ಮಂಡ್ಯ ದಸರಾ ಮೂಲಕ ಹೊಸ ಸಾಂಸ್ಕೃತಿಕ ಪರಂಪರೆಗೆ ನಾಂದಿ ಹಾಡಿದ ಮಂಡ್ಯ ಯೂತ್ ಗ್ರೂಪ್ ಈ ಬಾರಿ
ಸರಳವಾಗಿ ದಸರಾ ಆಚರಿಸಿದೆ. ಬರ ಪರಿಸ್ಥಿತಿ, ಕಾವೇರಿ ವಿವಾದದ ಹಿನ್ನೆಲೆಯಲ್ಲಿ ಬನ್ನಿ ಮರಕ್ಕೆ ಸಾಂಪ್ರದಾಯಿಕ ಪೂಜೆ ಸಲ್ಲಿಸಿತು.
ಮಂಡ್ಯ ನಗರದ ಶ್ರೀ ಕಾಳಿಕಾಂಬ ದೇವಸ್ಥಾನದ ಸಮೀಪವಿರುವ ಗಜೇಂದ್ರ ಮೋಕ್ಷ ಕೊಳದ ಬಳಿ ಇರುವ ಬನ್ನಿಮರದ ಬಳಿ ಸೇರಿದ ಗ್ರೂಪ್ನ ಪದಾಧಿಕಾರಿಗಳು, ಬೆಳಗ್ಗೆ 11.30ರ ಸಮಯದಲ್ಲಿ ಬನ್ನಿಮರಕ್ಕೆ ಪೂಜೆ ಸಲ್ಲಿಸಿದರು.
ಗ್ರೂಪ್ ಅಧ್ಯಕ್ಷ ಡಾ.ಅನಿಲ್ ಆನಂದ್ ಮಾತನಾಡಿ, ಬರಗಾಲ, ಕಾವೇರಿ ವಿವಾದ ಎದುರಾಗಿರುವ ಕಾರಣದಿಂದ ಅತ್ಯಂತ ಸರಳವಾಗಿ ಈ ಬಾರಿ ದಸರಾ ಆಚರಿಸಲಾಗುತ್ತಿದೆ. ಜನರು ಸಂಕಷ್ಟದಲ್ಲಿರುವಾಗ ಅದ್ಧೂರಿ ದಸರಾ ಆಚರಣೆ ಮಾಡುವುದು ಸರಿಯಲ್ಲ. ಬರ ಪರಿಸ್ಥಿತಿ ದೂರವಾಗಿ, ಕಾವೇರಿ ಸಮಸ್ಯೆಗೆ ಶಾಶ್ವತ ಪರಿಹಾರ
ದೊರಕಲೆಂದು ಪ್ರಾರ್ಥಿಸುತ್ತಾ ಬನ್ನಿಮರಕ್ಕೆ ಪೂಜೆ ಸಲ್ಲಿಸಿ ಈ ಬಾರಿಯ ದಸರಾ ಅಂತ್ಯಗೊಳಿಸಲಾಗುತ್ತಿದೆ ಎಂದರು.
ಮುಂದಿನ ವರ್ಷ ಜನರಿಗೆ ಎದುರಾಗಿರುವ ಸಂಕಷ್ಟಗಳೆಲ್ಲಾ ದೂರವಾಗಿ, ಉತ್ತಮ ಮಳೆಯಿಂದ ಎಲ್ಲೆಡೆ ಸಮೃದ್ಧಿ ನೆಲೆಸುವಂತಾದರೆ ಅದ್ಧೂರಿಯಾಗಿ ಮಂಡ್ಯ ದಸರಾ ಆಚರಿಸಲಾಗುವುದು ಎಂದು
ಹೇಳಿದರು. ದಸರಾ ಪ್ರಯುಕ್ತ ಬನ್ನಿಪೂಜೆಗೆ ಆಗಮಿಸಿದ್ದವರಿಗೆ ಸಿಹಿ ವಿತರಿಸಲಾಯಿತು.
ಈ ಸಂದರ್ಭದಲ್ಲಿ ಡಾ.ಯಾಶಿಕಾ, ದರ್ಶನ್, ರಾಜಣ್ಣ, ಮಲ್ಲೇಶ್, ನವೀನ್, ಅಪ್ಪಾಜಪ್ಪ, ನಿಂಗೇಗೌಡ,
ಕೃಷ್ಣ ಪ್ರಸಾದ್, ಮಂಜು, ಸೀನಪ್ಪ ಸೇರಿದಂತೆ ಇತರರಿದ್ದರು.