Thursday, September 19, 2024

ಪ್ರಾಯೋಗಿಕ ಆವೃತ್ತಿ

ಕೆ.ಆರ್.ಪೇಟೆ| ಬೆಳೆ ರಕ್ಷಣೆಗೆ ನೀರು ಹರಿಸಲು ಆಗ್ರಹಿಸಿ ಇಂಜಿನಿಯರ್ ಗೆ ದಿಗ್ಬಂಧನ

ಕೆ.ಆರ್.ಪೇಟೆ ತಾಲ್ಲೂಕಿನ ಹೇಮಗಿರಿ ನದಿ ಅಣೆಕಟ್ಟೆ ಕಾಲುವೆಯಿಂದ ವಿಠಲಾಪುರ ಭಾಗದ ಜಮೀನುಗಳಿಗೆ ನೀರು ಹರಿಸಿ ಭತ್ತದ ಫಸಲನ್ನು ಸಂರಕ್ಷಿಸುವಂತೆ ಒತ್ತಾಯಿಸಿ ನೂರಾರು ರೈತರು ಹೇಮಾವತಿ ಜಲಾಶಯ ಯೋಜನೆಯ ನಂ.20 ಉಪವಿಭಾಗ ಕಚೇರಿಗೆ ಮುತ್ತಿಗೆ ಹಾಕಿ, ಸಹಾಯಕ ಕಾರ್ಯಪಾಲಕ ಇಂಜಿನಿಯರ್ ವಿಶ್ವನಾಥ್ ಅವರಿಗೆ ದಿಗ್ಬಂಧನ ವಿಧಿಸಿ ಪ್ರತಿಭಟನೆ ನಡೆಸಿದರು.

ಹೇಮಾವತಿ ಅಣೆಕಟ್ಟೆಯಿಂದ ತ್ರಿಶೂಲ್ ಜಲ ವಿದ್ಯುತ್ ಉತ್ಪಾದನಾ ಘಟಕಕ್ಕೆ ಯಥೇಚ್ಛವಾಗಿ ನೀರು ಹರಿಸುತ್ತಿದ್ದು, ವಿದ್ಯುತ್ ಉತ್ಪಾದನೆಯ ನಂತರ ಬಳಸಿದ ನೀರು ನದಿಯ ಮೂಲಕ ಕೃಷ್ಣರಾಜಸಾಗರ ಜಲಾಶಯಕ್ಕೆ ಸೇರುತ್ತಿದೆ. ಆದರೆ ಹೇಮಗಿರಿ ಅಣೆಕಟ್ಟೆಯ ನಾಲಾ ವ್ಯಾಪ್ತಿಯ ಅಚ್ಚುಕಟ್ಟು ಪ್ರದೇಶದ ನೂರಾರು ಎಕರೆ ಭೂ ಪ್ರದೇಶದಲ್ಲಿ ಕಬ್ಬು ಮತ್ತು ಭತ್ತವನ್ನು ಬೆಳೆಯಲಾಗಿದ್ದು, ಭತ್ತವು ಗರ್ಭ ಕಟ್ಟಿ ತೆನೆಯಾಗುವ ಈ ಸಮಯದಲ್ಲಿ ನಾಲೆಯಲ್ಲಿ ನೀರು ಹರಿಯದಿರುವುದರಿಂದ ಭತ್ತದ ಫಸಲು ಕೈಗೆ ಬಂದದ್ದು ಬಾಯಿಗೆ ಬರದಂತಾಗಿದೆ ಎಂದು ದೂರಿದರು.

ಕಳೆದ ಮೂರು ನಾಲ್ಕು ತಿಂಗಳುಗಳಿಂದ ಬೇಸಾಯ ಮಾಡಿ ಸಾವಿರಾರು ರೂಪಾಯಿ ಹಣವನ್ನು ಖರ್ಚು ಮಾಡಿರುವ ರೈತ ಬಾಂಧವರು ಭತ್ತದ ಫಸಲು ಗರ್ಭ ಕಟ್ಟಿ ಕಾಳಾಗುವ ಸಂದರ್ಭದಲ್ಲಿ ನೀರು ಹರಿಸದೆ ಸಂಕಷ್ಟಕ್ಕೆ ಸಿಲುಕಿದ್ದಾರೆ. ಆದ್ದರಿಂದ ಹೇಮಾವತಿ ಜಲಾಶಯ ಯೋಜನೆಯ ಕಾರ್ಯಪಾಲಕ ಅಭಿಯಂತರರು ಹಾಗೂ ನಂಬರ್ 20 ಉಪವಿಭಾಗ ಕಚೇರಿಯ ಸಹಾಯಕ ಕಾರ್ಯಪಾಲಕ ಅಭಿಯಂತರರು ಹಾಗೂ ಸಹಾಯಕ ಇಂಜಿನಿಯರ್ ಗಳು ನಾಲೆಯಲ್ಲಿ ನೀರು ಹರಿಸಲು ಕ್ರಮ ಕೈಗೊಂಡು ಒಣಗುತ್ತಿರುವ ಭತ್ತದ ಬೆಳೆಯನ್ನು ರಕ್ಷಣೆ ಮಾಡಲು ಮುಂದಾಗಬೇಕು ಎಂದು ಆಗ್ರಹಿಸಿದರು.

ವಿಠಲಾಪುರ, ಕೂಡಲಕುಪ್ಪೆ, ಪರದೇಶಗೌಡನ ಕೊಪ್ಪಲು ಯಗಚಗುಪ್ಪೆ ಗ್ರಾಮಗಳ ವ್ಯಾಪ್ತಿಯ ನೂರಾರು ಎಕರೆ ಭೂ ಪ್ರದೇಶದಲ್ಲಿ ಭತ್ತವನ್ನು ಬೆಳೆದಿರುವ ರೈತಬಾಂಧವರು ಹೇಮಗಿರಿ ನಾಲೆಯಲ್ಲಿ ನೀರು ಹರಿಯದಿರುವುದರಿಂದ ಸಂಕಷ್ಟಕ್ಕೆ ಸಿಲುಕಿದ್ದಾರೆ. ನಾಲೆಯ ನೀರು ನಿರ್ವಹಣಾ ಜವಾಬ್ದಾರಿಯನ್ನು ಹೊತ್ತಿರುವ ಸವಡೆಗಳು ಬೇಜವಾಬ್ದಾರಿತನದಿಂದ ಕೆಲಸ ಮಾಡುತ್ತಿದ್ದು ಈ ಭಾಗದ ಸವಡೆಗಳನ್ನು ಕೂಡಲೇ ಬದಲಾಯಿಸಿ ನಾಲೆಯ ನೀರು ಕೊನೆಯ ಭಾಗದ ಗದ್ದೆಗಳಿಗೆ ಹರಿಯುವಂತೆ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ರೈತ ಮುಖಂಡರಾದ ವಿಠಲಾಪುರ ಸುಬ್ಬೆಗೌಡ, ರಾಜಶೇಖರ್, ನಾರಾಯಣಗೌಡ, ನರಸಿಂಹೇಗೌಡ, ಮೋಹನ, ಪಾಂಡುರಂಗೇಗೌಡ ಸೇರಿದಂತೆ ನೂರಾರು ರೈತರು ಸಹಾಯಕ ಕಾರ್ಯಪಾಲಕ ಅಭಯಂತರ ವಿಶ್ವನಾಥ್ ಅವರಿಗೆ ದಿಗ್ಬಂದನ ಹಾಕಿ, ನೀರಾವರಿ ಇಲಾಖೆ ಇಂಜಿನಿಯರ್ ಗಳ ವಿರುದ್ಧ ದಿಕ್ಕಾರದ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಸಹಾಯಕ ಇಂಜಿನಿಯರ್ ರಾಘವೇಂದ್ರ ಮತ್ತಿತರರು ಉಪಸ್ಥಿತರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!