ಯಾರೇ ಕ್ಯಾಂಡಿಡೇಟ್ ಆದ್ರೂ ಬಿಜೆಪಿ ಪಕ್ಷದ ಸೂಚನೆಯಂತೆ ಕೆಲಸ ಮಾಡ್ತೇನೆ, ಟಿಕೆಟ್ ಆದ ಕೂಡಲೇ ನಾನು ತಾಲೂಕುವಾರು ಸಭೆಗಳನ್ನ ಮಾಡ್ತೇನೆ ಎಂದು ಸಂಸದೆ ಸುಮಲತಾ ಹೇಳಿದ್ದಾರೆ.
ಮಂಡ್ಯದ ಚಾಮುಂಡೇಶ್ವರಿ ನಗರದ ತಮ್ಮನಿವಾಸದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜೆಡಿಎಸ್ ಪಕ್ಷ ಸಭೆ ನಡೆಸಿದ ವಿಚಾರಕ್ಕೆ ಪ್ರತಿಕ್ರಿಯಿಸಿ, ಮೈತ್ರಿ ಧರ್ಮಪಾಲನೆ ಮಾಡಬೇಕು ಎಂದು ಹೇಳಿರೋದು ಒಳ್ಳೆಯ ಬೆಳವಣಿಗೆ ಎಂದರು.
ಹನಕೆರೆ ಗ್ರಾಮದ ಬಳಿ ಅಂಡರ್ ಪಾಸ್ ನಿರ್ಮಾಣಕ್ಕೆ ನಾನು ಎನ್ ಎಚ್ ಎ ಅಧಿಕಾರಿಗಳಿಗೆ ನಾನು ಪತ್ರ ಬರೆದಿದ್ದೆ ಎಂದು ಹೇಳಿ, ಪತ್ರ ಬರೆದಿದ್ದನ್ನ ಓದಿ ಹೇಳಿದ ಅವರು, ಅಂಡರ್ ಪಾಸ್ ವಿಚಾರದಲ್ಲಿ ಸಂಸದರು ಕ್ರೆಡಿಟ್ ತಗೊಳಕೆ ಪ್ರಯತ್ನಿಸುತ್ತಿದ್ದಾರೆ ಎಂದು ಶಾಸಕ ರವಿಕುಮಾರ್ ಹೇಳಿದ್ದಾರೆ. ಆದರೆ ಕ್ರೆಡಿಟ್ ಗಾಗಿ ನಾನು ಈ ಕೆಲಸ ಮಾಡ್ತಿಲ್ಲ. ಹಾಗೊಂದು ವೇಳೆ ಕ್ರೆಡಿಟ್ ತಗೋಳದಾದ್ರೆ ಇಂತ ಕೆಲಸ ಮಾಡಿದ್ದೀನಿ ಎಂದು ಎಲ್ಲಾ ಕಡೆ ಪೋಟೊ ಹಾಕೊತ್ತಿದ್ದೆ ಎಂದು ಹೇಳಿದರು.
ಹೋರಾಟದಲ್ಲಿ ಡಿಕೆ ಸುರೇಶ್ ಭಾಗವಹಿಸಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ಒಂದೇ ಪಕ್ಷದವರಾದ್ದರಿಂದ ಶಾಸಕರ ಜೊತೆಗೆ ಸಂಸದ ಡಿಕೆ ಸುರೇಶ್ ಸಹ ಕುಳಿತಿದ್ದಾರೆ ಅನ್ಸುತ್ತೆ ಎಂದರು.
ನಾನು ಮಂಡ್ಯ ಬಿಟ್ಟು ಹೋಗಲ್ಲ, ಈ ಮಾತುಗಳನ್ನು ಒಂದು ವರ್ಷದಿಂದ ಕೇಳ್ತಿದ್ದೀರಿ.
ಇನ್ನೊಂದೆರಡು ದಿನಗಳು ಅಥವಾ ಒಂದು ವಾರ ಕಾಯಿರಿ ಎಲ್ಲದಕ್ಕೂ ಉತ್ತರ ಸಿಗಲಿದೆ. ನೀವು ನಮ್ಮ ಪಕ್ಷಕ್ಕೆ ಬೇಕು ಮಂಡ್ಯದಲ್ಲಿ ಪಕ್ಷ ಸಂಘಟನೆಗೆ ನೀವು ಬೇಕು ಬಿಜೆಪಿಯವರು ಹೇಳಿದ್ದಾರೆ, ಇನ್ನೊಂದು ವಾರ ಕಾಯಿರಿ ಎಂದು ಹೇಳಿದರು.