ದೇಹವೇ ದೇಗುಲವಾಗಿದ್ದು,ರಕ್ತ ಮನುಷ್ಯನ ಜೀವ ಉಳಿಸುವ ಸಂಜೀವಿನಿಯಾಗಿದೆ ಎಂದು ಭಾರತೀಯ ರೆಡ್ಕ್ರಾಸ್ ಸಂಸ್ಥೆಯ ಸಭಾಧ್ಯಕ್ಷೆ ಮೀರಾಶಿವಲಿಂಗಯ್ಯ ಹೇಳಿದರು.
ಮಂಡ್ಯ ನಗರದ ಜನತಾ ಶಿಕ್ಷಣ ಸಂಸ್ಥೆಯ ಪಿಇಎಸ್ ವಿಜ್ಞಾನ, ಕಲಾ ಮತ್ತು ವಾಣಿಜ್ಯ ಪದವಿ ಕಾಲೇಜು ಆವರಣದಲ್ಲಿ ಪಿಇಎಸ್ ಸಂಸ್ಥೆ ಮತ್ತು ಜೂನ್.17 ರಂದು ಪಿಇಎಸ್ ವಿಜ್ಞಾನ,ಕಲಾ ಮತ್ತು ವಾಣಿಜ್ಯ ಪದವಿ ಕಾಲೇಜಿನ ಯುವ ರೆಡ್ ಕ್ರಾಸ್ ಘಟಕ, ಎನ್ ಎಸ್ ಎಸ್, ಎನ್ ಸಿಸಿ ಹಾಗೂ ರೋವರ್ಸ್ ಇವರ ವತಿಯಿಂದ ನಿತ್ಯ ಸಚಿವ ಕೆ.ವಿ. ಶಂಕರಗೌಡರ 107ನೇ ವರ್ಷದ ಜನ್ಮ ದಿನಾಚರಣೆ ಅಂಗವಾಗಿ ಸ್ವಯಂ ಪ್ರೇರಿತ ಬೃಹತ್ ರಕ್ತದಾನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ರಕ್ತದಾನ ಅತ್ಯಂತ ಶ್ರೇಷ್ಠದಾನವಾಗಿದೆ. ಇನ್ನೊಬ್ಬರಿಗೆ ರಕ್ತದಾನ ಮಾಡಿ ನೆರವಾಗುವ ಮೂಲಕ ಸಾರ್ಥಕತೆ ಪಡೆಯಬಹುದು ಎಂದು ನುಡಿದರು.
ರಕ್ತಕ್ಕೆ ಪರ್ಯಾಯ ಸಂಜೀವನಿ ಇನ್ನೂ ಸಂಶೋಧನೆಯಾಗಿಲ್ಲ. ವಿದ್ಯಾರ್ಥಿಗಳಾದ ನೀವು ಮಾನವೀಯ ಮೌಲ್ಯಗಳನ್ನು ಹೆಚ್ಚಿಸಿಕೊಳ್ಳಿ, ಸಮಾಜಮುಖಿಯಾಗಿ ನಿಲ್ಲುವುದು ಅವಶ್ಯ ಎಂದು ತಿಳಿಸಿದರು.
ಪಿಇಟಿ ಸಂಸ್ಥೆಯ ಇಂಜಿನಿಯರ್ ಕಾಲೇಜು ಅತಿ ಹೆಚ್ಚು ರಕ್ತ ಸಂಗ್ರಹದಲ್ಲಿ ದಾಖಲೆ ಬರೆಯುತ್ತಿತ್ತು.ಆದರೆ ಇಂದು ಪದವಿ ಕಾಲೇಜು ವಿದ್ಯಾರ್ಥಿಗಳು ಈ ದಾಖಲೆ ಮುರಿದು, ಪುರಸ್ಕಾರಕ್ಕೆ ಭಾಜನವಾಗಿದ್ದಾರೆ. ಮತ್ತೇ ಪುರಸ್ಕಾರ ಪಡೆಯಲು ಸಂಕಲ್ಪ ಮಾಡಿ ಎಂದು ನುಡಿದರು.
ಇದೇ ಸಂದರ್ಭದಲ್ಲಿ ಸ್ವಯಂ ಪ್ರೇರಿತ ಬೃಹತ್ ರಕ್ತದಾನ ಕಾರ್ಯಕ್ರಮದಲ್ಲಿ ವಿದ್ಯಾರ್ಥಿ-ವಿದ್ಯಾರ್ಥಿನಿಯರು ರಕ್ತದಾನ ಮಾಡಿ ಮಾನವೀಯತೆ ಮೆರೆದರು. ಮಿಮ್ಸ್ ರಕ್ತನಿಧಿ ಕೇಂದ್ರ ವೈದ್ಯರು ಮತ್ತು ಸಿಬ್ಬಂದಿಗಳು ರಕ್ತವನ್ನು ಸಂಗ್ರಹಿಸಿದರು.
ಪ್ರಾಂಶುಪಾಲ ಡಾ. ಜೆ ಮಹದೇವ, ಯುವ ರೆಡ್ ಕ್ರಾಸ್ ಘಟಕದ ಮುಖ್ಯಸ್ಥ ಪ್ರೊಫೆಸರ್ ಕೆ ಜಯರಾಮ್ , ರೋವರ್ಸ್ ಘಟಕದ ಮುಖ್ಯಸ್ಥರಾದ ಪ್ರೊ.ವೀರೇಶ್, ಎನ್ ಸಿಸಿ ಘಟಕದ ಮುಖ್ಯಸ್ಥ ಶಿವರಾಂ, ಎನ್ ಎಸ್ ಎಸ್ ಕಾರ್ಯಕ್ರಮಾಧಿಕಾರಿ ಪ್ರೊ. ಶಿವಕುಮಾರ್,ಪ್ರೊ. ಡೇವಿಡ್, ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಜಂಟಿ ನಿರ್ದೇಶಕ ರಂಗಸ್ವಾಮಿ, ಕೆ.ಟಿ. ಹನುಮಂತು ಮತ್ತು ಸಿಬ್ಬಂದಿಗಳು ಹಾಗೂ ಹಿರಿಯ ವಿದ್ಯಾರ್ಥಿಗಳು ಮತ್ತು ಕಾಲೇಜಿನ ವಿದ್ಯಾರ್ಥಿಗಳು ಹಾಜರಿದ್ದರು.