮನೆಯಲ್ಲೂ ಆಯುರ್ವೇದ ಎಂಬ ಘೋಷ ವಾಕ್ಯದಡಿ 7ನೇ ರಾಷ್ಟ್ರೀಯ ಆಯುರ್ವೇದ ದಿನಾಚರಣೆಯ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಇನ್ನೂ 10 ವರ್ಷಕ್ಕೆ ಪ್ರತಿಯೊಂದು ಗ್ರಾಮ ಪಂಚಾಯಿತಿಯಲ್ಲೂ ಒಂದು ಆಯುರ್ವೇದ ಹೆಲ್ತ್ ಕ್ಲಿನಿಕ್ ಇರಬೇಕು. ಎಲ್ಲವೂ ಪರಿವರ್ತನೆ ಆಗಬೇಕು. ಪರಿವರ್ತನೆ ಜಗದ ನಿಯಮ. ಉತ್ತಮವಾದ ಗಿಡಮೂಲಿಕೆಗಳಿಂದ ತಯಾರಾದ ಔಷಧಿಗಳನ್ನು ಬಳಸಬೇಕು ಎಂದರು.
ಭಾರತ ದೇಶಕ್ಕೆ ಆಯುರ್ವೇದದ ಮೂಲಕ ಗೌರವ ಘನತೆ ಹೆಚ್ಚಾಗಿದೆ. ಪ್ರಪಂಚದಲ್ಲಿ ಎಲ್ಲರೂ ನಮ್ಮ ದೇಶಕ್ಕೆ ಬಂದು ಆಯುರ್ವೇದವನ್ನು ಕುರಿತು ಅಧ್ಯಯನ ಮಾಡುತ್ತಾರೆ ಎಂದರು.
ಪೋಷಕರು ಮಕ್ಕಳಿಗೆ ಆಯುರ್ವೇದದ ಪದ್ಧತಿಯನ್ನು ಬಳಸಿಕೊಂಡು ಆರೋಗ್ಯವನ್ನು ರಕ್ಷಣೆ ಮಾಡಿ ಇಟ್ಟುಕೊಳ್ಳಬೇಕು. ಮನುಷ್ಯ ಆರೋಗ್ಯವಾಗಿದ್ದರೆ ಮನಸ್ಸು ವಿಶಾಲವಾಗಿರುತ್ತದೆ ಆತ ಸಂತೋಷವಾಗಿರುತ್ತಾನೆ ಎಂದು ಹೇಳಿದರು.
ಆರ್ಯುವೇದ ಅಧಿಕಾರಿ ಡಾ.ಮಧು ಮಾಲತಿ ರವರು ಮಾತನಾಡಿ ಭಾರತ ಸರ್ಕಾರ ಆಯುರ್ವೇದ ಬಗ್ಗೆ ಜನರಿಂದ ಜನರಿಗಾಗಿ ಸಂದೇಶ, ಜನರ ಸಹಭಾಗಿತ್ವ, ಜನ ಆಂದೋಲನ ಎಂಬ ಮೂರು ಉದ್ದೇಶವನ್ನು ಇಟ್ಟುಕೊಂಡು ಆಯುರ್ವೇದ ದಿನಾಚರಣೆಯನ್ನು ಆಚರಿಸಲಾಗುತ್ತಿದೆ ಎಂದರು.
ಆಯುಷ್ ಇಲಾಖೆಯ ಆಯುರ್ವೇದ ತಜ್ಞ ವೈದ್ಯ ಡಾ.ಬಿ.ಎ.ವೆಂಕಟೇಶ್ ಮಾತನಾಡಿ, ಬೆಟ್ಟದ ನೆಲ್ಲಿಕಾಯಿಯ ಚೂರನ್ನು ಪ್ರತಿದಿನ ಒಂದು ಚಮಚ ತೆಗೆದುಕೊಂಡರೆ ಎಷ್ಟೋ ರೋಗಗಳನ್ನು ತಡೆಗಟ್ಟಬಹುದು. ಶರೀರದ ಶಕ್ತಿಯನ್ನು ವಯಸ್ಸಿಗನುಗುಣವಾಗಿ ಸದೃಢವಾಗಿ ಇಟ್ಟುಕೊಳ್ಳಬಹುದು.
ಚರ್ಮರೋಗಕ್ಕೆ ಆಯುರ್ವೇದದಲ್ಲಿ ಬಹಳ ಶ್ರೇಷ್ಠವಾದ ಔಷಧಿಗಳು ಇವೆ.ಇದರ ಜೊತೆಗೆ ಆಯುರ್ವೇದದಲ್ಲಿ ಅನೇಕ ಸಮಸ್ಯೆಗಳಿಗೆ ಉತ್ತಮವಾದ ಔಷಧಿಗಳು ಇವೆ.ಅವುಗಳನ್ನು ತೆಗೆದುಕೊಂಡು ಸಮಸ್ಯೆಗಳಿಂದ ದೂರು ಉಳಿಯಲು ಸಾಧ್ಯ ಎಂದರು.
ಇದೇ ಸಂದರ್ಭದಲ್ಲಿ ಆಯುರ್ವೇದದಲ್ಲಿ ಉತ್ತಮ ಸೇವೆ ಸಲ್ಲಿಸಿದವರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಜಿ.ಪಂ.ಉಪ ಕಾರ್ಯದರ್ಶಿ ಸಂಜೀವಪ್ಪ, ಜಿಲ್ಲಾ ಆಯುಷ್ ವೈದ್ಯಾಧಿಕಾರಿ ಡಾ.ಬಿ.ಎಸ್ ಸೀತಾಲಕ್ಷ್ಮಿ, ಜೆ.ಎಸ್.ಎಸ್ ಆಯುರ್ವೇದ ವೈದ್ಯಕೀಯ ಕಾಲೇಜಿನ ಪ್ರಾಧ್ಯಾಪಕರು ಡಾ. ವೀಣಾ ಜಿ. ರಾವ್, ಶ್ರೀ ವೇದ ವ್ಯಾಸ ಯೋಗ ಪ್ರತಿಷ್ಠಾನ ಕಾರ್ಯದರ್ಶಿ ಕೆ. ರಾಘವೇಂದ್ರ, ಡಾ.ಕಲಾರಾಧ, ಡಾ. ಶ್ರೀನಿವಾಸ್ ಹಾಗೂ ಜಿಲ್ಲೆಯ ಎಲ್ಲಾ ಆಯುಷ್ ವೈದ್ಯಾಧಿಕಾರಿಗಳು ಮತ್ತು ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.