ಕಳೆದ ವಿಧಾನಸಭಾ ಚುನಾವಣೆಯಲ್ಲಿ ಮಾಟ ಮಂತ್ರದಿಂದಲೇ ನಾವು ಸೋತಿದ್ದು ಎಂದು ಜೆಡಿಎಸ್ ಪಕ್ಷದ ಮಾಜಿ ಶಾಸಕ ಬಂಡೆಪ್ಪ ಕಾಶಂಪೂರ ಹೇಳಿದ್ದಾರೆ.
ಹುಬ್ಬಳ್ಳಿಯಲ್ಲಿ ನಡೆದ ಪಕ್ಷದ ಪುನಃಶ್ಚೇತನ ಪರ್ವದ ಕಾರ್ಯಕ್ರಮದಲ್ಲಿ ಮಾತನಾಡಿದ ಕಾಶಂಪೂರ, ”ವಿಧಾನಸಭಾ ಚುನಾವಣೆಯಲ್ಲಿ ಕೇರಳ ಮಾದರಿ ಮಾಟ ಮಂತ್ರದಿಂದಲೇ ನಾವು ಸೋತಿದ್ದು. ಕಳೆದ ಚುನಾವಣೆಯಲ್ಲಿ ನಾವು 37 ಜನ ಗೆದ್ದಿದ್ವಿ. ಅದರಲ್ಲಿ ಏಳು ಜನ ಹೋಗಿ 30 ಜನ ಉಳಿದುಕೊಂಡಿದ್ವಿ. ಆದರೆ ಆ 30 ಜನರಲ್ಲಿ ಕೇವಲ ನಾಲ್ಕು ಜನ ಗೆದ್ದಿದ್ದಾರೆ. ಉಳಿದವರು ಸೋಲಲು ಮಾಟ ಮಂತ್ರ ಕಾರಣ” ಎಂದು ಬಂಡೆಪ್ಪ ಹೇಳಿದ್ದಾರೆ.
”ಇದು ನಿಮಗೆ ಯಾರಿಗೂ ಅರ್ಥ ಆಗಿಲ್ಲ. ಮಾಟ ಮಂತ್ರ ಮಾಡಿರೋದು ನೂರಕ್ಕೆ ನೂರು ನಿಜ. ಕಾಂಗ್ರೆಸ್ ನವರಿಗೆ 135 ಸೀಟ್ ಬರುತ್ತೆ ಅನ್ನೋದ ಗೊತ್ತಿರಲಿಲ್ಲ. ನಾವು 55 ಸೀಟ್ ಗೆಲ್ಲಬೇಕಿತ್ತು” ಎಂದು ಬಂಡೆಪ್ಪ ಕಾಶಂಪೂರ ವ್ಯಾಖ್ಯಾನಿಸಿದ್ದಾರೆ.
”ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಒಂದೂ ಸ್ಥಾನವನ್ನ ಗೆಲ್ಲಬಾರದು. ಕಾಂಗ್ರೆಸ್ ವಿರುದ್ದ ಅವರದೇ 35 ಶಾಸಕರು ದಿನಾ ಒಂದು ಡೈಲಾಗ್ ಹೊಡಿತೀದಾರೆ. ಇನ್ನೊಂದು 20 ರಿಂದ 25 ಜನ ಡೈಲಾಗ್ ಹೊಡೆದರೂ ಸರ್ಕಾರದ ಕಥೆ ಮುಗೀತು” ಎಂದು ಕಾಶಂಪೂರ ಹೇಳಿದ್ದಾರೆ.
ಇದೇ ವೇಳೆ ಮಾತನಾಡಿದ ಜೆಡಿಎಸ್ ಶಾಸಕ ಜಿ.ಟಿ.ದೇವೇಗೌಡ ಅವರು, ”ಪಂಪಸೆಟ್ಗಳಿಗೆ ಕರೆಂಟ್ ಇಲ್ಲ, ರೈತರ ಆತ್ಮಹತ್ಯೆ 6ನೇ ಗ್ಯಾರಂಟಿಯಾಗಿದೆ ಎಂದು ರಾಜ್ಯ ಸರ್ಕಾರದ ವಿರುದ್ಧ ಕಿಡಿಕಾರಿದರು.
”ಕಾಂಗ್ರೆಸ್ ಸರ್ಕಾರ ಒಂದು ಕಾಳು ಅಕ್ಕಿಯನ್ನೂ ಕೂಡ ಕೊಟ್ಟಿಲ್ಲ. ಗೃಹಲಕ್ಷ್ಮೀ, ಅನ್ನಭಾಗ್ಯ ಯೋಜನೆ ಎಲ್ಲವೂ ಬೋಗಸ್” ಎಂದು ವಾಗ್ದಾಳಿ ನಡೆಸಿದರು.
”ಪಂಚ ರಾಜ್ಯಗಳ ವಿಧಾನಸಭಾ ಚುನಾವಣೆಗೆ ಕರ್ನಾಟಕದಿಂದ ಹಣ ಹೋಗುತ್ತಿದೆ. ಚುನಾವಣೆಗಾಗಿ ಲಂಚದ ದುಡ್ಡನ್ನು ತೆಗೆದುಕೊಂಡು ಹೋಗುತ್ತಿದ್ದಾರೆ ಎಂದು ಆರೋಪಿಸಿದ ಜಿಟಿಡಿ, ಯಾರು ಏನೇ ಎನ್ನಲಿ ಮತ್ತೆ ಮೋದಿಯನ್ನು ಪ್ರಧಾನಿ ಮಾಡೋಣ” ಎಂದು ಜಿಟಿಡಿ ಹೇಳಿದರು.