ಸೊಳ್ಳೆಗಳ ಕಡಿತದಿಂದ ಬರುವ ಮಲೇರಿಯಾ ರೋಗ ಬರದಂತೆ ಜನರು ಎಚ್ಚರ ವಹಿಸಬೇಕಿದೆ ಎಂದು ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಎಸ್. ಡಿ. ಬೆನ್ನೂರ ಸಲಹೆ ನೀಡಿದರು.
ಶ್ರೀರಂಗಪಟ್ಟಣ ತಾಲೂಕಿನ ಎಂ. ಶೆಟ್ಟಹಳ್ಳಿಯಲ್ಲಿ ತಾಲೂಕು ಆಡಳಿತ, ತಾಲೂಕು ಆರೋಗ್ಯ ಅಧಿಕಾರಿಗಳ ಕಚೇರಿ, ಪ್ರಾಥಮಿಕ ಆರೋಗ್ಯ ಕೇಂದ್ರ ಕೆ. ಶೆಟ್ಟಹಳ್ಳಿ ಇವರ ಸಂಯುಕ್ತ ಆಶ್ರಯದಲ್ಲಿ ನಡೆದ “ವಿಶ್ವ ಸೊಳ್ಳೆ ದಿನಾಚರಣೆ” ಕಾರ್ಯಕ್ರಮ ಆಚರಿಸಲಾಯಿತು.
ಸೊಳ್ಳೆಗಳ ಬೆಳವಣಿಗೆ ಹಂತಗಳಾದ ಮೊಟ್ಟೆಗಳ ಹಂತ, ಲಾರ್ವಾ ಹಂತ , ಫ್ಯೂಪಾ ಹಂತ ಹಾಗೂ ವಯಸ್ಕರ ಸೊಳ್ಳೆಗಳ ಪ್ರಾತ್ಯಕ್ಷಿಕೆ ಮೂಲಕ ವಿಶ್ವ ಸೊಳ್ಳೆ ದಿನಾಚರಣೆಯ ಔಚಿತ್ಯದ ಕುರಿತು ತಿಳಿಸಿದರು. ಸೋಂಕಿತ ಹೆಣ್ಣು ಅನಾಫಿಲಿಸ್ ಸೊಳ್ಳೆಗಳಿಂದ ಮಲೇರಿಯಾ ರೋಗವು ಹರಡುತ್ತದೆ ಎಂಬುದನ್ನು ಕಂಡುಹಿಡಿದ ವಿಜ್ಞಾನಿ ಸರ್ ರೊನಾಲ್ಡ್ ರಾಸ್ ಅವರನ್ನು ಈ ಸಂದರ್ಭದಲ್ಲಿ ಸ್ಮರಿಸಿದರು .
ಜಾಗೃತಿ ಜಾಥಾಗೆ ತಹಸೀಲ್ದಾರ್ ಶ್ವೇತ ರವೀಂದ್ರ ಹಾಗೂ ಎಂ. ಶೆಟ್ಟಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಮಂಜುಳಾರವರು ಹಸಿರು ನಿಶಾನೆ ತೋರುವುದರ ಮೂಲಕ ಜಾಥಾಕ್ಕೆ ಚಾಲನೆ ನೀಡಿದರು. ಶೇಷಾದ್ರಿಪುರಂ ಕಾಲೇಜು ಎನ್ಎಸ್ಎಸ್ ಘಟಕದ ಸದಸ್ಯರು, ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳು ಕಡಿತ ಚಿಕ್ಕದು ಭೀತಿ ದೊಡ್ಡದು, ನಿಂತ ನೀರು ಸೊಳ್ಳೆಗಳ ತವರು, ಸೊಳ್ಳೆಗಳ ಜೀವನ ಚಕ್ರ ತಿಳಿಯಿರಿ, ಸೊಳ್ಳೆ ಕಡಿತದಿಂದ ಬರುವ ರೋಗಗಳ ವಿರುಧ್ದ ಜಯಿಸೋಣ ಮುಂತಾದ ಘೋಷಣೆಗಳನ್ನು ಕೂಗುತ್ತ ಗ್ರಾಮಸ್ಥರಲ್ಲಿ ಅರಿವು ಮೂಡಿಸಿದರು. ನಂತರ ಸೊಳ್ಳೆಗಳ ನಿಯಂತ್ರಣ ಕುರಿತು ಪ್ರತಿಜ್ಞಾವಿಧಿ ಭೋದಿಸಲಾಯಿತು.
ಕಾರ್ಯಕ್ರಮದಲ್ಲಿ ತಾಲೂಕು ಆರೋಗ್ಯ ಅಧಿಕಾರಿಗಳಾದ ಡಾ. ಎನ್. ಕೆ.ವೆಂಕಟೇಶ್, ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗಳಾದ ಡಾ. ಉಷಾ ,ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿಗಳಾದ ಜಿ ಮೋಹನ್ ರಾಜು, ಆರೋಗ್ಯ ನಿರೀಕ್ಷಣಾಧಿಕಾರಿ ಎಸ್.ಪಿ.ಫಣೀಂದ್ರ, ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿಗಳಾದ ಜೆ.ಸಿ. ಜಯಲಕ್ಷ್ಮಿ, ಕೆ.ಎಸ್.ಪ್ರೇಮಾ, ಸಮುದಾಯ ಆರೋಗ್ಯ ಅಧಿಕಾರಿಗಳಾದ ಬಸವರಾಜು, ಪ್ರಕೃತಿ ,ಅನಿತಾ ಪ್ರಿಯ ಪ್ರೌಢಶಾಲೆಯ ಮುಖ್ಯೋಪಾಧ್ಯಾಯರಾದ ಮಹೇಶ್ವರಪ್ಪ, ಶೇಷಾದ್ರಿಪುರಂ ಕಾಲೇಜು ಎನ್ಎಸ್ಎಸ್ ಘಟಕದ ಕಾರ್ಯಕ್ರಮ ಅಧಿಕಾರಿಗಳಾದ ಡಾ. ರಾಘವೇಂದ್ರ ಹಾಗೂ ಆಶಾ ಕಾರ್ಯಕರ್ತರು ಹಾಜರಿದ್ದರು.