ಕಳೆದ ಮೂರು ವರ್ಷದಲ್ಲಿ ಕೊಟ್ಟಿದ್ದು ₹ 10 ಕೋಟಿ, ಈ ವರ್ಷ ಕೇವಲ ₹ 50 ಲಕ್ಷ- ಶಾಸಕ ದಿನೇಶ್ ಗೂಳಿಗೌಡ ಪ್ರಶ್ನೆಗೆ ಸಚಿವ ಮಾಧುಸ್ವಾಮಿ ಉತ್ತರ
ಮಂಡ್ಯ ಜಿಲ್ಲೆಯ 48 ಕೆರೆಗಳ ಅಭಿವೃದ್ಧಿಗಾಗಿ ಕಳೆದ ಮೂರು ವರ್ಷದಲ್ಲಿ 10 ಕೋಟಿ ರೂಪಾಯಿ ಖರ್ಚು ಮಾಡಿರುವ ಸರ್ಕಾರ, 2022-23ನೇ ಸಾಲಿನಲ್ಲಿ ಕೆರೆಗಳಲ್ಲಿ ಹೂಳೆತ್ತಲು ‘ಕೆರೆ ಸಂಜೀವಿನಿ ಯೋಜನೆ’ ಅಡಿಯಲ್ಲಿ 50 ಲಕ್ಷ ರೂಪಾಯಿ ಮಾತ್ರ ವ್ಯಯ ಮಾಡಿದೆ.
ಮಂಡ್ಯ ಜಿಲ್ಲೆಯ ಸ್ಥಳೀಯ ಸಂಸ್ಥೆಗಳಿಂದ ಆಯ್ಕೆಯಾಗಿರುವ ವಿಧಾನ ಪರಿಷತ್ ಸದಸ್ಯ ದಿನೇಶ್ ಗೂಳಿಗೌಡ ಅವರು ‘ಮಂಡ್ಯ ಜಿಲ್ಲೆಯಲ್ಲಿರುವ ಒಟ್ಟು ಕೆರೆಗಳ ಸಂಖ್ಯೆ ಹಾಗೂ ಅವುಗಳ ವಿಸ್ತೀರ್ಣ ಸಂಬಂಧ ತಾಲೂಕುವಾರು ವಿವರ ನೀಡಬೇಕು’ ಎಂದು ವಿಧಾನ ಪರಿಷತ್ ಕಲಾಪದಲ್ಲಿ ಪಶ್ನಿಸಿದ್ದರು. ಅವರ ಪ್ರಶ್ನೆಗೆ ಉತ್ತರಿಸಿದ ಸಣ್ಣ ನೀರಾವರಿ ಮತ್ತು ಕಾನೂನು, ಸಂಸದೀಯ ವ್ಯವಹಾರಗಳ ಸಚಿವ ಜೆ. ಮಾಧುಸ್ವಾಮಿ, “ಈ ವರ್ಷ ಜಿಲ್ಲೆಯ ಕೆರೆಗಳ ಅಭಿವೃದ್ಧಿಗೆ 50 ಲಕ್ಷ ರೂ. ನೀಡಲಾಗಿದೆ’ ಎಂದು ತಿಳಿಸಿದ್ದಾರೆ.
“ಮಂಡ್ಯ ಜಿಲ್ಲೆಯ ಮದ್ದೂರು, ಮಳವಳ್ಳಿ, ಪಾಂಡವಪುರ, ಕೆ.ಆರ್ ಪೇಟೆ, ನಾಗಮಂಗಲ ತಾಲೂಕುಗಳಲ್ಲಿ ಇರುವ 48 ಕೆರೆಗಳು 1598.51 ಹೆಕ್ಟೇರ್ ವಿಸ್ತೀರ್ಣತೆ ಹೊಂದಿದೆ. ಕಳೆದ ಮೂರು ವರ್ಷದಲ್ಲಿ ಕೆರೆಗಳ ದುರಸ್ತಿ ಮತ್ತು ಕೆರೆಗಳ ಆಧುನೀಕರಣ ಕಾಮಗಾರಿಗಾಗಿ ಒಟ್ಟು ರೂ. 10 ಕೋಟಿ ರೂ. ನೀಡಲಾಗಿದೆ. 2022-23ನೇ ಸಾಲಿಗೆ ಮಂಡ್ಯ ಜಿಲ್ಲೆಯ ಕೆರೆಗಳ ಹೂಳೆತ್ತಲು 50 ಲಕ್ಷ ರೂ. ಅನುದಾನ ನೀಡಲಾಗಿದೆ” ಎಂದು ವಿವರಿಸಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿದ ದಿನೇಶ್ ಗೂಳಿಗೌಡ, “ಈ ಅನುದಾನವು ಜಿಲ್ಲೆಯ ಕೆರೆ ಏರಿ ದುರಸ್ತಿ ಕಾಮಗಾರಿ ಪೂರ್ಣಗೊಳಿಸಲು ಸಾಕಾಗುವುದಿಲ್ಲ. ಇನ್ನೂ ಹೆಚ್ಚಿನ ಅನುದಾನ ನೀಡಬೇಕು” ಎಂದು ಸಚಿವರಿಗೆ ಮನವಿ ಮಾಡಿದ್ದಾರೆ.